ಕಾವೇರಿ ಕಿಚ್ಚು; ಸರ್ಕಾರದ ವಿರುದ್ದ ರೈತರ ರೊಚ್ಚು; ರಾಜ್ಯಾದ್ಯಂತ ಸಂಸದರ ಕಚೇರಿಗಳಿಗೆ ಲಗ್ಗೆ

ಮೈಸೂರು: ರಾಜ್ಯದಲ್ಲಿ ಕಾವೇರಿ ಕಿಚ್ಚು ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ಸವಾಲೆಂಬಂತಾಗಿದೆ. ಸರ್ಕಾರದ ವಿರುದ್ದ ರೈತರ ರೊಚ್ಚುಗೆದ್ದಿದ್ದು ರಾಜ್ಯಾದ್ಯಂತ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿವೆ. ರಾಜ್ಯಾದ್ಯಂತ ಸಂಸದರ ಕಚೇರಿಗಳಿಗೂ ಲಗ್ಗೆ ಹಾಕಿ ಕೇಂದ್ರದಲ್ಲಿ ರಾಜ್ಯದ ಪರ ಧ್ವನಿ ಎತ್ತುವಂತೆ ಒತ್ತಡ ಹೇರುವ ಪ್ರಯತ್ನವೂ ನಡೆಯಿತು.

ಕರ್ನಾಟಕದ ವಿವಿಧ ಜಿಲ್ಲೆಗಳ ಲೋಕಸಭಾ ಸದಸ್ಯರ ಕಚೇರಿ ಮುಂದೆ ಬೆಳಿಗ್ಗೆಯೇ ಜಮಾಯಿಸಿದ ರೈತ ಸಂಘಟನೆಗಳ ಕಾರ್ಯಕರ್ತರು, ಪ್ರತಿಭಟನೆ ನಡೆಸಿ ಒತ್ತಾಯ ಪತ್ರ ಸಲ್ಲಿಸಿದರು.

ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ ಧಾರವಾಡ, ಬೆಳಗಾವಿ, ಗುಲ್ಬರ್ಗ, ಗದಗ್ ಜಿಲ್ಲೆಗಳ ಲೋಕಸಭಾ ಸದಸ್ಯರ ಕಚೇರಿ ಮುಂದೆ ರಾಜ್ಯ ರೈತ ಸಂಘಟನೆ ಒಕ್ಕೂಟ, ಕನ್ನಡ ಪರ ಸಂಘಟನೆಗಳು ರಾಜ್ಯ ಕಬ್ಬು ಬೆಳೆಗಾರ ಸಂಘ ಪ್ರತಿಭಟನೆ ನಡೆಸಿತು.  ತಾವು ಲೋಕಸಭಾ ಸದಸ್ಯರಾಗಿ ಕೂಡಲೇ ರೈತರ  ಒತ್ತಾಯಗಳ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆದು ಪ್ರತಿಕ್ರಿಯೆ ನೀಡಬೇಕೆಂದು ರೈತ ಮುಖಂಡರು ಆಗ್ರಹಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ರಾಜ್ಯದಲ್ಲಿ ಬರಗಾಲ ಸೃಷ್ಟಿಯಾಗಿದ್ದರೂ ಕಾವೇರಿ ಕೊಳ್ಳದ ಜಲಾಶಯಗಳ ನೀರು ಖಾಲಿಯಾಗುತ್ತಿದ್ದರೂ ಜನಪ್ರತಿನಿಧಿಗಳು ರಾಜ್ಯದ ಒಳಿತಿಗಾಗಿ ಪರಿಣಾಮಕಾರಿ ಕೆಲಸ ಮಾಡಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು.

ಮಹದಾಯಿ ನದಿ ನೀರಿನ ವಿವಾದ ಕುರಿತು ಯಾವುದೇ ಗಂಭೀರ ಚಿಂತನೆ ನಡೆಯುತ್ತಿಲ್ಲ. ಈ ಬಗ್ಗೆ ಯಾವುದೇ ಮಾತನಾಡದೆ ಮೂಕರಂತೆ ಇರುವ ತಮ್ಮ ಕಚೇರಿ ಮುಂದೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರ ಕಚೇರಿ ಮುಂದೆ 4ರಂದು ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಪತ್ರ ಸಲ್ಲಿಸಲು ಕರೆ ನೀಡಲಾಗಿದ್ದ ಕಾರಣ ಇಂದು ಒತ್ತಾಯ ಪತ್ರ ಸಲ್ಲಿಸುತ್ತಿದ್ದೇವೆ ಎಂದು ರೈತ ನಾಯಕರು ತಿಳಿಸಿದರು.

ರೈತರ ಪ್ರಮುಖ ಹಕ್ಕೊತ್ತಾಯಗಳು:

  1. ಕಬಿನಿ ಕಾವೇರಿ ನೀರು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರನ್ನ ಬಲಿಕೊಟ್ಟಿರುವ ರಾಜ್ಯ ಸರ್ಕಾರ ಕೂಡಲೇ ಜಲಾಶಯದಿಂದ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಬೇಕು, 

  2. ಕಾವೇರಿಕೊಳ್ಳದ ಹೆಚ್ಚುವರಿ ನೀರನ್ನು ಸಂಕಷ್ಟ ಕಾಲದಲ್ಲಿ ಬಳಸಿಕೊಳ್ಳಲು ಸಮುದ್ರಕ್ಕೆ ಹರಿಯುವ ಹೆಚ್ಚುವರಿ ಸಂಗ್ರಹಿಸಿಟ್ಟಿಕೊಳ್ಳಲು ಮೇಕೆದಾಟು ಜಲಾಶಯ ಯೋಜನೆ ಕೂಡಲೇ ಕೈಗೆತ್ತಿಕೊಳ್ಳಬೇಕು

  3. ಮಹದಾಯಿ ನದಿ ನೀರಿನ ವಿವಾದ ಕೂಡಲೇ ಬಗೆಹರಿಸಿ ಯೋಜನೆ ಪೂರ್ಣಗೊಳಿಸಿ ಅಚ್ಚುಕಟ್ಟು ಭಾಗದ ನೀರಿನ ಸಮಸ್ಯೆ ಬಗೆಹರಿಸಬೇಕು.

  4. ಕಬ್ಬು ಬೆಳೆಗಾರರಿಗೆ ಬರಬೇಕಾದ ಹಿಂದಿನ ವರ್ಷದ ಬಾಕಿ ಹೆಚ್ಚುವರಿ 150ರೂ ಸಕ್ಕರೆ ಕಾರ್ಖಾನೆಗಳಿಂದ ಕೂಡಿಸಬೇಕು.

  5. ಪ್ರಸಕ್ತ ಸಾಲಿನ 2023- 24ನೇ ಸಾಲಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬರದಿಂದ ಕಬ್ಬಿನ ಉತ್ಪಾದನಾ ಇಳುವರಿ ಕಡಿಮೆಯಾಗಿದೆ ಆದ್ದರಿಂದ ಕಬ್ಬಿನ ದರ ಏರಿಕೆ ಟನಗೆ ನಾಲ್ಕು ಸಾವಿರ ನಿಗದಿ ಮಾಡಬೇಕು.

  6. ಕೃಷಿ ಪಂಪ್ಸೆಟ್ಟುಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ತಪ್ಪಿಸಿ ಹಗಲು ಹೊತ್ತಿನಲ್ಲಿ 12 ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು ಕೃಷಿ ಪಂಫಸೆಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿರುವುದನ್ನು ಕೈ ಬಿಡಬೇಕು

  7. ಮಳೆ ಅಭಾವದಿಂದ ರೈತ ಬಿತ್ತಿದ ಬೀಜ ಸತ್ತಿದೆ, ಅಂತರ್ಜಲ ಕುಸಿದಿದೆ ರಾಜ್ಯದಲ್ಲಿ ಬರಫಿಡಿತ ಪ್ರದೇಶಗಳ ಜನ ಜನವಾರಗಳ ರಕ್ಷಣಾತ್ಮಕ ಕ್ರಮ ಮಾಡದೆ ನಿರ್ಲಕ್ಷ ತೋರಿಸುತ್ತಿರುವ ರಾಜ್ಯ ಸರ್ಕಾರ ಕೂಡಲೇ ಬರ ಪಿಡಿತ ಪ್ರದೇಶಗಳ ಬರ ಘೋಷಣೆ ಮಾಡಿ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು

  8. ರಾಜ್ಯ ಬಜೆಟ್ನಲ್ಲಿ ಕೃಷಿಗೆ ಸುಮಾರು ಸುಮಾರು 12 ಸಾವಿರ ಕೋಟಿ ಅನುದಾನ ಕಡಿತ ಮಾಡಿರುವ ರೈತ ವಿರೋಧಿ ಧೋರಣೆ ನಿಲ್ಲಬೇಕು.

    ಕೇಂದ್ರ ಸರ್ಕಾರ ಅಕ್ಕಿ, ಸಕ್ಕರೆ, ಈರುಳ್ಳಿ, ರಪ್ತು ನಿಷೇಧ ಮಾಡಿರುವುದನ್ನ ಖಂಡಿಸುತ್ತೇವೆ, ತಕ್ಷಣವೇ ಕೃಷಿ ಉತ್ಪನ್ನಗಳಿಗೆ ಎಂ ಎಸ್ ಪಿ ಖಾತರಿ ಕಾನೂನ ಜಾರಿಗೆ ತರಬೇಕು

  9. ಹತ್ತಾರು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ಬಗರಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು

  10. ಬ್ಯಾಂಕುಗಳು ಕೃಷಿ ಸಾಲ ನೀಡುವಾಗ ರೈತರಿಗೆ ಸಿಬಿಲ್ ಸ್ಕೋರ್ ಎಂದು ಆಗುತ್ತಿರುವ ಕಿರುಕುಳ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಬೇರೆ ಬೇರೆ ಮಾರ್ಗದಲ್ಲಿ ರೈತರಿಗೆ ನಡೆಸುತ್ತಿರುವ ಅನ್ಯಾಯ ತಪ್ಪಿಸಬೇಕು

ರೈತ ಸಂಘಟನೆಗಳ ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಬಸವರಾಜ್ ಪಾಟೀಲ್ ಗುರುಸಿದ್ದಪ್ಪ, ರಮೇಶ್ ಉಗಾರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜೈಕರ್ನಾಟಕ ಜನಪರ ವೇದಿಕೆ ಕುಮಾರಸ್ವಾಮಿ, ಉಳುವಪ್ಪ ಬಳಗೇರ, ಪರಶುರಾಮ್, ಕಮಲಮ್ಮ ಮೊದಲಾದವರು ಈ ಹೋರಾಟದ ನೇತೃತ್ವ ವಹಿಸಿದ್ದರು.

Uncategorized

Related posts