ಧರ್ಮಾಧಾರಿತ ಮೀಸಲಾತಿ ನೀಡುವುದು ಸಂವಿಧಾನದ ಆಶಯಗಳಿಗೆ ಸಂಪೂರ್ಣ ವಿರುದ್ಧ ಎಂದ ಅಶೋಕ್

ಬೆಂಗಳೂರು: ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಈ ಮೂಲಕ ಕಾಂಗ್ರೆಸ್‌ ಸರ್ಕಾರ ಜನರ ಹಕ್ಕನ್ನು ಕಸಿದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಬರೆದ ಸಂವಿಧಾನ ಪ್ರಕಾರ ಧರ್ಮಾಧಾರಿತವಾದ ಮೀಸಲು ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್‌ ನಾಯಕರು ಸಂವಿಧಾನದ ಪುಸ್ತಕ ಹಿಡಿದುಕೊಂಡು ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಶೇ.5 ರಷ್ಟು ಮೀಸಲು ಹೆಚ್ಚಿಸಿರುವುದರಿಂದ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ. ಮತಕ್ಕಾಗಿ ಇಂತಹ ನೀಚ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಆರ್‌ಸಿಬಿ ಸಂಭ್ರಮಾಚರಣೆಯಲ್ಲಾದ ಕಾಲ್ತುಳಿತ ದುರಂತವನ್ನು ಮುಚ್ಚಿಹಾಕಲು ಇಂತಹ ವಿವಾದವನ್ನು ಹರಿಬಿಡಲಾಗುತ್ತಿದೆ. ಇದು ನಾಡಿನ ಜನರ ಹಕ್ಕನ್ನು ಸರ್ಕಾರ ಕಸಿದಿದೆ ಎಂದರು.

ಹೀಗೆಯೇ ಮುಂದುವರಿದರೆ ಸಿದ್ದರಾಮಯ್ಯ ಕೇವಲ ಮುಸ್ಲಿಂ ಸಮುದಾಯಕ್ಕೆ ಮೀಸಲಾದ ಮುಖ್ಯಮಂತ್ರಿಯಾಗುತ್ತಾರೆ. ಈ ಹಿಂದೆಯೇ ಮೀಸಲು ಹೆಚ್ಚಳಕ್ಕೆ ಮಾನ್ಯತೆ ಸಿಕ್ಕಿಲ್ಲ. ಈಗ ಹೊಸ ರೀತಿಯ ಮೀಸಲು ತಂದಿದ್ದಾರೆ. ಅಕ್ಟೋಬರ್‌ನಲ್ಲಿ ಕುರ್ಚಿ ಬಿಟ್ಟುಕೊಡಬೇಕೆಂಬ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ. ಮುಸ್ಲಿಮರೆಲ್ಲರೂ ನನ್ನ ಜೊತೆ ಬರಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದರು.

ಅಹಿಂದ’ ದಲ್ಲಿ ‘ಹಿಂದ’ ಮಾಯವಾಯ್ತಾ? ಇದ್ಯಾವ ಸೀಮೆ ಸಾಮಾಜಿಕ ನ್ಯಾಯ ಸಿದ್ದರಾಮಯ್ಯನವರೇ? ವೋಟ್ ಬ್ಯಾಂಕ್ ರಾಜಕಾರಣವನ್ನೇ ಬಂಡವಾಳವಾಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ತನ್ನ ತುಷ್ಟೀಕರಣವನ್ನ ಮುಂದುವರೆಸಲು ದಿನಕ್ಕೊಂದು ಹೊಸ ದಾರಿ ಹುಡುಕಿಕೊಳ್ಳುತ್ತಿದೆ. ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ 4% ಮೀಸಲಾತಿ ನೀಡಿದ ನಂತರ ಈಗ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು 10% ನಿಂದ 15%ಗೆ ಹೆಚ್ಚಿಸಲು ಹೊರಟಿದೆ. ಧರ್ಮಾಧಾರಿತ ಮೀಸಲಾತಿ ನೀಡುವುದು ಸಂವಿಧಾನದ ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧವಾದದ್ದು ಎಂದು ಸ್ವತಃ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರೆ ಹೇಳಿದ್ದರೂ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡಲು ಮುಂದಾಗಿತ್ತು. ಈಗ ಬಡವರಿಗೆ ಮನೆ ಕೊಡುವುದರಲ್ಲಿಯೂ ಮುಸಲ್ಮಾನರಿಗೆ ಆದ್ಯತೆ ಕೊಡಲು ಮುಂದಾಗಿದೆ. ಇದು ಕಾಂಗ್ರೆಸ್‌ ಪಕ್ಷದ ಸಂವಿಧಾನ ವಿರೋಧಿ ಮನಸ್ಥಿತಿಗೆ ಮತ್ತೊಂದು ಸಾಕ್ಷಿ ಎಂದು ದೂರಿದ್ದಾರೆ.

ಅಂದು ಸ್ವಾರ್ಥಕ್ಕಾಗಿ ನೆಹರು ಹಾಗೂ ಜಿನ್ನಾ ಭಾರತವನ್ನು ವಿಭಜಿಸಿದ ರೀತಿ, ಇಂದು ನಾಡದ್ರೋಹಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕರ್ನಾಟಕದಲ್ಲಿ ಧರ್ಮದ ಆಧಾರದ ಮೇಲೆ ಸಮಾಜ ವಿಭಜಿಸಲು ಹೊರಟಿದ್ದಾರೆ. ಈ ಸಂವಿಧಾನ ವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ ಮೀಸಲಾತಿ ಹೆಚ್ಚಳವನ್ನು ಹಿಂಪಡೆಯುವವರೆಗೂ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದರು.

Related posts