ವಕ್ಫ್ ತಿದ್ದುಪಡಿ ಮಸೂದೆ: ತಮ್ಮ ಹೋರಾಟ ಬೆಂಬಲಿಸಿದವರಿಗೆ ಧನ್ಯವಾದ ಸಮರ್ಪಿಸಿದ ಯತ್ನಾಳ್

ಬೆಂಗಳೂರು: ವಕ್ಫ್ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕರವಾಗಿರುವ ಬಗ್ಗೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಅವರ ಪ್ರತಿಕ್ರಿಯೆ ಗಮನಸೆಳೆದಿದ್ದಾರೆ. ಅತ್ತ, ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದರೆ, ಇತ್ತ, ವಕ್ಫ್ ವಿರುದ್ದದ ಹೋರಾಟ ಬೆಂಬಲಿಸಿದವರಿಗೆ ಯತ್ನಾಳ್ ಧನ್ಯವಾದ ಸಮರ್ಪಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಬೋರ್ಡ್ ನ ನಿರಂಕುಶ ನಡೆಗಳಿಗೆ ಕಡಿವಾಣ ಹಾಕಲಿದೆ. ವಕ್ಫ್ ಕಾಯ್ದೆಯ ತಿದ್ದುಪಡಿಗೆ ಗೆ ಜಂಟಿ ಸಂಸತ್ ಸಮಿತಿ ರಚಿಸಿ ತಿದ್ದುಪಡಿಗೆ ಸೂಚಿಸಿದ ಕೇಂದ್ರ ಸರ್ಕಾರಕ್ಕೂ, ಜೆ.ಪಿ.ಸಿ ಅಧ್ಯಕ್ಷರಿಗೂ, ಸದಸ್ಯರಿಗೂ ಸೇರಿದಂತೆ ತಿದ್ದುಪಡಿಗೆ ಕಾರಣೀಭೂತರಾದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು ಎಂದು ಶಾಸಕ ಬಸನಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ತಿದ್ದುಪಡಿಯಿಂದ ರೈತರಿಗೆ, ಮಠಗಳಿಗೆ, ದೇವಸ್ಥಾನಗಳಿಗೆ, ಸರ್ಕಾರಿ ಭೂಮಿ ಹಾಗೂ ಜನ ಸಾಮಾನ್ಯರ ಭೂಮಿಯನ್ನು ವಕ್ಫ್ ಎಂದು ಘೋಷಿಸಲು ಸಾಧ್ಯವಿಲ್ಲ ಹಾಗೂ ಜಿಲ್ಲಾಡಳಿತ ಮತ್ತು ನ್ಯಾಯಾಲಯಗಳಷ್ಟೇ ಇದನ್ನು ತೀರ್ಮಾನಿಸಬಹುದು. ನಮ್ಮ ಸಾಮೂಹಿಕ ಹೋರಾಟಕ್ಕೆ ಜಯ ಸಂದಿರುವುದು ಸಾಕಷ್ಟು ಸಂತಸ ತಂದಿದೆ ಎಂದವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ವಿಜಯಪುರದಲ್ಲಿ ನಮ್ಮ ತಂಡದಿಂದ ಮೊಳಗಿದ ಹೋರಾಟ ರಾಷ್ಟ್ರವ್ಯಾಪಿ ಹರಡಿದ್ದು ಸ್ಮರಿಸಬಹುದು ಎಂದಿರುವ ಯತ್ನಾಳ್, ಈ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿ ಬೆಂಬಲ, ಪ್ರೋತ್ಸಾಹ ನೀಡಿದ ಎಲ್ಲ ನಾಯಕರಿಗೆ, ಮಠಾಧೀಶರಿಗೆ, ಜನಸಾಮಾನ್ಯರಿಗೆ, ವಿಜಯಪುರದಲ್ಲಿ ಧರಣಿ ಮಾಡುತ್ತಿರುವಾಗ ದೂರ-ದೂರುಗಳಿಂದ ರೊಟ್ಟಿ ಊಟ ಕೊಟ್ಟ ಅನ್ನದಾತರಿಗೆ, ಹೆಬ್ಬಂಡೆಯಂತೆ ನಿಂತ ನಮ್ಮ ತಂಡದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Related posts