ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳು… ಕಿಚ್ಚನ ಭಾವುಕ ಮಾತುಗಳು..

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್, ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಪಟ್ಟು ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು, ನಿರ್ದೇಶಕರು, ಬರಹಗಾರರು, ನಿರ್ಮಾಪಕರು ಹಾಗೂ ಕನ್ನಡ ಚಲನಚಿತ್ರೋದ್ಯಮದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ತಮ್ಮ ದೀರ್ಘ ಸಿನಿ ಪ್ರಯಾಣಕ್ಕೆ ಎಲ್ಲರ ಸಹಕಾರ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಮೂರು ದಶಕಗಳ ನಂತರವೂ ಈ ಚಿತ್ರಜಗತ್ತಿನಲ್ಲಿ ನಿಂತಿರುವುದು ಅನಂತ ಕೃತಜ್ಞತೆಯ ವಿಷಯ. ಕನಸುಗಳು, ಅನುಮಾನಗಳು ಮತ್ತು ನಿರೀಕ್ಷೆಗಳೊಂದಿಗೆ ಬಂದ ಒಬ್ಬ ಹುಡುಗನಿಗೆ ಇದು ನಾನು ಊಹಿಸಿದ್ದಕ್ಕಿಂತಲೂ ದೊಡ್ಡ ಅನುಭವವಾಗಿದೆ. ಇದಕ್ಕೆ ಕಾರಣರಾದವರು ಎಲ್ಲರೂ ನೀವು” ಎಂದು ಸುದೀಪ್ ಹೇಳಿದ್ದಾರೆ.

ಅಭಿಮಾನಿಗಳನ್ನು ತಮ್ಮ ಶಕ್ತಿ ಮತ್ತು ಪ್ರೇರಣೆಯಾಗಿ ಉಲ್ಲೇಖಿಸಿರುವ ಅವರು, ನಿರ್ದೇಶಕರು ಮತ್ತು ಬರಹಗಾರರು ತಮ್ಮ ಮೇಲೆ ನಂಬಿಕೆ ಇಟ್ಟು ಹೊಸ ಸವಾಲುಗಳಿಗೆ ಪ್ರೇರೇಪಿಸಿದುದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿರ್ಮಾಪಕರ ಧೈರ್ಯ ಮತ್ತು ನಂಬಿಕೆ ಕನಸುಗಳನ್ನು ಸಾಕಾರಗೊಳಿಸಿತು ಎಂದು ಅವರು ತಿಳಿಸಿದ್ದಾರೆ.

ಸಹನಟರು ಹಾಗೂ ತಂತ್ರಜ್ಞರನ್ನು ಸ್ಮರಿಸಿದ ಸುದೀಪ್, ಸಿನಿಮಾ ಸಂಪೂರ್ಣ ತಂಡದ ಶ್ರಮದ ಫಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಳಕು ವಿಭಾಗದಿಂದ ಹಿಡಿದು ಕ್ಯಾಮೆರಾ, ಕಲಾ, ವೇಷಭೂಷಣ, ಸಂಪಾದನೆ ಸೇರಿದಂತೆ ಎಲ್ಲ ವಿಭಾಗಗಳ ಕೊಡುಗೆಯನ್ನು ಅವರು ಪ್ರಶಂಸಿಸಿದ್ದಾರೆ.

ದೂರದರ್ಶನ ಹಾಗೂ ಮಾಧ್ಯಮಗಳು ತಮ್ಮ ಧ್ವನಿಯನ್ನು ಜನರಿಗೆ ತಲುಪಿಸುವಲ್ಲಿ ನೆರವಾಗಿವೆ ಎಂದು ಹೇಳಿದ ಅವರು, ಕನ್ನಡ ಚಲನಚಿತ್ರ ಭ್ರಾತೃತ್ವವು ತಮಗೆ ಗುರುತು, ಹೆಮ್ಮೆ ಮತ್ತು ಮನೆಯಂತ ಭಾವ ನೀಡಿದೆ ಎಂದು ಹೇಳಿದರು.

ತಮ್ಮನ್ನು ನೆಲೆಗೆಟ್ಟಿಯಾಗಿ ಉಳಿಸಿಕೊಂಡ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ ಸುದೀಪ್, ಮೂರು ದಶಕಗಳ ಸಿನಿ ಜೀವನವು ತಮಗೆ ನಮ್ರತೆಯನ್ನು ಕಲಿಸಿದೆ ಎಂದು ತಿಳಿಸಿದರು. “ಪ್ರತಿಯೊಂದು ಯಶಸ್ಸೂ ತಾತ್ಕಾಲಿಕ. ನನಗೆ ಬಹಳಷ್ಟು ನೀಡಿದ ಈ ಕಲೆಯನ್ನು ಗೌರವಿಸುವ ಹೊಣೆ ನನ್ನದು. ಇನ್ನೂ ಹೆಚ್ಚು ಶ್ರಮಿಸುತ್ತೇನೆ ಮತ್ತು ಸಿನಿಮಾವಿನಿಂದ ಪಡೆದ ಎಲ್ಲವನ್ನೂ ಮರಳಿಸುವ ಪ್ರಯತ್ನ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ. ಸುದೀಪ್ ತಮ್ಮ ಸಿನಿ ಜೀವನವನ್ನು ‘ತಾಯವ್ವ’ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ಆರಂಭಿಸಿದ್ದರು.

Related posts