‘ನುಡಿದಂತೆ ನಡೆಯದಿದ್ದರೆ ಸುವರ್ಣಸೌಧಕ್ಕೆ ಲಗ್ಗೆ’: ಸರ್ಕಾರದತ್ತ ಅನ್ನದಾತರ ಅಸ್ತ್ರ

ಕಬ್ಬಿನ ದರ ಏರಿಕೆ ಬಗ್ಗೆ ಡಿಸೆಂಬರ್ 23ರರೊಳಗೆ  ನಿರ್ಧಾರವಾಗದಿದ್ದರೆ 26ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ.. ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ರೈತರು..

ಬೆಂಗಳೂರು: ಕಬ್ಬು ಬೆಳೆಗಾರರ ಅಹೋರಾತ್ರಿ ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ. ಸರ್ಕಾರ ನುಡಿದಂತೆ ನಡೆಯದಿದ್ದರೆ ತಕ್ಕ ಎದಿರೇಟು ನೀಡಲು ರೈತರು ರಣತಂತ್ರ ರೂಪಿಸುತ್ತಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿರುವ ರೈತ ನಾಯಕ ಕುರುಬೂರು ಶಾಂತಕುಮಾರ್, ಮುಂದಿನ ಹೋರಾಟ ಸರ್ಕಾರಕ್ಕೆ ಗಂಭೀರ ಸವಾಲಗಲಿದೆ ಎಂಬ ಸೂಚನೆ ಕೊಟ್ಟಿದ್ದಾರೆ.

ಕಬ್ಬಿ್ಎ ಎಫ್‌ಆರ್‌ಪಿ ದರ ಏರಿಕೆ, ಕಟಾವು ಕೂಲಿ, ಸಾಗಾಣಿಕೆ ವೆಚ್ಚ ಕಡಿತ ಮಾಡುವ ಬಗ್ಗೆ ಮುಖ್ಯಮಂತ್ರಿಯವರು ಒಪ್ಪಿಕೊಂಡಿದ್ದಾರೆ. ಅದರಂತೆ ಡಿಸೆಂಬರ್ 23 ವಿಶ್ವ ರೈತ ದಿನದ ಆಚರಣೆಯ ಒಳಗೆ ತೀರ್ಮಾನ ಕೈಗೊಳ್ಳಬೇಕು ನಿರ್ಲಕ್ಷ್ಯ ಮಾಡಿದರೆ 26ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಆಗಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ 27ನೇ ದಿನದ ಧರಣಿ ನಿರತ ರೈತರ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಿಂದ ಕಬ್ಬು ನುರಿಸಿರುವ ಕಾರ್ಖಾನೆಗಳು. ರೈತರಿಗೆ ಕಬ್ಬಿನ ಹಣವನ್ನೇ ಪಾವತಿಸಿಲ್ಲ ಕೆಲವು ಕಾರ್ಖಾನೆಗಳು ನೆಪ ಮಾತ್ರಕ್ಕೆ ಅಲ್ಪ ಸ್ವಲ್ಪ ಪಾವತಿಸಿದ್ದಾರೆ ಎಫ್‌ಆರ್ಪಿ ನಿಯಮ ಪ್ರಕಾರ 14 ದಿವಸದಲ್ಲಿ ಪಾವತಿಸಬೇಕು ಕಾರ್ಖಾನೆಗಳು ಉಲ್ಲಂಘನೆ ಮಾಡಿ, ಎರಡು ಸಾವಿರ ಕೋಟಿಗೂ ಹೆಚ್ಚು ಹಣ ಉಳಿಸಿಕೊಂಡಿದ್ದಾರೆ ರಾಜ್ಯ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಡಿ.23ರಂದು ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ವಿಶ್ವ ರೈತ ದಿನಾಚರಣೆಯಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿದ ಕಾಯಕಯೋಗಿಗಳಿಗೆ ಗೌರವ ಪುರಸ್ಕಾರ ಮಾಡಲು, ಸಂಯುಕ್ತ ಕಿಸಾನ್ ಮೋರ್ಚ ರಾಷ್ಟ್ರೀಯ ನಾಯಕ ಜಗಜಿತ್ ಸಿಂಗ್ ಧಲೆವಾಲ, ಪಂಜಾಬ್ ಆಗಮಿಸುತ್ತಿದ್ದಾರೆ. ಇವರು ಒಂದು ವರ್ಷ ದೆಹಲಿಯ ಗಡಿಯಲ್ಲಿ ಹೋರಾಟ ಮಾಡಿದ ಮುಖಂಡರು. ಇವರ ಉಪಸ್ಥಿತಿಯಲ್ಲಿ ಡಿ.19 ಸೋಮವಾರ ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತ ಮುಖಂಡರು ಹಾಗೂ ಸಂಸದರ ನಿಯೋಗದೊಂದಿಗೆ, ಕೇಂದ್ರ ಕೃಷಿ ಸಚಿವ ಹಾಗೂ ಆಹಾರ ಸಚಿವರನ್ನ ಭೇಟಿ ಮಾಡಿ ಕಬ್ಬು ಬೆಳೆಗಾರರ ಜಲಂತ ಸಮಸ್ಯೆಗಳ ಪರಿಹಾರ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಬಾನುವಾರದ ಧರಣಿಯಲ್ಲಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಪರಶುರಾಮ್, ಸುರೇಶ್, ರೇವಣ್ಣ, ಮೈಸೂರು ಜಿಲ್ಲೆಯ ರಂಗಸಮುದ್ರ, ಹಿಟ್ಟುವಳ್ಳಿ, ಗ್ರಾಮದ ನೂರಾರು ರೈತರು ಭಾಗವಹಿಸಿದರು.

Related posts