ಪಕ್ಷಾಂತರಿಗಳಿಗೆ ಶಾಕ್.. 20 ವರ್ಷ ಬಿಜೆಪಿ ಬಾಗಿಲು ಬಂದ್..

ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ವಂಚಿತ ಬಿಜೆಪಿ‌ ನಾಯಕರು ಹೈಕಮಾಂಡ್ ವಿರುದ್ದ ಸಿಡಿದೆದ್ದಿದ್ದಾರೆ. ಅನೇಕ ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಿ ಬೇರೆ ಪಕ್ಷ ಸೇರುತ್ತಿದ್ದು ರಾಜ್ಯ ರಾಜಕಾರಣ ಹೈ ವೋಲ್ಟೇಜ್ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ.

ಇದೇ ವೇಳೆ‌, ಪಕ್ಷ ತ್ಯಜಿಸುವ ನಾಯಕರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಚುನಾವಣೆಯ ಈ ಹೊತ್ತಿನಲ್ಲಿ ಬಿಜೆಪಿ ಬಿಟ್ಟು ಹೋಗುವವರಿಗೆ ಮುಂದಿನ 20 ವರ್ಷದ ತನಕ ಬಿಜೆಪಿ ಬಾಗಿಲು ಮುಚ್ಚಿರಲಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆದ ಅರುಣ್‌ ಸಿಂಗ್‌, ಟಿಕೆಟ್ ಸಿಗದೆ ಬೇಸತ್ತ ನಾಯಕರ ನಡೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. ಯಾರೋ ನಾಲ್ಕು ಜನ ಪಕ್ಷ ಬಿಟ್ಟು ಹೋದರೆ ಬಿಜೆಪಿಗೆ ನಷ್ಟವಿಲ್ಲ. ನಮ್ಮದು ಕಾರ್ಯಕರ್ತ ಆಧಾರಿತ ಪಕ್ಷ. ಹೊಸ ಪೀಳಿಗೆಗೆ ಅವಕಾಶ ನೀಡುವ ಪಕ್ಷ ಎಂದರು.
ಚುನಾವಣೆಯ ಹೊತ್ತಲ್ಲಿ ಪಕ್ಷ ಬಿಟ್ಟು ಹೋದವರನ್ನು ಮತ್ತೆ ವಾಪಸ್‌ ಕರೆಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದವರು ಹೇಳಿದರು.

Related posts