ಸವಿತಾ ಜಾತಿಗಳನ್ನು ದಲಿತ ಸಮುದಾಯಕ್ಕೆ ಸೇರಿಸಲು ಹೆಚ್ಚಿದ ಒತ್ತಡ

ದಾವಣಗೆರೆ: ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲೇ ತಮ್ಮ ಸಮುದಾಯಗಳನ್ನು ದಲಿತ ಸಮುದಾಯವಾಗಿ ಗುರುತಿಸಬೇಕೆಂದು ಸವಿತಾ ಸಮುದಾಯದ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದು, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಸವಿತಾ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಸವಿತಾ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ತಮ್ಮ ಸಮುದಾಯಗಳನ್ನು ದಲಿತ ಸಮುದಾಯವಾಗಿ ಪರಿಗಣಿಸಿ ಮೀಸಲಾತಿಯ ಲಾಭ ದೊರಕಿಸಿಕೊಡಬೇಕೆಂದು ಹಲವು ವರ್ಷಗಳಿಂದಲೇ ಹೋರಾಟ ನಡೆಯುತ್ತಿದೆ. ಕನಿಷ್ಠ ಪಕ್ಷ ಒಳ ಮೀಸಲಾತಿಯನ್ನಾದರೂ ಸರ್ಕಾರ ಕಲ್ಪಿಸಬಹುದಾಗಿತ್ತು ಎಂದು ಸವಿತಾ ಸಮಾಜ ಸಂಘದ ಅಧ್ಯಕ್ಷರಾದ ಎನ್.ರಂಗಸ್ವಾಮಿ ದಾವಣಗೆರೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಎನ್.ರಂಗಸ್ವಾಮಿ, ಸವಿತಾ ಸಮಾಜಕ್ಕೆ ದಲಿತ ಸಮುದಾಯದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅನೇಕ ಬಾರಿ ಸರ್ಕಾರಕ್ಕೆ ಮನವಿಗಳನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗಲೂ, ರಾಮಕೃಷ್ಣ ಹೆಗಡೆ ಸರ್ಕಾರ ಇದ್ದಾಗಲೂ ಈ ಬಗ್ಗೆ ಮನವಿಗಳನ್ನು ನೀಡಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗಕ್ಕೂ ಮನವಿ ಸಲ್ಲಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹಲವಾರು ರೀತಿಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದವರು ತಿಳಿಸಿದರು.

ಸವಿತ ಜಾತಿಗಳನ್ನು ದಲಿತ ಸಮುದಾಯವಾಗಿ ಗುರುತಿಸಿಕೊಳ್ಳುವ ಬಗ್ಗೆ ರಾಜ್ಯಾದ್ಯಂತ ಎಲ್ಲಾ ಘಟಕಗಳು ಒತ್ತಾಯ ಮಾಡಬೇಕಿದೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದರೆ ಪ್ರಯೋಜನವಾಗಬಹುದು ಎಂದು ವಕೀಲರೂ ಆದ ರಂಗಸ್ವಾಮಿ ಪ್ರತಿಪಾದಿಸಿದ್ದಾರೆ. ಕನಿಷ್ಠ ಪಕ್ಷ ಒಳಮೀಸಲಾತಿಯಾದರೂ ಸಿಗಬೇಕಿದೆ ಎಂದವರು ಹೇಳಿದ್ದಾರೆ.

Related posts