ಮೈಸೂರು: ಈ ಬಾರಿ ಹೊಸ ಮುಖ್ಯಮಂತ್ರಿ ದಸರಾ ಉದ್ಘಾಟನೆ ಮಾಡುತ್ತಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
“ಆರ್. ಅಶೋಕ್ ಅವರು ಕಾಂಗ್ರೆಸ್ ಹೈಕಮಾಂಡ್ ಅಲ್ಲ. ಐದು ವರ್ಷವೂ ಕಾಂಗ್ರೆಸ್ ಸರ್ಕಾರ ಸ್ಥಿರವಾಗಿರುತ್ತದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ,” ಎಂದು ಮಹದೇವಪ್ಪ ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತ ಹೇಳಿದರು.
“ಮೂರು ತಿಂಗಳಲ್ಲಿ ಕ್ರಾಂತಿ ನಡೆಯುತ್ತದೆ ಎಂಬ ಹೇಳಿಕೆಯನ್ನು ಅವರು ಯಾವ ಅರ್ಥದಲ್ಲಿ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಅದನ್ನು ಅವರಿಗೇ ಕೇಳಬೇಕು. ಕೆಲವರು ರಾಜಕೀಯವಾಗಿ ಅನುಕೂಲಕರವಾಗಿರುವಂತೆ ಹೇಳಿಕೆ ನೀಡುತ್ತಾರೆ. ಆದರೆ ರಾಜಕೀಯದಲ್ಲಿ ಯಾವಾಗಲೂ ಕ್ರಾಂತಿಗಳು ನಡೆಯುತ್ತಿರುತ್ತವೆ. ಅದನ್ನೇ ಸಂಕ್ರಾಂತಿಯಾಗಿ ಜೋರಾಗಿ ಮಾಡೋಣ ಬಿಡಿ,” ಎಂದು ಅವರು ವ್ಯಂಗ್ಯವಾಡಿದರು.
ಆರ್. ಅಶೋಕ್ ಅವರ “ಸಿದ್ದರಾಮಯ್ಯ ಈ ಬಾರಿ ದಸರಾ ಉದ್ಘಾಟನೆ ಮಾಡುವುದಿಲ್ಲ” ಎಂಬ ಹೇಳಿಕೆಗೆ ತಿರುಗೇಟು ನೀಡಿದ ಮಹದೇವಪ್ಪ, “ಅಶೋಕ್ ಅವರು ಕೇವಲ ವಿರೋಧ ಪಕ್ಷದ ನಾಯಕ. ಅವರಿಗೆ ಕಾಂಗ್ರೆಸ್ ಅಥವಾ ಸರ್ಕಾರದ ವಿಷಯಗಳಲ್ಲಿ ಮಾತಾಡುವ ಹಕ್ಕಿಲ್ಲ,” ಎಂದು ಸ್ಪಷ್ಟಪಡಿಸಿದರು.
“ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ಅವರೇ ದಸರಾ ಉದ್ಘಾಟನೆ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿ ಐದು ವರ್ಷ ಪೂರೈಸುತ್ತದೆ. ಇದುವರೆಗೆ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಸರ್ಕಾರ ನಿಷ್ಠೆಯುತ ಸೇವೆ ನೀಡುತ್ತಿದೆ,” ಎಂದು ಮಹದೇವಪ್ಪ ಪುನರುಚ್ಚರಿಸಿದರು.