ಬೆಂಗಳೂರು: ರಾಜ್ಯದಲ್ಲಿನ ಉಪಚುನಾವಣೆಯ ಫಲಿತಾಂಶವು ಪ್ರದೇಶ ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿದೆ. ಮಹಾ ತೀರ್ಪನ್ನು ಸ್ವಾಗತಿಸಿರುವ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ರಾಜ್ಯದ 3 ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನೀಡುವ ಮೂಲಕ ಮತದಾರರು ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ದ್ವೇಷಪೂರಿತ ಭಾಷಣಗಳನ್ನು ತಿರಸ್ಕರಿಸಿ, ಸುಳ್ಳು ಪ್ರಚಾರಗಳಿಗೆ ಒಳಗಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ನಾಯಕತ್ವಕ್ಕೆ ಮನ್ನಣೆ ನೀಡಿರುತ್ತಾರೆ. ಕರ್ನಾಟಕದ ಬಿಜೆಪಿ ಬಾಲಭವನದ ನಾಯಕ ವಿಜಯೇಂದ್ರ, ಅಸಮರ್ಥ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಅವಕಾಶವಾದದ ನಾಯಕ ಹೆಚ್.ಡಿ.ಕುಮಾರಸ್ವಾಮಿ ರವರ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲಿನ ಆರೋಪಗಳಿಗೆ ಉಪಚುನಾವಣೆಯ ಫಲಿತಾಂಶದ ಮೂಲಕ ಮತದಾರರು ಉತ್ತರ ನೀಡಿರುತ್ತಾರೆ ಎಂದಿರುವ ರಮೇಶ್ ಬಾಬು , ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರವಾಗಿ ಮತದಾರರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಕರ್ನಾಟಕದ ಭಾರತೀಯ ಜನತಾ ಪಕ್ಷದಲ್ಲಿ ಗುಂಪುಗಾರಿಕೆಯು ಮಿತಿಮೀರಿದ್ದು, ಉಪಚುನಾವಣೆಯ ಫಲಿತಾಂಶ ಬಂಡಾಯ ನಾಯಕರಿಗೆ ಮತ್ತಷ್ಟು ಶಕ್ತಿಯನ್ನು ನೀಡಿರುತ್ತದೆ ಎಂದು ವಿಶ್ಲೇಷಿಸಿರುವ ರಮೇಶ್ ಬಾಬು, ದೆಹಲಿ ದಂಡಯಾತ್ರೆಯ ಮೂಲಕ ಕುರ್ಚಿಯನ್ನು ಉಳಿಸಿಕೊಳ್ಳುವ ವಿಜಯೇಂದ್ರರವರ ಪ್ರಯತ್ನ ವಿಫಲವಾಗಿದ್ದು, ಬೆಳಗಾವಿ ಅಧಿವೇಶನಕ್ಕೆ ಮುಂಚೆಯೇ ರಾಜೀನಾಮೆ ನೀಡುವ ಅನಿವಾರ್ಯತೆ ಉಂಟಾಗಿರುತ್ತದೆ. ಉಪಚುನಾವಣೆಯ ಫಲಿತಾಂಶವು ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ರವರು ತಮ್ಮ ಸ್ಥಾನಗಳನ್ನು ತ್ಯಜಿಸಲು ಮುನ್ನುಡಿ ಬರೆದಿರುತ್ತದೆ. ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿ ಅಥವಾ ಕ್ಷೇತ್ರದ ಅಭಿವೃದ್ಧಿ ವಿಷಯಗಳನ್ನು ಮುನ್ನೆಲೆಗೆ ತರುವ ಬದಲು ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಎಳಸುತನದೊಂದಿಗೆ ಉಪಚುನಾವಣೆಗಳನ್ನು ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಮತ್ತೊಮ್ಮೆ ಮತದಾರರು ತಮ್ಮ ತೀರ್ಪಿನ ಮುಖಾಂತರ ಸರಿಯಾದ ಸಂದೇಶವನ್ನು ನೀಡಿರುತ್ತಾರೆ. ಕರ್ನಾಟಕದ ಪ್ರಗತಿಪಥದ ಮುಂಚೂಣಿಯನ್ನು ವಹಿಸಿಕೊಂಡಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇವರ ವಿರುದ್ಧ ವೈಯಕ್ತಿಕ ತೇಜೋವದೆಗಳನ್ನು ಮಾಡಿಕೊಂಡು, ನಿಂದನೆ ಮತ್ತು ಆರೋಪಗಳನ್ನೇ ತಮ್ಮ ಸಾಧನೆ ಎಂದು ಬಿಂಬಿಸಿಕೊಂಡ ವಿಪಕ್ಷ ನಾಯಕರುಗಳಿಗೆ ಉಪಚುನಾವಣೆಯ ಫಲಿತಾಂಶ ಒಂದು ಪಾಠವಾಗಲಿ. ವಿಪಕ್ಷಗಳ ನಾಯಕರು ಈ ಚುನಾವಣಾ ಸೋಲಿನ ನೈತಿಕತೆಯನ್ನು ಒಪ್ಪಿಕೊಂಡು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದರ ಮೂಲಕ ಉಪಚುನಾವಣೆಯ ಮತದಾರರ ಆದೇಶಕ್ಕೆ ಗೌರವ ಸಲ್ಲಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ ಎಂದವರು ಹೇಳಿದ್ದಾರೆ.
ತನ್ನ ಆಡಳಿತದಲ್ಲಿ ಕೋವಿಡ್ ಹಗರಣ ಒಳಗೊಂಡಂತೆ ಅನೇಕ ಹಗರಣಗಳಿಗೆ ಒಳಗಾಗಿರುವ ಭಾರತೀಯ ಜನತಾ ಪಕ್ಷವು, ನ್ಯಾಯಾಂಗ ತನಿಖೆಯ ಒಪ್ಪಿಕೊಂಡು ಆರೋಪಿತರ ಮೇಲೆ ಕ್ರಮ ಕೈಗೊಂಡು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲಿ. ಧಾರ್ಮಿಕ ವಿಷಯದ ಮೇಲೆ ಜನರ ದಾರಿ ತಪ್ಪಿಸುವ ಬದಲು ಸರ್ಕಾರದ ಪ್ರಗತಿಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ನೀಡಲಿ. ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಈಗ ಜೆಡಿಎಸ್ ಪಕ್ಷಕ್ಕೆ ಬಂದಿರುತ್ತದೆ. ಇವೆಲ್ಲಕ್ಕಿಂತ ಮೊದಲು ರಾಜ್ಯ ಬಿಜೆಪಿ ತನ್ನ ಗುಂಪುಗಾರಿಕೆಯಿಂದ ಆಚೆ ಬರಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಆಶಿಸುತ್ತದೆ ಎಂದು ರಮೇಶ್ ಬಾಬು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.