ಬೆಂಗಳೂರು: RCB ಸಂಭ್ರಮಾಚರಣೆ ವೇಳೆ ಸಂಭವಿಸಿರುವ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, ಈ ಭೀಕರ ದುರಂತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
ಕಾಲ್ತುಳಿತ ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೀಡುತ್ತಿರುವ ಹೇಳಿಕೆ ಬಗ್ಗೆ ಸಿ.ಟಿ.ರವಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿನ ಗೆಲುವಿನ ‘ಕ್ರೆಡಿಟ್’ ತೆಗೆದುಕೊಳ್ಳುವ ಹಪಾಹಪಿಯಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ, ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಘಟನೆಯ ಕುರಿತು 18 ಪ್ರಶ್ನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದಿಟ್ಟಿರುವ ಸಿ.ಟಿ.ರವಿ, ಕೇವಲ ಒಂದು ಫ್ರಾಂಚೈಸಿ ಗೆಲುವುವನ್ನು ರಾಜ್ಯ ಸರ್ಕಾರವೇ ಸಂಭ್ರಮಿಸುವ ಅಗತ್ಯ ಏನಿತ್ತು? ಇದು ಸರ್ಕಾರದ ಆದ್ಯತೆಯಾಗಬೇಕಿತ್ತೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿ.ಟಿ.ರವಿ ಅವರು ಸಿಎಂ ಅವರಲ್ಲಿ ಕೇಳಿರುವ 18 ಪ್ರಶ್ನೆಗಳು ಹೀಗಿವೆ:
ಸಾವಿರಾರು ಜನ ಸೇರುವ ನಿರೀಕ್ಷೆ ಇದ್ದರೂ, ಸೂಕ್ತ ಜನಸಂದಣಿ ನಿರ್ವಹಣಾ ಯೋಜನೆ (Crowd Management Plan) ಏಕೆ ರೂಪಿಸಲಾಗಲಿಲ್ಲ? ಸಾವಿರಾರು ಜನ ಸೇರಿದ್ದರೂ, ತುರ್ತು ಸೇವೆಗಳಾದ (ಅಗ್ನಿಶಾಮಕ ದಳ, ಆಂಬ್ಯುಲೆನ್ಸ್, ವೈದ್ಯಕೀಯ ತಂಡ) ಸಂಖ್ಯೆ ಅತ್ಯಂತ ಕಡಿಮೆಯಿತ್ತು ಏಕೆ?
ಗುಪ್ತಚರ ಇಲಾಖೆಯು ಸಾವಿರಾರು ಜನರು ಸೇರುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಲಿಲ್ಲವೇ? ನೀಡಿದ್ದರೂ, ಆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದು ಏಕೆ?
ಕ್ರೀಡಾಂಗಣದ ಸಾಮರ್ಥ್ಯಕ್ಕೆ ಅಧಿಕ ಜನರು ಸೇರುವ ಸಾಧ್ಯತೆಯನ್ನು ಏಕೆ ಅಂದಾಜಿಸಲಾಗಲಿಲ್ಲ? ಇದು ಗಂಭೀರ ನಿರ್ಲಕ್ಷ್ಯವಲ್ಲವೇ?
ಅಪಾರವಾದ ಕ್ರೀಡಾ ಪ್ರೇಮಿಗಳು ಸೇರುವ ನಿರೀಕ್ಷೆ ನಗರದ ಪ್ರತಿಯೊಬ್ಬರಿಗೂ ತಿಳಿದಿತ್ತು, ಆದರೆ ಸರ್ಕಾರ ನಡೆಸುವವರಿಗೆ ಮಾತ್ರ ಎಷ್ಟು ಜನ ಸೇರಬಹುದು ಎಂಬ ಅಂದಾಜು ಇರಲಿಲ್ಲ” ಎಂಬ ನಿಮ್ಮ ಮಾತು ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತಲ್ಲವೇ?
ಕಾರ್ಯಕ್ರಮಕ್ಕೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು (Entry and Exit Points) ಸರಿಯಾಗಿ ನಿರ್ವಹಿಸದಿರಲು ಕಾರಣವೇನು?
ಬೆಂಗಳೂರಿನಂತಹ ನಗರದಲ್ಲಿ ಒಂದೇ ರೀತಿಯ ಎರಡು ದೊಡ್ಡ ಕಾರ್ಯಕ್ರಮಗಳ ಅಗತ್ಯವಿತ್ತೇ? ಇದು ಜನಸಂದಣಿಗೆ ಮತ್ತಷ್ಟು ಕಾರಣವಾಗಲಿಲ್ಲವೇ? ಪೊಲೀಸರು ಬೇಡ ಅಂದರೂ ಪೋಲೀಸರ ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ನಡೆಸಿದ ಉದ್ದೇಶವಾದರೂ ಏನು?
ಈ ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದರು – ಸರ್ಕಾರವೇ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (KSCA) ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಡಳಿತ ಮಂಡಳಿಯೇ? ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಏಕೆ?
ಕೇವಲ ಒಂದು ಫ್ರಾಂಚೈಸಿ ಗೆಲುವುವನ್ನು ರಾಜ್ಯ ಸರ್ಕಾರವೇ ಸಂಭ್ರಮಿಸುವ ಅಗತ್ಯ ಏನಿತ್ತು? ಇದು ಸರ್ಕಾರದ ಆದ್ಯತೆಯಾಗಬೇಕಿತ್ತೇ?
ಆರ್ಸಿಬಿ ಪ್ರಶಸ್ತಿ ಗೆದ್ದ ಹನ್ನೆರಡು ಗಂಟೆಯೊಳಗೆ ವಿಧಾನಸೌಧದ ಮುಂದೆ ಸಮಾರಂಭ ಏರ್ಪಡಿಸುವ ಆತುರವೇನಿತ್ತು? ಡಿ.ಕೆ. ಶಿವಕುಮಾರ್ ಎಲ್ಲಾ ಶ್ರೇಯಸ್ಸು ತನಗೆ ಸಿಗಲಿ ಎಂದು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದಾರಾ?
ಈ ಗೆಲುವಿನ “ಕ್ರೆಡಿಟ್” ತೆಗೆದುಕೊಳ್ಳುವ ಹಪಾಹಪಿ ಸರ್ಕಾರಕ್ಕೆ ಏಕೆ ಬಂತು? ಇದು ರಾಜಕೀಯ ಲಾಭಕ್ಕಾಗಿ ಮಾಡಿದ ಪ್ರಯತ್ನವೇ?
ಕ್ರೀಡಾಭಿಮಾನಿಗಳ ಸಾವಿಗೆ ಸರ್ಕಾರದ ಈ “ಕ್ರಿಮಿನಲ್ ನಿರ್ಲಕ್ಷ್ಯ (Criminal Negligence)” ಮತ್ತು “ಪ್ರಚಾರದ ಹಸಿವು” ಕಾರಣವಲ್ಲವೇ?
ಸರ್ಕಾರ ಕೇವಲ ಭದ್ರತೆ ಒದಗಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಇಂತಹ ಬೃಹತ್ ಕಾರ್ಯಕ್ರಮಕ್ಕೆ ಸೂಕ್ತ ಪರವಾನಗಿ ನೀಡುವುದು ಮತ್ತು ನಿಯಮಾವಳಿಗಳನ್ನು ವಿಧಿಸುವುದು ಸರ್ಕಾರದ ಕರ್ತವ್ಯವಲ್ಲವೇ?
ಕಾಲ್ತುಳಿತ ಸಂಭವಿಸಿದಾಗಲೂ, ಸಂಭ್ರಮಾಚರಣೆಯನ್ನು ಏಕೆ ಮುಂದುವರಿಸಲು ಅವಕಾಶ ನೀಡಲಾಯಿತು? ಅದನ್ನು ತಕ್ಷಣ ನಿಲ್ಲಿಸಬಹುದಿತ್ತಲ್ಲವೇ?
ರಾಜ್ಯದ ಉಪಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರುಸೇರಿದಂತೆ ಇನ್ನು ಹಲವು ಸಚಿವರು ಮತ್ತು ಅಧಿಕಾರಿಗಳು ಕಾರ್ಯಕ್ರಮದ ಸ್ಥಳದಲ್ಲಿದ್ದರೂ, ಪರಿಸ್ಥಿತಿಯನ್ನು ನಿಯಂತ್ರಿಸಲು ಏಕೆ ವಿಫಲರಾದರು? ಅವರ ಹಾಜರಿ ಕೇವಲ ಪ್ರಚಾರಕ್ಕಾಗಿತ್ತೇ?
ಅವಘಡ ಸಂಭವಿಸಿದ ತರುವಾಯವೂ ಕ್ರೀಡಾಂಗಣದೊಳಗೆ ಸಂಭ್ರಮಾಚರಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕಿತ್ತು. ಆದರೆ ಸ್ವತಃ ಉಪಮುಖ್ಯಮಂತ್ರಿಗಳೇ ಸೂತಕದ ಮನೆಯಾಗಿದ್ದ ಸಮಯದಲ್ಲಿ ಮೈದಾನದೊಳಗಿನ ಸಂಭ್ರಮದಲ್ಲಿ ಭಾಗಿಯಾಗಿ ಮೃತಪಟ್ಟವರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ದುಃಖವಾಗಲಿ ಅಥವಾ ನೋವಾಗಲಿ ಇಲ್ಲದಿರುವುದನ್ನುಸತ್ಯವಲ್ಲವೇ?.ಇದು ಸರ್ಕಾರದ, ಸರ್ಕಾರ ನಡೆಸುವವರ ಸಂವೇದನಾ ಶೂನ್ಯತೆಗೆ ಸಾಕ್ಷಿಯಲ್ಲವೇ?
ನೀವು “ಅದು ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮ” ಎಂದು ಸರ್ಕಾರದ ತಪ್ಪನ್ನು ಮುಚ್ಚಿ, ತಮ್ಮ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ಕೀಳು ಮಟ್ಟದ ವರ್ತನೆ ತೋರಿದ್ದೀರಿ,. ಜನ ಸೇರುತ್ತಾರೆ ಎಂದು ಅರಿವಿದ್ದಾಗ ಅಲ್ಲಿ ಬರುವವರಿಗೆ ರಕ್ಷಣೆ ನೀಡಬೇಕಾದ್ದು ಸರ್ಕಾರದ ಕರ್ತವ್ಯ ಎಂಬುದನ್ನು ನೀವು ಮರೆತಿದ್ದಾರೆಯೇ ?
ಈ ದುರ್ಘಟನೆ ಆಕಸ್ಮಿಕವಲ್ಲ, ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಲ್ಲವೇ ?
ಬೇಜವಾಬ್ದಾರಿ ಸರ್ಕಾರದ ವಿರುದ್ಧ ನಮ್ಮ ಆಕ್ರೋಶ ಪ್ರಕಟಿಸುವುದು ನಮ್ಮ ಕರ್ತವ್ಯ. ಸರ್ಕಾರ ತಪ್ಪೆಸಗಿ ಅದನ್ನು ಮುಚ್ಚಿಕೊಳ್ಳಲು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಖಂಡನೀಯ. ಇವರನ್ನು ಪ್ರಶ್ನಿಸುವುದೂ ತಪ್ಪೇ ?