ವಿಶ್ವ ಮಹಿಳಾ ದಿನ.. ‘ವನಿತಾ ಪಾರ್ಕ್’ನಲ್ಲಿ ಅನನ್ಯ ವಿಶೇಷ..

ಮಂಗಳೂರು; ಮಂಗಳೂರು ನಗರದ ವನಿತಾ ಪಾರ್ಕ್ ನಲ್ಲಿ ಬುಧವಾರ ಬೆಸೆಂಟ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಗಮನಸೆಳೆಯಿತು.

ಉದ್ಯಾನವನದಲ್ಲಿ ಗಿಡನೆಡುವ ಮೂಲಕ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹಿಂದುಸ್ತಾನಿ ಸಂಗೀತ ವಿದುಷಿ ವಿಭಾಶ್ರೀ ನಿವಾಸ್ ನಾಯಕ್ ಅವರನ್ನು ಗೌರವಿಸಲಾಯಿತು.

ವಿಶ್ವ ಮಹಿಳಾ ದಿನದ ಮಹತ್ವದ ಬಗ್ಗೆ ಮಾತನಾಡಿದ ವಿಭಾ ಶ್ರೀನಿವಾಸ ನಾಯಕ್, ಸಮಾಜದಲ್ಲಿ ಮಹಿಳೆ ಒಂದು ಶಕ್ತಿ. ಆ ಶಕ್ತಿ ಆಕೆಗೆ ಪ್ರಕೃತಿಯ ಕೊಡುಗೆ. ಆದುದರಿಂದ ಮಹಿಳೆ ಮನೆ ಇರಲಿ ಯಾವುದೇ ಕ್ಷೇತ್ರದಲ್ಲಿ ಯೂ ಯಾವ ಅಡೆ ತಡೆ ಬಂದರೂ ಅವುಗಳನ್ನು ಮೀರಿ ತನ್ನ ತಾಳ್ಮೆ,ಮಮತೆ, ಸಹನೆ,ಹೊಣೆಗಾರಿಕೆ ಯೊಂದಿಗೆ ಕರ್ತವ್ಯ ನಿರ್ವಹಿಸುತ್ತಾಳೆ. ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಅವರ ಜೊತೆ ಇರುವ ಪುರುಷರು ಮುಖ್ಯರಾಗುತ್ತಾರೆ. ತಾನು ಮತ್ತು ತನ್ನ ಸುತ್ತಲಿನ ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಹೊಂದಿರುವ ಮಹಿಳೆ ಸಮಾಜದ ಶಕ್ತಿ ಯಾಗುತ್ತಾಳೆ ಎಂದರು.

ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ದೀಕ್ಷಿತ, ಮಹಿಳಾ ದಿನದ ಬಗ್ಗೆ ಮಾತನಾಡಿ, ಎಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ನೆಲೆಸುತ್ತಾರೆ ಎಂಬ ಮಾತಿದೆ. ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೊ ಆ ಸಮಾಜದಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯ ಕಾರಿ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ, ದ‌.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಶುಭ ಹಾರೈಸಿದರು. ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಹಿರಿಯ ಸದಸ್ಯ ರವೀಂದ್ರನಾಥ ಉಚ್ಚಿಲ್,ರೆಡ್ ಕ್ರಾಸ್ ಘಟಕದ ಸದಸ್ಯರಾದ ಪುಷ್ಪರಾಜ್ ಬಿ.ಎನ್,ಭಾಸ್ಕರ್ ರೈ ಕಟ್ಟ  ಬೆಸೆಂಟ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಪದಾಧಿಕಾರಿಗಳು, ಸದಸ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.

Related posts