ಬೆಂಗಳೂರು: ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಸಂಘಟನೆಗಳ ನಾಯಕರು, ಒಂದು ವೇಳೆ ಒತ್ತಡಕ್ಕೆ ಮಣಿದು ಚಿತ್ರ ಬಿಡ್ಸುಗಡೆಗೆ ಮುಂದಾದರೆ ಕರ್ನಾಟಕ ಬಂದ್ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ವಾಟಾಳ್ ಪಕ್ಷದ ನಾಯಕರು ಕನ್ನಡ ಭಾಷೆಯ ಕುರಿತು ನಟ ಕಮಲಹಾಸನ್ ನೀಡಿರುವ ಹೇಳಿಕೆಯನ್ನು ಖಂಡಿಸಿದರು. ವಾಟಾಳ್ ನಾಗರಾಜ್ ಮಾತನಾಡಿ ಕಮಲಹಾಸನ್ ಕನ್ನಡದ ಮುಂದೆ ತೀರ ಸಣ್ಣ ವ್ಯಕ್ತಿ, ತಮಿಳುನಾಡಿನಲ್ಲಿ ಅವರ ಜನಬೆಂಬಲ ಇಲ್ಲ, ಪಾರ್ಟಿ ಕಟ್ಟಿ ಸೋತಿದ್ದಾರೆ ಎಂದು ಕುಟುಕಿದರು.
ತಮಿಳಿನಿಂದ ಕನ್ನಡ ಬಂತು ಈ ಮಾತನ್ನ ಆಡಿದ್ದಾರೆ, ಯಾರು ಮಾತನಾಡಿದರು ಎಂಬುದು ಅರ್ಥವಾಗುತ್ತಿಲ್ಲ. ಈ ಪದ ಯಾಕೆ ಉಪಯೋಗಿಸಿದರು ಎಂಬುದು ಅರಿವಾಗುತ್ತಿಲ್ಲ ಎಂದ ಅವರು, ತಮಿಳಿನಿಂದ ಕನ್ನಡ ಹುಟ್ಟಿದ್ದೆ ಎಂದು ಹೇಳಿರುವುದು ಕೆಟ್ಟ ಸಂಸ್ಕೃತಿ, ಅಪರಾಧವಾಗಿದೆ ಎಂದರಲ್ಲದೆ, ಭಾಷೆ ವಿಚಾರದಲ್ಲಿ ರಾಜಿ ಇಲ್ಲ ಎಂದರು.
ಈ ಹಿಂದೆ ಸಿ.ರಾಜಗೋಪಾಲಚಾರಿ ರವರು ಕ್ಷಮಾಪಣೆ ಕೇಳಿದ್ದರು, ಪೆರಿಯಾರ ಕಾಲದಿಂದಲು ಭಾಷ ವಿವಾದವಿದೆ. ತಮಿಳುನಾಡು ಸರ್ಕಾರಕ್ಕೆ ದೇಶ ಒಡೆಯುವ ವಾಸನೆ ಹೋಗಿಲ್ಲ ಎಂದು ಆಕ್ರೋಶ ಹೊರ ಹಾಕಿದ ವಾಟಾಳ್ ನಾಗರಾಜ್, ಜಲ,ನೆಲದ ವಿಷಯದಲ್ಲಿ ರಾಜಿಇಲ್ಲ, ಕಮಲಹಾಸನ್ ಕ್ಷಮಾಪಣೆ ಕೇಳುವವರೆಗೂ ನಾವು ಬಿಡುವುದಿಲ್ಲ. ಅಂತಿಮವಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರ್ನಾಟಕ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.