86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಸಮಾರೋಪ ಸಮಾರಂಭದಲ್ಲಿ ಅಭಿವೃದ್ಧಿ ಮಂತ್ರ

ಗಡಿನಾಡಿನ ಅಭಿವೃದ್ಧಿಗೆ 100 ಕೋಟಿ ರೂ.. ಶಾಸ್ತ್ರೀಯ ಭಾಷೆ ಸಂಶೋಧನೆಗೆ ಸರ್ಕಾರದ ಪ್ರೋತ್ಸಾಹ.. 3 ಕೋಟಿ ವೆಚ್ಚದಲ್ಲಿ ಹಾವೇರಿಯಲ್ಲಿ ಕಸಾಪ ಭವನ.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ..

ಹಾವೇರಿ: ಏಲಕ್ಕಿ ನಾಡು ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮ್ಮೇಳನದ ವೇದಿಕೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದರು.

ಗಡಿನಾಡಿನ ಶಿಕ್ಷಣ,ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂ.ಒದಗಿಸಲಿದೆ.ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಸಾಹಿತಿಗಳ ಸಮಿತಿ ರಚಿಸಲಾಗುವುದು.ಸಮಿತಿ ಸೂಚಿಸುವ ಸಂಶೋಧನಾ ಕಾರ್ಯಗಳಿಗೆ ಬೇಕಾದ ಹಣವನ್ನು ಸರ್ಕಾರ ಒದಗಿಸಲಿದೆ. ಸಮ್ಮೇಳನದ ನೆನಪಿಗೆ ಹಾವೇರಿಯಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಕಸಾಪ ಭವನ ನಿರ್ಮಿಸಿ,ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗಡಿನಾಡಿನ ಶಿಕ್ಷಣ,ಆರೋಗ್ಯ ಮತ್ತು ಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ರೂ. ಒದಗಿಸಲಾಗುವುದು. ಕನ್ನಡಕ್ಕಾಗಿ ಹೋರಾಡಿದ ಹೋರಾಟಗಾರರ ಮೇಲಿರುವ ಕಾಗ್ನಿಜಬಲ್ ಹೊರತುಪಡಿಸಿದ ಉಳಿದ ಎಲ್ಲಾ ಪ್ರಕರಣಗಳನ್ನು ಹಿಂದೆ ಪಡೆಯಲು ಸರ್ಕಾರ ಬದ್ಧವಾಗಿದೆ .2008 ರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿದೆ‌‌.ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ 13.30 ಕೋಟಿ ರೂ.ನೆರವು ದೊರೆತಿದೆ.ಮೈಸೂರು ವಿವಿಯ ದೊಡ್ಡ ಕಟ್ಟಡವೊಂದನ್ನು ಈಗಾಗಲೇ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ. ಶಾಸ್ತ್ರೀಯ ಭಾಷೆ ಕುರಿತ ಸಂಶೋಧನೆ, ಗ್ರಂಥಾಲಯ, ಚರ್ಚೆಗಳಿಗೆ ಮಾರ್ಗದರ್ಶನ ಮಾಡಲು ಸಮ್ಮೇಳನಾಧ್ಯಕ್ಷರ ಮಾರ್ಗದರ್ಶನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸಮಿತಿ ರಚಿಸಲಾಗುವುದು. ಸಮಿತಿ ಸೂಚಿಸುವ ಕಾರ್ಯಗಳಿಗೆ ಎಷ್ಟು ಅನುದಾನ ಬೇಕಾದರೂ ಸರ್ಕಾರ ಒದಗಿಸಲಿದೆ. ಹಾವೇರಿ ಜಿಲ್ಲಾ ಕಸಾಪ ಭವನ ನಿರ್ಮಾಣಕ್ಕೆ 3 ಕೋಟಿ ರೂ.ಒದಗಿಸಲಾಗುವುದು. ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಅಲ್ಲೊಂದು ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಕಸಾಪ ರೂಪಿಸಬೇಕು ಎಂದರು.

ತಾಯಿ ಕನ್ನಡ ಭುವನೇಶ್ವರಿಯ ಒಡಲು ಶ್ರೀಮಂತವಾದುದು.ಇಲ್ಲಿನ ಜ್ಞಾನ, ಸಾಹಿತ್ಯ, ತಂತ್ರಜ್ಞಾನ ಎಲ್ಲವೂ ಸಿರಿವಂತವಾಗಿದೆ. ಕನ್ನಡ ಭಾಷೆಯಲ್ಲಿ ಸ್ಪಷ್ಟತೆ, ನಿಖರತೆ, ಪ್ರಖರತೆಗಳಿವೆ. ಕನ್ನಡದ ಮನಸ್ಸುಗಳು ಸ್ವಚ್ಛ ಹಾಗೂ ಪಾರದರ್ಶಕವಾಗಿವೆ. ಬಹುತೇಕ ಸಾಹಿತ್ಯ ಹೃದಯದಿಂದ ಬಂದಿರುವ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಸತ್ಯದ ದರ್ಶನವಾಗಿದೆ. ಈ ಭಾಷೆಗೆ ಉಜ್ವಲ ಭವಿಷ್ಯವಿದೆ.ಕಾಲ ಕಾಲಕ್ಕೆ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಸಾಗುತ್ತಿದೆ.ಪಶ್ಚಿಮ ಘಟ್ಟದ ನದಿ ಸಂಪತ್ತಿನ ಸಂಪೂರ್ಣ ಪ್ರಯೋಜನ ಪಡೆದರೆ ನಾಡು ಇನ್ನಷ್ಟು ಶ್ರೀಮಂತವಾಗಲಿದೆ. ಕಾನೂನು ತೊಡಕು ನಿವಾರಿಸಿಕೊಂಡು ಮಹಾದಾಯಿ ಯೋಜನೆ, ಕಳಸಾ ಬಂಡೂರಿ ಯೋಜನೆಯಾಗಿ ಅನುಷ್ಠಾನವಾಗಲಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರಿಗೆ ಹೆಚ್ಚಿಸಲು ಶೀಘ್ರ ನ್ಯಾಯಮಂಡಳಿಯ ಅನುಮೋದನೆ ಸಿಗುವ ಭರವಸೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕದ ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.ಮೇಕೆದಾಟು ಯೋಜನೆ ಕೂಡ ಜಾರಿಯಾಗಲಿದೆ.ಎಲ್ಲಾ ಮಾತೃ ಭಾಷೆಗಳಿಗೆ ಸಂವಿಧಾನದ ರಕ್ಷಣೆಯ ಅಗತ್ಯವಿದೆ.ಪ್ರಾಥಮಿಕ ಹಂತದ ಶಾಲಾ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂಬುದು ನ್ಯಾಯಾಲಯದಲ್ಲಿ ವಿಫಲವಾಗುತ್ತಿದೆ. ಬರುವ ದಿನಗಳಲ್ಲಿ ಸಂವಿಧಾನ ರಕ್ಷಣೆ ಪಡೆಯಲು ಶ್ರಮಿಸಲಾಗುವುದು.ಕರ್ನಾಟಕಕ್ಕೆ ಹೊರ ರಾಜ್ಯದ ಜನ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದಾರೆ ಆದರೆ ಕನ್ನಡ ಕಲಿಯುತ್ತಿಲ್ಲ, ಈ ನಾಡಿನಲ್ಲಿ ನೆಲೆಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕೆಂಬ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ.ಕನ್ನಡಕ್ಕಾಗಿ ಗಡಿಯಾಚೆ ಹೋರಾಡಿದ ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಮಾತನಾಡಿ, ನೆಲ,ಜಲ,ಸಂಸ್ಕೃತಿಯ ಅಭಿಮಾನದೊಂದಿಗೆ ನಾವು ಮುನ್ನಡೆಯಬೇಕು. ಸ್ಥಳೀಯ ಭಾಷೆಗಳ ಮಾಧ್ಯಮಗಳಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ದೊರೆಯಬೇಕು ಎಂಬ ಚರ್ಚೆಗಳು ನಡೆದಾಗ, ಕೆಲವರು ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಆ್ಯಂಡ್ ಡಿ)ಗೆ ವ್ಯತ್ಯಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದಾಗ, ಕೇಂದ್ರ ಗೃಹ ಸಚಿವರು ಆಂಗ್ಲಭಾಷೆಯ ಬಳಕೆಯೇ ಇಲ್ಲದ ದೇಶಗಳು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ವಿವರಿಸಿದ್ದನ್ನು ಉದಾಹರಿಸಿ,ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದರು.

ವಿಧಾನಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರತೆಯ ಕೇಂದ್ರ ಸ್ಥಾನವೇ ಮನುಷ್ಯತ್ವ,ಮಾನವೀಯತೆಯಾಗಿದೆ. ರಾಜಕೀಯಲ್ಲಿ  ಜಾತಿ,ಧರ್ಮ, ಭ್ರಷ್ಟಾಚಾರ ಬೆರೆತು ಹೋಗಿದೆ. ಸಾಹಿತಿಗಳು ರಾಜಕಾರಣಿಗಳಿಗೆ ಬುದ್ಧಿ ಹೇಳಿ,ತಿದ್ದುವ ಕಾರ್ಯ ಮಾಡಬೇಕು.ಆದರೆ ವಿಧಾನಸೌಧವನ್ನು ಮೀರಿಸುವ ರೀತಿಯಲ್ಲಿ ಸಾಹಿತ್ಯ ಸಂಘಟನೆಗಳ ಚುನಾವಣೆಗಳು ನಡೆಯುತ್ತಿವೆ ಎಂಬುದನ್ನು ಅಲ್ಲಗಳೆಯಲಾಗದು. ಒಂದು ರಾಜಕೀಯ ಪಕ್ಷ ನೇರವಾಗಿ ಒಂದು ಜಾತಿ,ಧರ್ಮದ ಮತಗಳು ನನಗೆ ಬೇಡ ಎಂದು ಹೇಳಬಹುದು, ಆದರೆ ರಾಜಕಾರಣಿಗಳಂತೆ ಸಾಹಿತಿಗಳು ವರ್ತಿಸಬಾರದು. ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಧರ್ಮಗಳ ಸಾಹಿತಿಗಳನ್ನು ದೂರ ಇಟ್ಟಿರುವುದನ್ನು ಪ್ರತಿಭಟಿಸಿ,ಇಂದು ಬೆಂಗಳೂರಿನಲ್ಲಿ ಜನಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕಸಾಪ ಇಂತಹ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಬಾರದು.ನೆಲ-ಜಲದ ಸಮಸ್ಯೆಗಳ ಪರಿಹಾರಕ್ಕೆ ಸಮ್ಮೇಳನ ಪರಿಹಾರಗಳನ್ನು ಸೂಚಿಸಬೇಕು ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಮ್ಮೇಳನವು ಯಶಸ್ವಿಯಾಗಿ ನಡೆದಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ಸಮ್ಮೇಳನಗಳಿಗೆ ಹಾವೇರಿಯ ಸಮ್ಮೇಳನ ಮಾದರಿಯಾಗುವಂತೆ ನಡೆದಿದೆ. ಸಾಹಿತ್ಯ ಮಾತ್ರ ಈ ಭೂಮಿಯ ಮೇಲೆ ಸದಾಕಾಲ ಶಾಶ್ವತವಾಗಿ ಉಳಿಯಬಲ್ಲದು.ನಮ್ಮತನವನ್ನು ಜಾಗೃತಗೊಳಿಸಿ, ಮುನ್ನಡೆಸುವ ಶಕ್ತಿ ಸಾಹಿತ್ಯಕ್ಕಿದೆ. ನಾಡಿನ ಸಾಹಿತಿಗಳು ನಮ್ಮ‌ ನೆಲ ಜಲದ ಶ್ರೀಮಂತಿಕೆ,ಹಿರಿಮೆ,ಗರಿಮೆಗಳನ್ನು ಜಗತ್ತಿಗೆ ಸಾರಿದ್ದಾರೆ.ಸಾಹಿತ್ಯವು ಮನುಷ್ಯರನ್ನು ಬೆಸೆದು ಎಲ್ಲರನ್ನೂ ಒಗ್ಗೂಡಿಸಬೇಕು. ಭಾರತದ ಸಂಸ್ಕೃತಿ,ಪರಂಪರೆಗೆ ಧಕ್ಕೆ ತರಲು ಯತ್ನಿಸುವವರಿಗೆ ಸಾಹಿತ್ಯ ಕ್ಷೇತ್ರ ಎಚ್ಚರಿಕೆ ನೀಡಬೇಕು ಎಂದರು.

ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಮಾತನಾಡಿ, ಸಂತ ಶಿಶುನಾಳ ಶರೀಫರ ನಾಡಿನಲ್ಲಿ ಸಹಬಾಳ್ವೆಯ ನೆಲದಲ್ಲಿ ಯಾವುದೇ ಧರ್ಮದವರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ. ಈ ಸಮ್ಮೇಳನದಲ್ಲಿ 11 ಜನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ,ಕನ್ನಡವೇ ಇಲ್ಲಿ ಪ್ರಧಾನ ಯಾವುದೇ ಧರ್ಮ, ಜಾತಿಯ ಸಮ್ಮೇಳನವಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ,ಕೃಷಿ ಸಚಿವರಾದ ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್,  ಬಿ.ಸಿ.ನಾಗೇಶ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದರಾದ ಪ್ರೊ.ಐ.ಜಿ.ಸನದಿ, ಮಂಜುನಾಥ ಕುನ್ನೂರ, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಆರ್.ಶಂಕರ್, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಡಿ.ಎಂ.ಸಾಲಿ, ಬಸವರಾಜ ಶಿವಣ್ಣವರ, ರುದ್ರಪ್ಪ ಲಮಾಣಿ , ಬಿ.ಹೆಚ್.ಬನ್ನಿಕೋಡ, ಯು.ಬಿ.ಬಣಕಾರ, ಸೋಮಣ್ಣ ಬೇವಿನಮರದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ, ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Related posts