ಹನೂರು ಪಟ್ಟಣದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣ; ದಿನೇಶ್ ಗುಂಡುರಾವ್ ಭರವಸೆ

ಹನೂರು : ಪಟ್ಟಣದ ಕೇಂದ್ರ ಸ್ಥಾನದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್.ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪ್ರತಿ ತಾಲೂಕು ಕೇಂದ್ರಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆಗಳು ನಡೆದಿದೆ. ಅದರಂತೆ ನೂತನ ಹನೂರು ತಾಲೂಕಿನಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಿನ ವರ್ಷ ಕ್ರಮ ಕೈಗೊಳ್ಳಲಾಗುವುದು ಇದಲ್ಲದೆ ಹನೂರು ತಾಲೂಕಿನಲ್ಲಿ ಒಂದು ಡಯಾಲಿಸಿಸ್ ಕೇಂದ್ರವನ್ನು ತೆರೆಯಲು ತುರ್ತಾಗಿ ಆದೇಶ ಮಾಡುತ್ತೇನೆ ಹಾಗೂ ಕೌದಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಇದಕ್ಕೂ ಮೊದಲು ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ ಹನೂರು ತಾಲೂಕು ಕೇಂದ್ರವಾಗಿ 5 ವರ್ಷಗಳೇ ಕಳೆದಿದೆ. ಆದರೆ ಇದುವರೆಗೂ ತಾಲೂಕು ಕೇಂದ್ರದಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಸಾಧ್ಯವಾಗಿಲ್ಲ, ಇದಲ್ಲದೆ ನಮ್ಮ ವಿಧಾನಸಭಾ ಕ್ಷೇತ್ರವು ಅತಿ ವಿಸ್ತಾರವಾಗಿರುವುದರಿಂದ ಡಯಾಲಿಸಿಸ್ ತೊಂದರೆ ಇರುವವರು ಕೊಳ್ಳೇಗಾಲ ಹಾಗೂ ಮೈಸೂರು ಚಾಮರಾಜನಗರ ಗ್ರಾಮಗಳಿಗೆ ತೆರಳಬೇಕು. ಆದ್ದರಿಂದ ಹನೂರು, ರಾಮಪುರ, ಮಲೆ ಮಾದೇಶ್ವರ ಬೆಟ್ಟದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಬೇಕು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು, ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಮನವಿ ಮಾಡಿದರು.

ಹನೂರು ತಾಲೂಕು ಕೇಂದ್ರಕ್ಕೆ ಮೊಟ್ಟ ಮೊದಲು ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ಮಾಜಿ ಶಾಸಕ ಆರ್ ನರೇಂದ್ರ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮುಕುಂದವರ್ಮ, ಈಶ್ವರ್, ಜಿಪಂ ಮಾಜಿ ಸದಸ್ಯ ಬಸವರಾಜು, ಚಾಮುಲ್ ನಿರ್ದೇಶಕ ಶಾಹುಲ್ ಅಹಮದ್, ಪಪಂ ಸದಸ್ಯ ಗಿರೀಶ್, ಹರೀಶ್, ಸುದೇಶ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್, ಮುಖಂಡರಾದ ಚಿಕ್ಕ ತಮ್ಮಯ್ಯ, ಮಾದೇಶ್, ಬಸವರಾಜು ,ರವಿ, ಪಾಳ್ಯ ಕೃಷ್ಣ, ಮಂಗಲ ಪುಟ್ಟರಾಜು, ರಮೇಶ್ ಸೆಲ್ವ,ತಾಪಂ ಮಾಜಿ ಸದಸ್ಯ ಜವಾದ್ ಆಹಮದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Related posts