ಯಾತ್ರೆ ಮೂಲಕ ಬಿಜೆಪಿ ವಿಜಯ ಪತಾಕೆ: ಜೆ.ಪಿ.ನಡ್ಡಾ

ಬೆಂಗಳೂರು: ಮಲೆ ಮಾದೇಶ್ವರ ದೇವರ ದರ್ಶನ ಮತ್ತು ಆಶೀರ್ವಾದ ಲಭಿಸಿದೆ. ಯಾತ್ರೆ ಮೂಲಕ ಬಿಜೆಪಿಗೆ ಮತ್ತೆ ಬಹುಮತ ಲಭಿಸಿ ಅಧಿಕಾರ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಿದ ಜೆ.ಪಿ.ನಡ್ಡಾ, ಸೋಲಿಗ ಜನಾಂಗದವರ ಸಂವಾದ ಸಭೆಯಲ್ಲಿ ಮಾತನಾಡಿದರು. 4 ಕಡೆಗಳಿಂದ ಆರಂಭವಾಗುವ ಯಾತ್ರೆ 224 ಕ್ಷೇತ್ರಗಳಲ್ಲೂ ನಡೆಯಲಿದೆ. 150ಕ್ಕೂ ಹೆಚ್ಚು ರೋಡ್ ಷೋ, ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದೇವೆ. ಬೆಳಗಾವಿಯಲ್ಲಿ ಸಚಿವ ರಾಜನಾಥ ಸಿಂಗ್ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮತಬ್ಯಾಂಕ್, ಜಾತಿವಾದ, ಭ್ರಷ್ಟಾಚಾರದ ರಾಜನೀತಿ ಕಾಂಗ್ರೆಸ್‍ನದಾಗಿತ್ತು. ಆದರೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸದೊಂದಿಗೆ ಮೋದಿಜಿ ಅವರು ಸರಕಾರವನ್ನು ಮುನ್ನಡೆಸುತ್ತಿದ್ದು, ದೇಶವು 5ನೇ ಬೃಹತ್ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಹಿಂದೆ ಅದು 10ನೇ ಸ್ಥಾನದಲ್ಲಿತ್ತು ಎಂದು ವಿವರಿಸಿದರು. ಮೊಬೈಲ್ ಉತ್ಪಾದನೆ, ಕೈಗಾರಿಕೆ ಸೇರಿ ಭಾರತದ ಪ್ರಗತಿ ಅತ್ಯದ್ಭುತ ಎಂದು ನುಡಿದರು.

ವಂಚಿತರು, ಶೋಷಿತರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಎಲ್ಲ ವರ್ಗದವರಿಗೆ ಸೌಲಭ್ಯಗಳನ್ನು ನೀಡಲು ನಮ್ಮ ಪಕ್ಷ ಶ್ರಮಿಸುತ್ತಿದೆ. ಇದಕ್ಕೆ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇ ಸಾಕ್ಷಿ ಎಂದು ತಿಳಿಸಿದರು. ಕೇಂದ್ರ- ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಗಮನಿಸಿ ಜನತೆ ಬಿಜೆಪಿಯನ್ನು ಬೆಂಬಲಿಸುವುದು ಖಚಿತ ಎಂದು ತಿಳಿಸಿದರು. ಸಂವಾದದ ಹಿನ್ನೆಲೆಯಲ್ಲಿ ಇಲ್ಲಿನ ಚಿತ್ರಣವನ್ನೇ ಬದಲಿಸಲು ನಾವು ಬದ್ಧತೆ ಪ್ರದರ್ಶಿಸುತ್ತೇವೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಜೆ.ಪಿ.ನಡ್ಡಾ ಅವರು ಬಂದಿರುವುದು ಪಕ್ಷದವರಿಗೆ ಸಂತಸ, ಸಂಭ್ರಮದ ವಿಚಾರವಾಗಿದೆ. 224 ಕ್ಷೇತ್ರಗಳಲ್ಲಿ ಸುಮಾರು 8 ಸಾವಿರ ಕಿಮೀ ಉದ್ದಕ್ಕೆ 4 ರಥಗಳು ಸಂಚರಿಸಲಿವೆ ಎಂದು ವಿವರಿಸಿದರು.

ಭಾಗ್ಯಲಕ್ಷ್ಮಿ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ- ರಾಜ್ಯ ಸರಕಾರಗಳು ಜಾರಿಗೊಳಿಸಿವೆ ಎಂದು ತಿಳಿಸಿದರು. ಪಕ್ಷದ ಸರಕಾರಗಳ ಜನಪರ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಯನ್ನು ಗೆಲ್ಲಿಸುವುದು ಶತಸ್ಸಿದ್ಧ ಎಂದು ತಿಳಿಸಿದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅಲ್ಲಿ ನಾಯಕರೇ ಇಲ್ಲ ಎಂದ ಅವರು, ನಮ್ಮಲ್ಲಿ ಮೋದಿಜಿ, ಅಮಿತ್ ಶಾ ಅವರು ಸೇರಿದಂತೆ ಸಮರ್ಥ ನಾಯಕರಿದ್ದಾರೆ. ಮತ್ತೊಮ್ಮೆ ಬಿಜೆಪಿ ಗೆಲುವು ಖಚಿತ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸೋಲಿಗರ ಸಮುದಾಯಕ್ಕೆ ವಿಶೇಷ ಗಮನ ನೀಡಲಿದ್ದೇವೆ. ಕಾಡಿನಲ್ಲಿ ವಾಸಿಸುವವರಿಗೆ ಸೌಲಭ್ಯ ಕೊಡಲು ಅರಣ್ಯ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗುವುದು ಎಂದು ಪ್ರಕಟಿಸಿದರು.
ಇಲ್ಲಿ ಶೀಘ್ರವೇ ಹೊಸ ಆಸ್ಪತ್ರೆ ತೆರೆಯುತ್ತೇವೆ. ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಅನುದಾನವನ್ನು ಇಲ್ಲಿನ ಮಹಿಳಾ ಸಂಘಕ್ಕೆ ಕೊಡಲಾಗುವುದು. ಸಣ್ಣ, ಅತಿ ಸಣ್ಣ ಕೈಗಾರಿಕೆ ಮಾಡಲು ಗರಿಷ್ಠ ಅನುದಾನ ನೀಡಲಿದ್ದೇನೆ ಎಂದು ತಿಳಿಸಿದರು. ಕಾಡಿನ ಅಂಚಿನಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸುತ್ತೇವೆ ಎಂದು ತಿಳಿಸಿದರು. ಸಾಮಾಜಿಕ ನ್ಯಾಯ ಒದಗಿಸಲು ಬದ್ಧ ಎಂದರು.

ವಿಜಯ ಸಂಕಲ್ಪ ರಥ ಯಾತ್ರೆಗೆ ಮಲೆ ಮಾದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ್ದೇವೆ. ಬಿಜೆಪಿ ಗೆಲುವಿನ ಸಂಕಲ್ಪ ಸಿದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜನಸಂಕಲ್ಪ ಯಾತ್ರೆ ಮೂಲಕ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದರು. ಪಕ್ಷ ಗೆಲುವನ್ನು ಪಡೆದು ಮತ್ತೆ ಅಧಿಕಾರ ಮಾಡಲಿದೆ ಎಂದರು. ಕೇಂದ್ರ- ರಾಜ್ಯ ಸರಕಾರಗಳ ಜನಕಲ್ಯಾಣ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಗೆ ಮತ ಕೊಡಲಿದ್ದಾರೆ ಎಂದು ತಿಳಿಸಿದರು. ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಅವರು ತಿಳಿಸಿದರು. ಜನರ ಆಶೀರ್ವಾದ ಬಿಜೆಪಿಯ ಶಕ್ತಿಯಾಗಲಿದೆ ಎಂದು ನುಡಿದರು.

ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪ್ರಪಂಚದ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಬಿಜೆಪಿ. ಬೇಡರ ಕಣ್ಣಪ್ಪನ ಜಾತಿಗೆ ಸೇರಿದವರು ಸೋಲಿಗರು. ಅವರು ಕಷ್ಟಕರ ಜೀವನ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚು ಶೈಕ್ಷಣಿಕ- ಔದ್ಯೋಗಿಕ ಅನುಕೂಲ ಮಾಡಿಕೊಡಲು ಬದ್ಧತೆಯನ್ನು ಪ್ರದರ್ಶಿಸಲಿದ್ದೇವೆ ಎಂದು ತಿಳಿಸಿದರು. ಈ ಸಮಾಜದ ಧ್ವನಿಯಾಗಲು ನಡ್ಡಾಜಿ ಅವರು ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಸೋಲಿಗರ ಸಮುದಾಯದ ಜಯಮ್ಮ ಅವರು ಮಾತನಾಡಿ, ಮಹಿಳಾ ಸ್ವಸಹಾಯ ಸಂಸ್ಥೆಯಿಂದ ಹಣಕಾಸಿನ ಸೌಕರ್ಯ ಲಭಿಸಿದೆ. ಗುಡಿ ಕೈಗಾರಿಕೆ ತರಬೇತಿಯನ್ನೂ ಕೊಡಬೇಕು. ಆರೋಗ್ಯ ಸೌಕರ್ಯ ನೀಡಬೇಕು ಎಂದು ಮನವಿ ಮಾಡಿದರು. ಹೆರಿಗೆ ಸಂಬಂಧಿತ ಸೌಲಭ್ಯ ನೀಡಬೇಕು; ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಎಂದು ವಿನಂತಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಪದಾಧಿಕಾರಿಗಳು, ಸಚಿವರು, ಸಂಸದರು, ಶಾಸಕರು, ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.

Related posts