‘ರಾಮ್ ಸೇ ರಾಷ್ಟ್ರ’ ಎಂದರೆ ಸರ್ವರ ಕ್ಷೇಮ; ಗಮನಸೆಳೆದ ಮೋದಿ ಭಾಷಣ

ರಾಯಪುರ: “ಛತ್ತೀಸ್‌ಗಢವು ಭಗವಾನ್ ಶ್ರೀರಾಮನ ತಾಯಿಯ ಮನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವ ರಾಯಪುರದ ಹೊಸ ವಿಧಾನಸಭೆ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ರಾಜ್ಯದ 25ನೇ ಸಂಸ್ಥಾಪನಾ ದಿನಾಚರಣೆಯ ವೇಳೆ ಶನಿವಾರ ಮಾತನಾಡಿದ ಅವರು, “ರಾಮರಾಜ್ಯದಿಂದ ರಾಷ್ಟ್ರ” ಎಂಬ ತತ್ವದ ಆಳವಾದ ನಿರೂಪಣೆಯನ್ನು ನೀಡಿದರು.

‘ರಾಮ್ ಸೇ ರಾಷ್ಟ್ರ’ ಎಂದರೆ ಸರ್ವರ ಕ್ಷೇಮ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ – ಯಾರನ್ನೂ ಬಿಡದ ಸಮಗ್ರ ಅಭಿವೃದ್ಧಿ. ‘ರಾಮ್’ ಎಂದರೆ ಬಡತನ, ಅಸಮಾನತೆ, ಅನ್ಯಾಯದಿಂದ ಮುಕ್ತವಾದ ಸಮಾಜ. ಆರೋಗ್ಯ, ಸಂತೋಷ ಮತ್ತು ನ್ಯಾಯ ಮೌಲ್ಯಗಳಲ್ಲಿ ನಿಂತ ರಾಷ್ಟ್ರ. ‘ರಾಮ್’ ಎಂದರೆ ದುಷ್ಟ ಶಕ್ತಿಗಳ ನಾಶ – ನಕ್ಸಲಿಸಂ ವಿರುದ್ಧದ ಹೋರಾಟದಂತೆ ಎಂದು ಪ್ರಧಾನಿ ಹೇಳಿದರು.

ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸ ವಿಧಾನಸಭೆ ಕಟ್ಟಡವು ಕೇವಲ ಕಟ್ಟಡವಲ್ಲ; ಇದು 2047ರ ‘ವಿಕ್ಷಿತ್ ಭಾರತ’ದ ರಾಮರಾಜ್ಯ ಬರೆಯುವ ದೇವಾಲಯವಾಗಿದೆ. ಪ್ರತಿಯೊಂದು ಕಾನೂನು, ಪ್ರತಿಯೊಂದು ಚರ್ಚೆ ರೈತರ ಕಲ್ಯಾಣ, ಮಹಿಳೆಯರ ಸಬಲೀಕರಣ, ಬುಡಕಟ್ಟು ಜನಾಂಗದ ಘನತೆ ಮತ್ತು ಯುವಕರ ಸಮೃದ್ಧಿಯನ್ನು ಪ್ರತಿಬಿಂಬಿಸಬೇಕು ಎಂದು ಹಿತವಚನ ನೀಡಿದರು.

‘ನಾಗರಿಕ್ ದೇವೋ ಭವ’ ಆಡಳಿತ ಮಾದರಿ:

ರಾಜ್ಯದ ಬುಡಕಟ್ಟು ಪರಂಪರೆ ಹಾಗೂ ಮುರಿಯಾ ದರ್ಬಾರ್‌ನ ಪ್ರಜಾಪ್ರಭುತ್ವ ಮನೋಭಾವವನ್ನು ಸ್ಮರಿಸಿದ ಪ್ರಧಾನಿ ಮೋದಿ, ನಾಗರಿಕ ದೇವೋ ಭವ ಎನ್ನುವ ತತ್ವದ ಆಧಾರದ ಮೇಲೆ ಜನಕೇಂದ್ರಿತ ಆಡಳಿತ ಮಾದರಿಯ ಅಗತ್ಯವನ್ನು ಒತ್ತಿಹೇಳಿದರು.

“ರಾಜ್‌ಕುಮಾರ್ ಕಾಲೇಜಿನಿಂದ ಆರಂಭವಾದ ಅಧಿವೇಶನಗಳು ಇಂದು ಈ ಆಧುನಿಕ, ಡಿಜಿಟಲ್ ವಿಧಾನಸಭೆಯವರೆಗೆ ಬಂದಿವೆ. ಪ್ರತಿಯೊಂದು ಕಂಬ ಪಾರದರ್ಶಕತೆಯನ್ನು, ಪ್ರತಿಯೊಂದು ಕಾರಿಡಾರ್ ಹೊಣೆಗಾರಿಕೆಯನ್ನು ಪ್ರತಿನಿಧಿಸುತ್ತದೆ,” ಎಂದು ಹೇಳಿದರು.

ಛತ್ತೀಸ್‌ಗಢ ರಾಜ್ಯ ನಿರ್ಮಾಣದ ವಾಸ್ತುಶಿಲ್ಪಿಯಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮೋದಿ ಸ್ಮರಿಸಿದರು. ಅಟಲ್ ಜೀ ಅವರ ನಿರ್ಧಾರ ಛತ್ತೀಸ್‌ಗಢಕ್ಕೆ ಗುರುತು ನೀಡಿತು; ಇಂದು ಅದು ಆತ್ಮವಿಶ್ವಾಸದಿಂದ ಬೆಳೆಯುತ್ತಿದೆ ಎಂದು ಹೇಳಿದರು.

“ಧರ್ತಿ ಧುರಂಧರ್” ಎಂಬ ಥೀಮ್‌ನಡಿ ನಿರ್ಮಿಸಲಾದ ₹324 ಕೋಟಿ ವೆಚ್ಚದ ಈ ಕಟ್ಟಡವು ಅಕ್ಕಿ ಧಾನ್ಯ ಛಾವಣಿಗಳು, ಬುಡಕಟ್ಟು ಶಿಲ್ಪಕಲೆ ಹಾಗೂ ಸೌರಶಕ್ತಿ ಆಧಾರಿತ ವಿನ್ಯಾಸದಿಂದ ವಿಶಿಷ್ಟವಾಗಿದೆ. 200 ಸದಸ್ಯರ ಸಭಾಂಗಣ, 500 ಆಸನಗಳ ಪ್ರೇಕ್ಷಾಗೃಹ, ಆಸ್ಪತ್ರೆ ಮತ್ತು ನಾಗರಿಕ ಸೌಲಭ್ಯಗಳಿವೆ. ಈ ಶಕ್ತಿಸೌಧದ ಪ್ರತಿಕ್ರಿಯಿಸಿದ ಪ್ರಧಾನಿ, ‘ಇದು ಕೇವಲ ಕಟ್ಟಡವಲ್ಲ; ಇದು ಛತ್ತೀಸ್‌ಗಢದ ಆತ್ಮವನ್ನು ಕಲ್ಲಿನಲ್ಲಿ ಕಾಣುವಂತೆ ಮಾಡಿದೆ’ ಎಂದಬಣ್ಣಿಸಿದರು.

Related posts