ಬಿಜೆಪಿಯಲ್ಲಿ ವ್ಯಕ್ತಿಗೆ ಸ್ಥಾನವಲ್ಲ, ಕಾರ್ಯಕರ್ತನಿಗೆ ಸ್ಥಾನ; ‘ಅಭ್ಯರ್ಥಿ ನಾನೇ ಎಂದು’ ಹೇಳಲಾಗಲ್ಲ; ನಳಿನ್ ಕುಮಾರ್ ಕಟೀಲ್

ಮಂಗಳೂರು: ಬಿಜೆಪಿ ಬಂಟ್ವಾಳ ಮಂಡಲ ಕಾರ್ಯ ನಿರ್ವಹಣಾ ತಂಡದ ಸಭೆಯು ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವಪ್ಪ ಪೂಜಾರಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಬಂಟ್ವಾಳ ಮಂಡಲದಲ್ಲಿ ಬಿಜೆಪಿಯ ಇತೀಚಿನ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಭಾಗವಹಿಸಿ ಮಾತಾಡುತ್ತಾ “ಬಿಜೆಪಿ ರಾಷ್ಟ್ರಭಕ್ತ ಕಾರ್ಯಕರ್ತರ ಪಾರ್ಟಿಯಾಗಿದ್ದು, ರಾಷ್ಟ್ರಹಿತಕ್ಕಾಗಿ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಮ್ಮ ಹಿರಿಯರು ಶ್ರಮಿಸಿ ಕಟ್ಟಿದ ಪಾರ್ಟಿ ಬಿಜೆಪಿ. ಹಾಗಾಗಿ ಜವಾಬ್ದಾರಿಯ ಕಾರ್ಯಕರ್ತರಾದ ನಮಗೆ ಕಮಲದ ಚಿಹ್ನೆ ಮಾತ್ರ ನಮ್ಮ ಕಣ್ಮುಂದೆ ಇರುತ್ತೆ ಹೊರತು ವ್ಯಕ್ತಿಯಲ್ಲ ಎಂದರು.

ನಾನೇ ಅಭ್ಯರ್ಥಿ’ ಎಂಬ ವಾದ ಅಪ್ರಸ್ತುತ:

ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರು ಉನ್ನತವಾದ ಸ್ಥಾನವನ್ನು ಪಡೆಯುವುದಕ್ಕೆ ಸಾಧ್ಯ. ಇಲ್ಲಿ ಪಕ್ಷಕ್ಕಾಗಿ ಶ್ರಮಿಸುವ ಕಟಿಬದ್ಧ ಕಾರ್ಯಕರ್ತ ಶಾಸಕನಾಗಬಹುದು ಅಥವಾ ಸಂಸದನಾಗಬಹುದು. ಆದರೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ನಮ್ಮ ಪಾರ್ಟಿಯಲ್ಲಿ ಅಭ್ಯರ್ಥಿ ಯಾರೆಂಬುವುದನ್ನು ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಷ್ಟ್ರೀಯ ಸಮಿತಿ ನಿರ್ಧರಿಸುತ್ತಾರೆ. ಹಾಗಾಗಿ ನಮ್ಮ ಕಣ್ಮುಂದೆ ಇರುವ ಧ್ಯೇಯ ಪಥ ನಮ್ಮ ಸದ್ವಿಚಾರಗಳು ಮತ್ತು ಸದುದ್ಧೇಶಗಳು ರಾಷ್ಟ್ರ ಚಿಂತನೆಯ ಆಧಾರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ರಾಷ್ಷ್ಟವನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ಯುವುದು. ಅದಕ್ಕಾಗಿ ಕಮಲವನ್ನು ಅರಳಿಸುವ ಕಾರ್ಯ ಮಾಡೋಣ ಎಂದರು.

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಪ್ರತಿ ಚುನಾವಣೆಯಿಂದ ಚುನಾವಣೆಗೆ ನಾವು ಬಹಳಷ್ಟು ಪಾಠಗಳನ್ನು ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಮುಂದೆ ಬರುವ ರಾಷ್ಟ್ರದ ಭವಿಷ್ಯ ಬರೆಯುವ ಚುನಾವಣೆಗೆ ಕಾರ್ಯಕರ್ತರು ಈಗಲೇ ಸಿದ್ಧರಾಗಬೇಕು. ಭಾರತ ವಿಶ್ವದಲ್ಲಿ ತಲೆ ಎತ್ತಿ ನಿಲ್ಲ ಬೇಕು. ಅದಕ್ಕಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರಾದ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ ” ಎಂದರು.

ಇಹಲೋಕ ತ್ಯಜಿಸಿದ ರಾಜಕೀಯ ಮುತ್ಸದ್ದಿ, ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವರಾದ ಡಿ.ಬಿ.ಚಂದ್ರೇಗೌಡರಿಗೆ ಮಂಡಲದ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ ದೇವದಾಸ್ ಶೆಟ್ಟಿಯವರ ನುಡಿ ನಮನದೊಂದಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.


ರಾಜ್ಯ ಮಾಧ್ಯಮ ಪ್ರಮುಖರಾದ ವಿಕಾಸ್ ಪುತ್ತೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಜಿಲ್ಲಾ ಪ್ರಭಾರಿಗಳಾದ ರಾಜೇಶ್ ಕಾವೇರಿ, ಬಂಟ್ವಾಳ ಮಂಡಲ ಪ್ರಭಾರಿ ಕೊರಗಪ್ಪ ನಾಯ್ಕ,‌ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ,  ರವೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಕಿಶೋರ್ ಪಲ್ಲಿಪಾಡಿ, ಡೊಂಬಯ ಅರಳ ಸೇರಿದಂತೆ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.‌

Related posts