ಪೂಜಾ ಶುಲ್ಕ ವಿವಾದ; ಧರ್ಮದ ಹೆಸರಲ್ಲಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಬಿಜೆಪಿ ಯತ್ನ ಎಂದ ರಾಮಲಿಂಗಾ ರೆಡ್ಡಿ

ಬೆಂಗಳೂರು: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಪೂಜೆ, ಸೇವಾ ದರ ಹೆಚ್ಚಳ ಮಾಡಲಾಗಿದೆ ಎಂಬ ವಿಚಾರ ರಾಜಕೀಯ ಪಕ್ಷಗಳ ಕಾರಣವಾಗಿದೆ. ಈ ವಿಚಾರದಲ್ಲಿ, ಪ್ರತಿಪಕ್ಷ ಬಿಜೆಪಿಯು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ಹೊರಕಿದೆ. ಇದಕ್ಕೆ ತಿರುಗೇಟು ನೀಡಿರುವ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ದೇಗುಲಗಳ ವಿಚಾರದಲ್ಲಿನ ಬಿಜೆಪಿ ನಾಯಕರ ಟೀಕೆಯು ಅವರ ಬೌದ್ಧಿಕ ಅಧಃಪತನದ ಪರಾಮಾವಧಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಧರ್ಮದ ಹೆಸರಲ್ಲಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಹತಾಶ ಪ್ರಯತ್ನ ಬಿಜೆಪಿ ನಾಯಕರದ್ದು ಎಂದು ಸಚಿವರು ಆರೋಪಿಸಿದ್ದಾರೆ.

ಧರ್ಮ ರಕ್ಷಣೆಗಾಗಿಯೇ ಅಧಿಕಾರಕ್ಕೆ ಬಂದವರು ನಾವು ಎನ್ನುವ ‘ನಕಲಿ ಧರ್ಮರಕ್ಷಕ’ ಬಿಜೆಪಿ ಸರ್ಕಾರದವರು 2019-2023 ಅವಧಿಯಲ್ಲಿ 24 ಹಿಂದೂ ದೇವಾಲಯಗಳ ಪೂಜಾ ಸೇವಾ ಶುಲ್ಕವನ್ನು ಏರಿಕೆ‌ ಮಾಡಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೂಜಾ ಶುಲ್ಕ ಹೆಚ್ಚಳವಾಗಿದ್ದ ದೇವಾಲಯಗಳ ಪಟ್ಟಿಯನ್ನು ರಾಮಲಿಂಗಾ ರೆಡ್ಡಿ ಬಹಿರಂಗಪಡಿಸಿದ್ದಾರೆ.

  1. ಶ್ರೀ ವೀರಭದ್ರ ಸ್ವಾಮಿ ದೇವಾಲಯ, ನೆಲಮಂಗಲ ತಾಲ್ಲೂಕು
  2. ಶ್ರೀ ಮಹಾಲಿಂಗೇಶ್ವರಸ್ವಾಮಿ ದೇವಾಲಯ, ಕವೂರು
  3. ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯ, ದರೂರು ಗ್ರಾಮ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ
  4. ಶ್ರೀ ಮೈಲಾರಲಿಂಗಸ್ವಾಮಿ ದೇವಾಲಯ, ಹೂವಿನಹಡಗಲಿ ತಾಲ್ಲೂಕು, ಬಳ್ಳಾರಿ
  5. ಶ್ರೀ ಹೊಸೂರಮ್ಮ ದೇವಾಲಯ, ಹೊಸಪೇಟೆ ತಾಲ್ಲೂಕು, ಬಳ್ಳಾರಿ
  6. ಶ್ರೀ ವಿಶ್ವೇಶ್ವರಸ್ವಾಮಿ ದೇವಾಲಯ, ಎಲ್ಲೂರು, ಕಾಪು ತಾಲ್ಲೂಕು, ಉಡುಪಿ
  7. ಶ್ರೀಬೋಳರಾಮೇಶ್ವರಸ್ವಾಮಿ ದೇವಾಲಯ, ಚಿಕ್ಕಮಗಳೂರು ನಗರ
  8. ಶ್ರೀ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ, ಕುಂದಾಪುರ ತಾಲ್ಲೂಕು, ಉಡುಪಿ
  9. ಶ್ರೀ ನಾಗೇಶ್ವರಸ್ವಾಮಿ ದೇವಾಲಯ, ಚನ್ನರಾಯಪಟ್ಟಣ, ಹಾಸನ
  10. ಶ್ರೀ ಮಹಿಷಮರ್ಧಿನಿ ದೇವಾಲಯ, ಕಡಿಯಾಳಿ, ಉಡುಪಿ
  11. ತಿಪಟೂರು ಕಿಬ್ಬನಹಳ್ಳಿ ರಜತಾದ್ರಿಪುರ ಹತ್ಯಾಳು ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾದೇವಾಲ. ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯ, ಕುಣಿಗಲ್ ತಾಲ್ಲೂಕು, ತುಮಕೂರು
  12. ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯ, ಕುಣಿಗಲ್ ತಾಲ್ಲೂಕು, ತುಮಕೂರು
  13. ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು, ನಾಗಲಮಡಿಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ
  14. ಮೈಸೂರು ಜಿಲ್ಲೆ ನಂಜನಗೂಡು ತಾ. ಚಿಕ್ಕಯ್ಯನ ಛತ್ರದಲ್ಲಿರುವ ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಾಲಯ
  15. ದ.ಕ. ಜಿಲ್ಲೆರವರ ಕೋರಿಕೆಯಂತೆ, ಕುತ್ಯಾರು ಶ್ರೀ ಸೋಮನಾಥೇಶ್ವರ ದೇ. ಬೆಳ್ತಂಗಡಿ
  16. ಕನಕಪುರ ತಾಲ್ಲೂಕು ಸಾತನೂರು ಹೋಬಳಿ ಕಬ್ಬಾಳು ಗ್ರಾಮದ ಶ್ರೀ ಕಬ್ಬಾಳಮ್ಮ ದೇವಾಲಯ
  17. ಬೆಂಗಳೂರು ನಗರ ಸಂಪಂಗಿರಾಮನಗರದಲ್ಲಿರುವ ಶ್ರೀ ಪ್ರಸನ್ನ ಗಣಪತಿ ಮತ್ತು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ
  18. ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲ್ಲೂಕು, ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ
  19. ಶ್ರೀ ಅಮೃತೇಶ್ವರಸ್ವಾಮಿ ದೇವಾಲಯ, ಬ್ರಹ್ಮಾವರ ತಾಲ್ಲೂಕು, ಉಡುಪಿ
  20. ಶ್ರೀ ದೊಡ್ಡಗಣಪತಿ ಮತ್ತು ಸಮೂಹ ದೇವಾಲಯಗಳು, ಬಸವನಗುಡಿ, ಬೆಂಗಳೂರು.
  21. ಶ್ರೀ ಕಾಶಿವಿಶ್ವೇಶ್ವರಸ್ವಾಮಿ ದೇವಾಲಯ, ಅಂತರಗಂಗೆ, ಕೋಲಾರ
  22. ಚನ್ನಪಟ್ಟಣ ತಾಲ್ಲೂಕು, ವಂದಾರಗುಪ್ಪೆ ಗ್ರಾಮದ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ
  23. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಎಡೆಯೂರು ಗ್ರಾಮದ ಶ್ರೀಶ್ರೀಸಿದ್ದಲಿಂಗೇಶ್ವರ ದೇವಾಲಯ
  24. ಬೆಂಗಳೂರು ನಗರ ಜಿಲ್ಲೆ ಹನುಮಂತನಗರ ಶ್ರೀ ಕುಮಾರಸ್ವಾಮಿ ದೇವಾಲಯ ಶ್ರೀ ಪಂಚಮುಖಿ ಸನ್ನಿಧಿ ಮತ್ತು ಶ್ರೀ ಉದ್ಭವ ಆಧಿಶೇಷ ಸನ್ನಿಧಿ

ಬಿಜೆಪಿ ಸರ್ಕಾರದವರು 2019-2023 ಅವಧಿಯಲ್ಲಿಈ ದೇವಾಲಯಗಳಲ್ಲಿ ಪೂಜಾ ಶುಲ್ಕ ಹೆಚ್ಚಳ ಮಾಡಿರುವು ‘ಧರ್ಮ ವಿರೋಧಿ ನಡೆಯೇ’? ಎಂದು ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

ಸರ್ಕಾರದ ಹಸ್ತಕ್ಷೇಪ ಇಲ್ಲ:

ಈಗ ಆಡಳಿತವಿರುವ ನಮ್ಮ ಸರ್ಕಾರವು ದೇವಸ್ಥಾನದ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ರಾಮಲಿಂಗಾ ರೆಡ್ಡಿ, ರಾಜ್ಯದ 35554 ದೇವಸ್ಥಾಗಳ ಪೈಕಿ ವಿವಿಧ ಭಾಗಗಳ 14 ದೇವಸ್ಥಾನಗಳಲ್ಲಿ ಮಾತ್ರ ದೇವಾಲಯಗಳ ಸೇವಾಶುಲ್ಕ ಹೆಚ್ಚಳವಾಗಿದೆ. ಸಂಬಂಧಪಟ್ಟ 14 ದೇವಸ್ಥಾನಗಳ ಆಡಳಿತ‌ ಮಂಡಳಿಗಳ‌ ಕೋರಿಕೆ ಮೇರೆಗೆ ಈ ಸೇವಾ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ದೇವಾಲಯಗಳ ಸೇವಾಶುಲ್ಕವು ಕಡೆ ಬಾರಿ ಪರಿಷ್ಕರಣೆಯಾಗಿದ್ದು ಸುಮಾರು 7 ರಿಂದ 15 ವರ್ಷಗಳ ಹಿಂದೆ, ಇದನ್ನು ಪರಿಷ್ಕರಣೆ ಮಾಡುವ ನಿರ್ಣಯ ಕೈಗೊಂಡಿರುವುದು ಕೂಡ ದೇವಾಲಯಗಳ ವ್ಯವಸ್ಥಾಪನಾ ಸಮಿತಿ. ಹೊಸ ಸೇವಾಶುಲ್ಕದಿಂದ ಸಂಗ್ರಹವಾಗುವ ಹಣ ಕೂಡ ಅದೇ ದೇವಾಲಯಗಳ ನಿರ್ವಹಣೆ, ಅಭಿವೃದ್ಧಿಗೆ ಬಳಕೆಯಾಗಲಿದೆ. ಇಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವೇ ಇರುವುದಿಲ್ಲ ಎಂದಿದ್ದಾರೆ.

‘ಹಿಂದು ಪರ’ ಎನ್ನುವ ಮತ್ತು‌ ಸದಾ ಧರ್ಮದ‌‌ ಹೆಸರಿನಲ್ಲಿ ಜನರನ್ನು ದಾರಿ‌ ತಪ್ಪಿಸುವ ಬಿಜೆಪಿ ನಾಯಕರು, ಇನ್ನಾದರೂ ತಮ್ಮ ಮುಖವಾಡವನ್ನು ಕಳಚಲಿ, ಧರ್ಮ- ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುವ ಇವರುಗಳಿಗೆ ಆ ದೇವರೇ ಸದ್ಬುದ್ದಿ ಕೊಡಲಿ‌ ಎಂದು ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

Related posts