ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರದ ಪಕ್ಕದಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಶಾಖಾ ಮಠ ನಿರ್ಮಾಣವಾಗಲಿದೆ. ಅಯೋಧ್ಯೆಯ ಈ ಭವ್ಯ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಶಾಖಾ ಮಠಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಶ್ರೀ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ದಿವ್ಯ ಉಪಸ್ಥಿತಿಯಲ್ಲಿ ಈ ಕೈಂಕರ್ಯ ನೆರವೇರಿದೆ. ಶಿಲಾನ್ಯಾಸ ಕೈಂಕರ್ಯದಲ್ಲಿ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಪೂಜಾರಿ, ಮೀನುಗಾರಿಕಾ ಸಚಿವರಾದ ಮಾಂಕಾಳ ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಹರಿಕೃಷ್ಣ ಬಂಟ್ವಾಳ್ ಹಾಗೂ ಅನೇಕ ಧಾರ್ಮಿಕ ಪ್ರಮುಖರು ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಪದ್ಮರಾಜ್ ಆರ್.ಪೂಜಾರಿ, ಧರ್ಮದ ನಡೆಯ ಮೂಲಕವಷ್ಟೇ ಧರ್ಮ ಉಳಿಯಬಹುದು. ಧರ್ಮ ಉಳಿದಲ್ಲಿ ಮಾತ್ರ ನಾವು ಉಳಿಯುವೆವು ಎಂದರು. ಜಾತಿಯ ವೈಷಮ್ಯ ಬಿಟ್ಟು ಎಲ್ಲರೂ ಒಂದೇ ಎಂಬುದೇ ನಿಜವಾದ ಧರ್ಮದ ಸಾರವಾಗಿದೆ ಎಂದು ಪ್ರತಿಪಾದಿಸಿದ ಅವರು, ಸಮಸ್ತ ಹಿಂದೂ ಧರ್ಮದ ಉಳಿವಿಗೆ ಬ್ರಹ್ಮಶ್ರೀ ನಾರಾಯಣಗುರುಗಳು ಬೋಧಿಸಿದ ಮಾನವಧರ್ಮ ಪರಿಪಾಲನೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳು ಇಡೀ ವಿಶ್ವಕ್ಕೆ ಅಗತ್ಯ ಎಂದು ಇತ್ತೀಚೆಗೆ ನಿಧನರಾದ ಪೋಪ್ ವಂದನೀಯ ಫ್ರಾನ್ಸಿಸ್ ಅವರು ಸಾರಿದ್ದರು. ಇದನ್ನು ಗಮನಿಸಿದರೆ, ಗುರುಗಳ ಸಂದೇಶ ಎಷ್ಟು ಇಂದಿಗೆ ಅನಿವಾರ್ಯ ಎಂಬುದು ತಿಳಿಯುತ್ತದೆ ಎಂದು ಪದ್ಮರಾಜ್ ಹೇಳಿದರು.