ಶಿಮ್ಲಾ: ಉತ್ತರಾಖಂಡದಲ್ಲಿ ನಿರಂತರ ಮಳೆ ಮತ್ತು ಸರಣಿ ಮೇಘಸ್ಫೋಟಗಳಿಂದ ಭೀಕರ ನಾಶ ಸಂಭವಿಸಿದೆ. ವಿಶೇಷವಾಗಿ ರಾಜಧಾನಿ ಡೆಹ್ರಾಡೂನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. 16 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರದಿಂದ ನಿರಂತರ ಮಳೆಯಾಗುತ್ತಿದ್ದು, ಭಾರೀ ಮಳೆಗೆ ರಸ್ತೆ, ಸೇತುವೆ, ಮನೆಗಳು ಕೊಚ್ಚಿಕೊಂಡು ಹೋಗಿದೆ. ನದಿಗಳು ಭೋರ್ಗರೆಯುತ್ತಾ ಪ್ರವಾಹದ ರೂಪ ಪಡೆದಿವೆ. ಪ್ರಾಥಮಿಕ ಅಂದಾಜು ಪ್ರಕಾರ ಸಾವಿನ ಸಂಖ್ಯೆ 25 ಕ್ಕೆ ಏರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸಹಸ್ರಧಾರ ಮತ್ತು ಮಾಲ್ದೇವ್ತಾ ಭೀಕರವಾಗಿ ದುರಂತಕ್ಕೀಡಾಗಿವೆ. ರಿಸ್ಪಾನಾ, ಬಿಂದಾಲ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮನೆಗಳು ಅವಶೇಷಗಳಿಂದ ತುಂಬಿ ಹೋಗಿದ್ದು, ನೂರಾರು ಅಂಗಡಿಗಳು ಮತ್ತು ಹೋಟೆಲ್ಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.