ನೇಮಕಾತಿ ಪರೀಕ್ಷಾ ಅಕ್ರಮ; ವಸೂಲಿ ಹಣದಲ್ಲಿ ‘ಕೈ’ ಹೈಕಮಾಂಡ್ ಪಾಲೆಷ್ಟು? ಬಿಜೆಪಿ ಪ್ರಶ್ನೆ

ಬೆಂಗಳೂರು: ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷಾ ಅಕ್ರಮ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣ ಇದೀಗ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿಗೂ ಕಾರಣವಾಗಿದೆ.

ಈ ಪ್ರಕರಣವನ್ನು ಮುಂದಿಟ್ಟು ಸಿದ್ದರಾಮಯ್ಯ ಸರ್ಕಾರವನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ರಾಜ್ಯದ ATM ಸರ್ಕಾರವು ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದ್ದು, ಪ್ರತಿ ಅಭ್ಯರ್ಥಿಗಳಿಂದ ವಸೂಲಿ ಮಾಡಿರುವ 5-8 ಲಕ್ಷ ರರೊಪಾಯಿಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಾಲೆಷ್ಟು ಎಂದು ಪ್ರಶ್ನಿಸಿದೆ.

ಈ ಕುರಿತಂತೆ ಟ್ವಿಟ್ಟರ್’ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ರಾಜ್ಯದ ATM ಸರ್ಕಾರ ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದೆ. ಕಾಂಗ್ರೆಸ್ ಮುಖಂಡ ಆರ್. ಡಿ.ಪಾಟೀಲ್ ಬೆಂಬಲಿಗರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ, ಕಾಂಗ್ರೆಸ್ ಸರ್ಕಾರವೇ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂಬುದು ಸಾಬೀತಾಗುತ್ತದೆ ಎಂದಿದೆ. ಈ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರೋ ಅಥವಾ ಇವರಿಗೂ ಅಮಾಯಕರು/ಮುಗ್ದರು ಎಂಬ ಪಟ್ಟ ಕಟ್ಟುತ್ತಿರೋ..? ಎಂದು ಉನ್ನತ ಶಿಕ್ಷಣ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಪ್ರಶ್ನಿಸಿರುವ ಬಿಜೆಪಿ, ‘ಪ್ರತಿ ಅಭ್ಯರ್ಥಿಗಳಿಂದ ವಸೂಲಿ ಮಾಡಿರುವ 5-8 ಲಕ್ಷ ರೂಪಾಯಿ ಹಣದಲ್ಲಿ ಹೈಕಮಾಂಡ್ ಪಾಲೆಷ್ಟು ಎಂಬುದನ್ನು ಕಾಂಗ್ರೆಸ್ ನಾಯಕರೇ ಹೇಳಬೇಕು’ ಎಂದು ವ್ಯಂಗ್ಯವಾಡಿದೆ.

Related posts