ವಿಶ್ವಸಂಸ್ಥೆ: ಇಸ್ರೇಲ್–ಇರಾನ್ ನಡುವೆ 12 ದಿನಗಳ ಯುದ್ಧ ಸ್ಥಗಿತಗೊಂಡ ಬೆನ್ನಲ್ಲೇ, ಗಾಜಾದಲ್ಲಿ ತಕ್ಷಣದ ಕದನ ವಿರಾಮವನ್ನು ಪ್ರಕಟಿಸಬೇಕೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ.
“ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮ ಭರವಸೆಯ ಸಂದೇಶ ನೀಡಿದೆ. ಗಾಜಾದಲ್ಲೂ ತಕ್ಷಣದ ಶಾಂತಿಗಾಗಿ ರಾಜಕೀಯ ಧೈರ್ಯ ತೋರಿಸಬೇಕಾದ ಕ್ಷಣವಿದು” ಎಂದು ಅವರು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
2023ರ ಅಕ್ಟೋಬರ್ 7ರಂದು ಹಮಾಸ್ ದಾಳಿಯ ಬಳಿಕ ಇಸ್ರೇಲ್ ನಡೆಸುತ್ತಿರುವ ಸೈನಿಕ ಕಾರ್ಯಾಚರಣೆಗಳು ಗಾಜಾದಲ್ಲಿ ಭೀಕರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿವೆ. “ಇಂದಿನ ಸ್ಥಿತಿ ಈ ಸಂಘರ್ಷದ ಇತಿಹಾಸದಲ್ಲೇ ಅತ್ಯಂತ ಭೀಕರವಾಗಿದೆ,” ಎಂದು ಗುಟೆರೆಸ್ ಹೇಳಿದರು.
ಪಾಲಸ್ತೀನಿಯ ಕುಟುಂಬಗಳು ಮರುಮರು ಸ್ಥಳಾಂತರಗೊಳ್ಳುತ್ತಿವೆ. ಗಾಜಾದ ಐದನೇ ಭಾಗಕ್ಕಿಂತ ಕಡಿಮೆ ಪ್ರದೇಶದಲ್ಲಿ ವಾಸಿಸಲು ನೂಕಲಾಗಿದೆ. ಬಾಂಬ್ ದಾಳಿಗಳು ನಿರಾಶ್ರಿತ ಕುಟುಂಬಗಳ ಮೇಲಿದೆ. ಆಹಾರ, ನೀರು, ಔಷಧಿ ತೀವ್ರ ಕೊರತೆಯಲ್ಲಿದೆ. “ಸಹಾಯ ಕಾರ್ಯಕರ್ತರು ಕೂಡ ಹಸಿವಿನಿಂದ ಬಳಲುತ್ತಿದ್ದಾರೆ. ಇದನ್ನು ಸಹಜಸ್ಥಿತಿಯೆಂದು ಪರಿಗಣಿಸಲು ಸಾಧ್ಯವಿಲ್ಲ,” ಎಂದರು.