ಎಲ್ಲ ಕಡತ ವಿಲೇವಾರಿ ಮಾಡಿದ ಡಿಸಿಎಂ; ವಿವಿಗಳಲ್ಲೂ ಇ- ಆಫೀಸ್ ಜಾರಿ

ಬೆಂಗಳೂರು: ಉನ್ನತ ಶಿಕ್ಷಣ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಮುನ್ನಾ ದಿನವಾದ ಗುರುವಾರ ತಮ್ಮ ಮುಂದೆ ಇದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ.

ಈ ಮೂಲಕ ಅವರು 2020 ವರ್ಷವನ್ನು ಮುಕ್ತಾಯಗೊಳಿಸಿ ಒಂದು ಅರ್ಥಪೂರ್ಣ ಸಾಂಪ್ರದಾಯಕ್ಕೆ ನಾಂದಿ ಹಾಡಿದರಲ್ಲದೆ, ರಾತ್ರಿ ಒಂಭತ್ತು ಗಂಟೆವರೆಗೂ ಗೃಹ ಕಚೇರಿಯಲ್ಲೇ ಕೂತು ಬಾಕಿ ಇದ್ದ ಸುಮಾರು 40 ಕಡತಗಳನ್ನು ವಿಲೇವಾರಿ ಮಾಡುವುದರ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು

2021 ವರ್ಷವನ್ನು ಇ-ಆಫೀಸ್ ವ್ಯವಸ್ಥೆಯ ಮೂಲಕ ನೂತನ ಆರಂಭಕ್ಕೆ ಎದುರು ನೋಡುತ್ತಿದ್ದೇನೆ. ಜನಪರ ಕಾರ್ಯಗಳ ಅನುಷ್ಠಾನಕ್ಕೆ ಈ ರೀತಿಯಲ್ಲಿ ಕ್ಷಿಪ್ರ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲು ಸದಾ ಬದ್ಧನಾಗಿದ್ದೇನೆ. ಇವತ್ತಿನವರೆಗೆ ಇದ್ದ ಎಲ್ಲ ಕಡತ ವಿಲೇವಾರಿ ಮಾಡಿದ್ದು, ನನ್ನ ವ್ಯಾಪ್ತಿಯ ಯಾವುದೇ ಇಲಾಖೆಯಲ್ಲಿ ಯಾವ ಕಡತವೂ ಬಾಕಿ ಬಿದ್ದಿಲ್ಲ. ಇದರಿಂದ ನನ್ನ ಕರ್ತವ್ಯದ ಬಗ್ಗೆ ಸಂಪೂರ್ಣತೆಯ ಭಾವ ಬಂದಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಇ-ಆಪೀಸ್ ಮೂಲಕವೇ ನಡೆಯುತ್ತಿದೆ. ಹೊಸ ವರ್ಷದ ಮೊದಲ ದಿನದಿಂದ ಎಲ್ಲ ವಿಶ್ವವಿದ್ಯಾಲಯಗಳ ವ್ಯವಹಾರಗಳು ಸಂಪೂರ್ಣವಾಗಿ ಇ-ಆಫೀಸ್ ಮೂಲಕವೇ ನಡೆಯುತ್ತವೆ. ಎಲ್ಲ ಕಡತ ಮತ್ತು ಪತ್ರಗಳು ಇ- ಆಫಿಸ್ ಮೂಲಕವೇ ನಡೆಯಲಿದೆ ಎಂದು ಅವರು ತಿಳಿಸಿದರು.

Related posts