‘ಬನವಾಸಿ’ ಅಭಿವೃದ್ಧಿಯ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ

ಶಿರಸಿ: ಐತಿಹಾಸಿಕ ಮಹತ್ವವುಳ್ಳ ಬನವಾಸಿಯ ಸಮಗ್ರ ಅಭಿವೃದ್ಧಿಯ ಮೂಲಕ ಯಾತ್ರಾ ಹಾಗೂ ಐತಿಹಾಸಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ “ಕಂದಬೋತ್ಸವ-2023” ಉದ್ಘಾಟಿಸಿದ ಸಿಎಂ, ಪುರಾತನ ದೇವಾಲಯಗಳ ವಿಶೇಷ ಕಾರಿಡಾರ್ ನಿರ್ಮಾಣ ಕುರಿತು ಮಾತನಾಡಿದರು‌. ಮುಂಡಗೋಡ ಮತ್ತು ಬನವಾಸಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ನೀರಾವರಿಗೆ ಕೊರತೆಯಾಗದಂತೆ ಬನವಾಸಿ ಏತ ನೀರಾವರಿ ಯೋಜನೆಯ ಮೂಲಕ , 62 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಾಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ರಾಜ್ಯವನ್ನಾಳಿದ ಶ್ರೇಷ್ಠ ಆಡಳಿತಗಾರರ ಕದಂಬರು,ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರ ಸಾಮ್ರಾಜ್ಯದ ಗತವೈಭವವನ್ನು ಪರಿಚಯಿಸುವ ಯೋಜನೆಗೆ ವಿಶೇಷ ಅನುದಾನವನ್ನು ಮೀಸಲಿರಿಸಿದೆ. ಆ ಕಾಲದ ಐತಿಹಾಸಿಕ ಮಹತ್ವವುಳ್ಳ ಪುರಾತನ ದೇವಾಲಯಗಳ ವಿಶೇಷವಾದ ಕಾರಿಡಾರ್ ನ್ನು ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗುವುದು. ಆದಿಕವಿ ಪಂಪ ಕವಿಯ ಹುಟ್ಟೂರು, ಅಣ್ಣಿಗೇರಿಯ ಅಭಿವೃದ್ಧಿಗಾಗಿ ಹೆಚ್ಚಿನ ಗಮನ ನೀಡಲಾಗಿದೆ ಎಂದರು.

ಬನವಾಸಿಯಲ್ಲಿ ಕನ್ನಡ ಭಾಷೆಗೆ ಮುನ್ನುಡಿ :

ಕದಂಬರು ಇಲ್ಲದೇ ಕರ್ನಾಟಕದ ಇತಿಹಾಸ ಪೂರ್ಣವಾಗುವುದಿಲ್ಲ. ಪರಕೀಯರ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಮಯೂರವರ್ಮ ಕದಂಬರ ಸಾಮ್ರಾಜ್ಯವನ್ನು ಸ್ಥಾಪಿಸಿ, ಬನವಾಸಿಯನ್ನು ತನ್ನ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿದರು. ಬನವಾಸಿ, ಕನ್ನಡ ನಾಡಿನ ಪ್ರಥಮ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ಕನ್ನಡ ಆದಿಕವಿ ಪಂಪರು, ಬನವಾಸಿಯ ನಾಡಿನಲ್ಲಿ ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಭಾಷೆಗೆ ಮುನ್ನುಡಿ ಬರೆದರು. ಇಲ್ಲಿನ ಅಲ್ಲಮಪ್ರಭುಗಳ ಶ್ರೀಮಠವಿದ್ದು, ಅಲ್ಲಮಪ್ರಭುಗಳ ವಿಚಾರಧಾರೆಗಳು ಮಾರ್ಗದರ್ಶಿಯಾಗಿದೆ. ಮಧುಕೇಶ್ವರ ದೇವಸ್ಥಾನ ಕದಂಬರ ರಾಜ ವೈಭವ, ಶಿಲ್ಪಕಲೆಯನ್ನು ಬಿಂಬಿಸುವ ಐತಿಹಾಸಿಕ ಪುರಾತನ ದೇವಸ್ಥಾನವಾಗಿದೆ. ಗತವೈಭವ ಹೊಂದಿರುವ ಬನವಾಸಿ ಇಂದು ಕೃಷಿಯ ನಾಡಾಗಿದ್ದು, ಫಲವತ್ತಾದ ಭೂಮಿಯನ್ನು ಹೊಂದಿದೆ ಎಂದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ್ ಹೆಬ್ಬಾರ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts