ಕಾಲ್ತುಳಿತ, ಮರಣಹೋಮ: ರಾಜ್ಯ ಸರ್ಕಾರದ ಅಮಾನತಿಗೆ CRF ಸಲಹೆ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಇದೀಗ ರಾಜ್ಯ ಸರ್ಕಾರದ ಅಸ್ತಿತ್ವಕ್ಕೂ ಸಂಚಕಾರ ತಂದಿದೆ. ಜೊತೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ತಂಡಕ್ಕೂ ಸಂಕಷ್ಟ ತಂದೊಡ್ಡಿದೆ. 11 ಜನರ ಮರಣ ಹೋಮಕ್ಕೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಇಲಾಖೆಗಳ ಆಕ್ಷೇಪದ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಠಕ್ಕೆ ಬಿದ್ದು RCB ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ನ್ಯಾಯಾಂಗ ತನಿಖೆ ಮುಗಿಯುವವರೆಗೂ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಕೆಯಾಗಿದೆ.

ಮಾನವ ಹಕ್ಕುಗಳ ಹೋರಾಟ ಸಂಸ್ಥೆಯಾಗಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್ (CRF)’ ವತಿಯಿಂದ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 04.06.2025ರಂದು ಸಂಭವಿಸಿರುವ ಕಾಲ್ತುಳಿತ ದುರ್ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೊಣೆಗಾಗರಷ್ಟೇ ಅಲ್ಲ, ಅವರೇ ನೇರ ಕಾರಣಕರ್ತರು ಎಂದು ಆರೋಪಿಸಲಾಗಿದೆ. ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಿದ್ದರಾಮಯ್ಯ ಅವರೇ ಸಚಿವರಾಗಿದ್ದಾರೆ, ಜೊತೆಗೆ ಡಿಸಿಎಂ ಡಿಕೆಶಿಯವರು KSCA ಪದಾಧಿಕಾರಿಗಳು ತಮ್ಮ ಆಪ್ತರೆಂಬ ಕಾರಣಕ್ಕಾಗಿ ಪೊಲೀಸ್ ಇಲಾಖೆಯ ಆಕ್ಷೇಪವಿದ್ದರೂ ಅಧಿಕಾರ ದುರುಪಯೋಗಪಡಿಸಿ ಖಾಸಗಿ ಕ್ರೀಡಾ ಸಂಸ್ಥೆ RCBಯ ವಿಜಯೋತ್ಸವ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಭೀಕರ ಮಾರಣಹೋಮ ನಡೆದಿದೆ ಎಂದು ‘ಸಿಟಿಜನ್ ರೈಟ್ಸ್ ಫೌಂಡೇಷನ್ (CRF)’ ಅಧ್ಯಕ್ಷ ಕೆ.ಎ.ಪಾಲ್ ನೇತೃತ್ವದ ನಿಯೋಗ ಶುಕ್ರವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಈ ದುರಂತಕ್ಕೆ ಕಾರಣವಾಗಿರುವ ಸಿಎಂ ಹಾಗೂ ಡಿಸಿಎಂ ತಮ್ಮ ಕೃತ್ಯವನ್ನು ಅಧಿಕಾರಿಗಳ ಮೇಲೆ ಹೊರಿಸುವ ಪ್ರಾಯ್ಟ್ನ ಮಾಡಿದ್ದಾರೆ. FIR ದಾಖಲಾಗುತ್ತಿದ್ದಂತೆಯೇ, ತಮ್ಮ ವಿರುದ್ಧ ನಿಷ್ಟೂರ ಕ್ರಮ ಕೈಗೊಳ್ಳಬಹುದಾದ ಕಮೀಷನರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ದುರಂತದ ಬಗ್ಗೆ ನ್ಯಾಯಸಮ್ಮತ ತನಿಖೆಗೂ ಅಡ್ಡಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆ ಪೂರ್ಣ ವಾಗುವವರೆಗೂ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡಬೇಕೆಂದು CRF ಒತ್ತಾಯಿಸಿದೆ.

ವಿಧಾನಸೌಧ ಆವರಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸಿದ್ದರಾಮಯ್ಯ ಹಾಗೂ ಸಚಿವರ ಕುಟುಂಬದವರೂ ಬಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ವಿದೇಶಿ ಕಂಪನಿಯ ಒಡೆತನದ ಖಾಸಗಿ ಸಂಸ್ಥೆ RCBಯ ವಿಜಯೋತ್ಸವ ಸಮಾರಂಭದ ಬ್ರ್ಯಾಂಡ್ ಅಂಬಾಸಿಡರ್ ಎಂಬಂತೆ ಗಮಸೆಳೆದಿದ್ದಾರೆ. ಈ ಮೂಲಕ ಭಾರೀ ಪ್ರಚಾರ ನೀಡಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನ ಜಮಾಯಿಸಲು ಕಾರಣರಾಗಿದ್ದಾರೆ ಎಂದು ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ತಿಳಿಸಲಾಗಿದೆ.

ಸರ್ಕಾರಕ್ಕೂ ಸಂಚಕಾರ, ಕೊಹ್ಲಿಗೂ ಸಂಕಟ?

ಈ ಎರಡೂ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದರೂ ಉಪಮುಖ್ಯಮಂತ್ರಿಯವರ ಪ್ರಭಾವದಿಂದಾಗಿ ಪೊಲೀಸರ ಸಲಹೆಯನ್ನು ಧಿಕ್ಕರಿಸಿ ಕಾರ್ಯಕ್ರಮಗಳು ನಡೆದಿದ್ದೇ ಭೀಕರ ಮಾರಣಹೋಮಕ್ಕೆ ಕಾರಣ. ಈ ಅನಾಹುತದ ನಂತರ ತಮ್ಮ ಲೋಪವನ್ನು ಮರೆಮಾಚಲು ಸರ್ಕಾರದ ಪ್ರಮುಖರಾದ ಸಿಎಂ-ಡಿಸಿಎಂ ಅವರುಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಇತರ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಅನುಮತಿಯನ್ನೇ ನೀಡಿಲ್ಲ ಎಂದಾದ ಮೇಲೆ ಪೊಲೀಸರು ಭದ್ರತೆ ಕಲ್ಪಿಸುವ ಪ್ರಮೆಯೇ ಬರುವುದಿಲ್ಲ. ಆದರೂ ಪೊಲೀಸರು ತಮ್ಮ ವ್ಯವಸ್ಥೆಯಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದ್ದಾರೆ. ಆದರೂ ಕ್ರೀಡಾಂಗಣದ ಪ್ರವೇಶ ಧ್ವಾರದಲ್ಲಿ ಘಟನೆ ನಡೆದಿರುವ ದುರ್ಘಟನೆ ಸಂಭವಿಸಿದ್ದು, ಅದಕ್ಕೆ ಸಂಘಟಕರು ಹಾಗೂ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿರುವ ಸಿಎಂ-ಡಿಸಿಎಂ ಕಾರಣಕರ್ತರು. ಆದರೂ ತಮ್ಮ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳನ್ನು ಸಿಎಂ ಅಮಾನತು ಮಾಡಿದ್ದಾರೆ ಎಂದು CRF ಮುಖ್ಯಸ್ಥರು ರಾಜ್ಯಪಾಲರ ಗಮನಸೆಳೆದಿದ್ದಾರೆ.

ಡಿಪಿಎಆರ್ ಇಲಾಖೆಯು ಸಿಎಂ ಬಳಿಯೇ ಇದ್ದು, ಆ ಇಲಾಖೆಯೇ ಈ ಸಮಾರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದಾಗ್ಯೂ ಸಿಎಂ ಅವರೇ ಸಮಾರಂಭದಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆ ಹದೆಗೆಡಲು ಕಾರಣರಾದರು. ಅಷ್ಟೇ ಅಲ್ಲ, ಕಾಲ್ತುಳಿತ ಘಟನೆಯಲ್ಲಿ ಮರಣಹೋಮ ನಡೆದಿರುವ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅದಾಗಲೇ ಅದೇ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಿದ್ದಾರೆ. ನಿಯಮ ಬಾಹಿರವಾಗಿ ನಡೆದ ಆಯೋಜಿತವಾದ ಸಮಾರಂಭಕ್ಕೆ ವಿರಾಟ್ ಕೊಹ್ಲಿ ಸಹಿತ ಕ್ರಿಕೆಟಿಗರನ್ನು ಸರ್ಕಾರದ ವ್ವವಸ್ಥೆಯಲ್ಲೇ ಕರೆದೊಯ್ಯಲಾಗಿದೆ. ಜನರ ಮಾರಣಹೋಮದ ವಿಚಾರದಲ್ಲಿ ನಿಷ್ಕರುಣಿಯಾಗಿ ವರ್ತಿಸಲಾಗಿದೆ ಎಂದು ಆರೋಪಿಸಲಾಗಿದೆ.

‘ಪುಷ್ಪ-2’ ಪ್ರಕರಣದಲ್ಲಿ ಒಂದು ನ್ಯಾಯ; RCB ಪ್ರಕರಣದ್ದಿ ಮತ್ತೊಂದು ನ್ಯಾಯ?

ಇತ್ತೀಚಿಗೆ ತೆಲಂಗಾಣದಲ್ಲಿ ‘ಪುಷ್ಪ-2’ ಸಿನಿಮಾ ಪ್ರದರ್ಶನ ಸಂದರ್ಭದಲ್ಲಿಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಖ್ಯಾತ ನಟ ಅಲ್ಲೂ ಅರ್ಜುನ್ ಅವರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಆ ದುರ್ಘಟನೆಯ ರೀತಿಯಲ್ಲೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ್ದು, ಇಲ್ಲಿ 11 ಮಂದಿ ಸಾವನ್ನಪ್ಪಿದ್ದು, ಈ ದುರ್ಘಟನೆಗೆ ಕಾರಣವಾದ ಸಮಾರಂಭದಲ್ಲಿ ಭಾಗಿಯಾದ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಖ್ಯಾತ ಕ್ರಿಕೆಟಿಗರ ವಿರುದ್ಧ ಕ್ರಮವಿಲ್ಲವೇಕೆ ಎಂಬ ಪ್ರಶ್ನೆಯನ್ನು CRF ಮುಂದಿಟ್ಟಿದೆ.

ಒಟ್ಟಾರೆ ಘಟನಾವಳಿಗಳನ್ನು ಗಮನಿಸಿದರೆ ಮಧ್ಯ ತಯಾರಿಕಾ ಕಂಪನಿಯ ಲಾಭಿಗೆ ಮಣಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಖಾಸಗಿ ಸಂಸ್ಥೆಯ ಸಮಾರಂಭಕ್ಕೆ ಪೊಲೀಸರ ಆಕ್ಷೇಪದ ಹೊರತಾಗಿಯೂ ನಿಯಮ ಬಾಹಿರವಾಗಿ ಅವಕಾಶ ಮಾಡಿಕೊಟ್ಟಿದ್ದಾರೆ. KSCA ಅಧಿಕಾರಿಗಳು ಅಕ್ರಮವಾಗಿ ಟಿಕೆಟ್ ಹಂಚಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದು ಸಿಎಂ ಹಾಗೂ ಡಿಸಿಎಂ ಅವರು ಅಧಿಕಾರ ದುರುಪಯೋಗಪಡಿಸಿ ಆಡಳಿತ ಯಂತ್ರವನ್ನು ಅನಧಿಕೃತವಾಗಿ ಖಾಸಗಿ ಸಂಸ್ಥೆಯ ಅಕ್ರಮಗಳಿಗೆ ಬಳಸಿಕೊಂಡಿದ್ದಾರೆ. ತಮ್ಮ ಈ ಅಪರಾಧ ಸಂಚನ್ನು ಮರೆಮಾಚುವ ಸಂಚಿನ ಭಾಗವಾಗಿ ತಕ್ಷಣವೇ FIR ಮಾಡದಂತೆ ತಡೆದಿದ್ದಾರೆ. ಘಟನೆ ನಡೆದ ಒಂದು ದಿನದ ನಂತರ FIR ದಾಖಲಾಗಿದ್ದು, ತಮ್ಮ ಮೇಲೆಯೂ ನಿಷ್ಟೂರ ಕ್ರಮ ಅನುಸರಿಸಬಲ್ಲ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಗಮನಿಸಿದರೆ ಈ ಪ್ರಕರಣ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯುವುದು ಅನುಮಾನ. ಹಾಗಾಗಿ ತನಿಖೆ ಪೂರ್ಣಗೊಳ್ಳುವ ವರೆಗೂ ರಾಜ್ಯಸರ್ಕಾರವನ್ನು ಅಮಾನತಿನಲ್ಲಿಡಬೇಕಿದೆ ಎಂಬ ಕಾನೂನು ಸಲಹೆಯನ್ನೂ CRF ರಾಜ್ಯಪಾಲರ ಮುಂದಿಟ್ಟಿದೆ.

Related posts