ಮುಜರಾಯಿ ದೇಗುಲ ಅರ್ಚಕರಿಗೆ, ನೌಕರರಿಗೆ ಬಂಪರ್..

ಬೆಂಗಳೂರು: ರಾಜಯದ ಮುಜರಾಯಿ ಇಲಾಖಾ ವ್ಯಾಪ್ತಿಯ ದೇಗುಲಗಳಲ್ಲಿ ಹಿರಿಯ ನಾಗರೀಕರಿಗೆ ದೇವತಾ ಕೈಕರ್ಯ ಸುಲಭವಾಗಲಿದೆ. ಮಹತ್ವದ ನಿರ್ಧಾರದಲ್ಲಿ, 65 ವರ್ಷ ಮೇಲ್ಟಟ್ಟ ಹಿರಿಯ ನಾಗರೀಕರಿಗೆ ದೇವಸ್ಥಾನಗಳಲ್ಲಿ ಸರತಿಯಲ್ಲಿ ನಿಲ್ಲದೆ ನೇರವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರೂ ಆಗಿರುವ ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಶುಕ್ರವಾರ (13.10.2023) 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಪ್ರಥಮ ಸಭೆಯಲ್ಲಿ ಹಲವು ಜನಪರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ದೇವಸ್ಥಾನಗಳಲ್ಲಿ ಮೊಬೈಲ್‌ ಪೋನ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆಯೂ ಧಾರ್ಮಿಕ ಪರಿಷತ್ ಒಲವು ವ್ಯಕ್ತಪಡಿಸಿದೆ.

ಇದೇ ವೇಳೆ, ಕಾಶಿ ಯಾತ್ರೆಯಲ್ಲಿ ಗಯಾ ವನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ ರೂ.5,000/- ಇದ್ದ ಸಹಾಯ ಧನವನ್ನು ರೂ.7,500/-ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಊಟ ತಿಂಡಿಗಾಗಿ ಪ್ರತ್ಯೇಕ ವ್ಯವಸ್ಥೆ, ವೈದ್ಯರ ಸೇವೆಗಾಗಿ ಪ್ರತ್ಯೇಕ ಭೋಗಿಯನ್ನು ಕಲ್ಪಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿ ದೇವಾಲಯ ಅಥವಾಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರ ಹಾಗೂ ನೌಕರರು ಮೃತಪಟ್ಟಲ್ಲಿ 2 ಲಕ್ಷ ರೂಪಾಯಿ ಪರಿಹಾರನೀಡುವ ಯೋಜನೆಗೆ ಅಸ್ತು ಎಂದಿರುವ ಧಾರ್ಮಿಕ ಪರಿಷತ್ ಸಭೆ, ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ʼಬಿʼ ಮತ್ತು ‘ಸಿ’ ಅಧಿಸೂಚಿತ ದೇವಾಲಯ ಅಥವಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಾರ್ಷಿಕ ಪ್ರೋತ್ಸಾಹ ಧನವನ್ನು ವಿತರಿಸಲು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಸಭೆಯ ಪ್ರಮುಖ ನಿರ್ಧಾರಗಳು ಹೀಗಿವೆ: 

  • ಮೈಸೂರು ಶ್ರೀ ಚಾಮುಂಡಿ ಬೆಟ್ಟಕ್ಕೆ ಪ್ರಾಧಿಕಾರವನ್ನು ರಚಿಸಲಾಗುತ್ತಿದೆ.

  • ತಸ್ತಿಕ್‌ ಹಣವನ್ನು ನೇರವಾಗಿ ಅರ್ಚಕರುಗಳ ಖಾತೆಗೆ ಡಿಬಿಟಿ ವರ್ಗಾಯಿಸಲು ಕ್ರಮ ವಹಿಸಿದ್ದು, ಇದರಿಂದ ಅರ್ಚಕರು ಜಿಲ್ಲಾಧಿಕಾರಿ ಕಛೇರಿ/ ತಹಶೀಲ್ದಾರ್‌ ಕಚೇರಿಗಳಿಗೆ ಅನಗತ್ಯವಾಗಿ ಓಡಾಡುವುದನ್ನು ನಿವಾರಿಸಲಾಗುತ್ತಿದೆ.

  • ಶಿವಾರಪಟ್ಟಣ, ಕೋಲಾರದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರವನ್ನು ಪ್ರಾರಂಭ.

  • 65 ವರ್ಷ ಮೇಲ್ಟಟ್ಟ ಹಿರಿಯ ನಾಗರೀಕರಿಗೆ ದೇವಸ್ಥಾನಗಳಲ್ಲಿ ಸರತಿಯಲ್ಲಿ ನಿಲ್ಲದೆ ನೇರವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

  • ಈಗಾಗಲೇ ಮೊಬೈಲ್‌ ಪೋನ್‌ ಬಳಕೆಯನ್ನು ನಿಷೇದಿಸಲಾಗಿದ್ದು, ಸಂಪೂರ್ಣ ನಿಷೇದಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು.

  • ಕಾಶಿ ಯಾತ್ರೆಯಲ್ಲಿ ಗಯಾ ವನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ ರೂ.5,000/- ಇದ್ದ ಸಹಾಯ ಧನವನ್ನು ರೂ.7,500/-ಕ್ಕೆ ಹೆಚ್ಚಿಸಲಾಗಿದೆ., ಊಟ ತಿಂಡಿಗಾಗಿ ಪ್ರತ್ಯೇಕ ವ್ಯವಸ್ಥೆ, ವೈದ್ಯರ ಸೇವೆಗಾಗಿ ಪ್ರತ್ಯೇಕ ಭೋಗಿಯನ್ನು ಕಲ್ಪಿಸಲಾಗಿದೆ.

  • ಕಾಶಿ ಯಾತ್ರೆ, ಚಾರ್‌ದಾಮ್‌ ಯಾತ್ರೆ ಮತ್ತು ಮಾನಸ ಸರೋವರ ಯಾತ್ರೆಗೆ ತೆರಳುವ ಕರ್ನಾಟಕದ ಯಾತ್ರಿಗಳಿಗೆ ಹೊಸದಾಗಿ ಮೊಬೈಲ್‌ ಆಪ್‌ ಸಿದ್ದಗೊಳಿಸಿದ್ದು, ಜಿಪಿಎಸ್ ಮೂಲಕ ಯಾತ್ರಿಗಳು ತಮ್ಮ ಫೋಟೋ ಅಪ್‌ಲೋಡ್‌ ಮಾಡಿದರೆ ಸದರಿಯವರ ಖಾತೆಗೆ ಕ್ರಮವಾಗಿ ಕಾಶಿಯಾತ್ರೆಗೆ ರೂ.5,000/-,  ಚಾರ್‌ದಾಮ್‌ ಯಾತ್ರೆಗೆ ರೂ. 20,000/- ಹಾಗೂ ಮಾನಸ ಸರೋವರ ಯಾತ್ರೆಗೆ ರೂ.30,000/- ಗಳನ್ನು ನೇರವಾಗಿ  ಖಾತೆಗೆ ಡಿಬಿಟಿ ಮೂಲಕ ಸಂದಾಯ ಮಾಡಲಾಗುತ್ತದೆ.

  • ರಾಜ್ಯದಲ್ಲಿ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ಸಮಾಜದ ಹಲವು ಕ್ಷೇತ್ರಗಳ ಮುಖಂಡರುಗಳನ್ನು ಒಳಗೊಂಡ ತಂಡ Vision Group ರಚಿಸಲು ತೀರ್ಮಾನಿಸಲಾಗಿದೆ.

  • ಪ್ರಮುಖ ದೇವಸ್ಥಾನಗಳಲ್ಲಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗುತ್ತದೆ.

  • ಸಾಮಾಜಿಕ ಜಾಲತಾಣಗಳಲ್ಲಿ ದೇವಸ್ಥಾನಕ್ಕೆ ಬರುತ್ತಿರುವ ದೇಣಿಗೆ ಹಣವನ್ನು ಬೇರೆ ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಅಪಪ್ರಚಾರ ನಡೆಯುತ್ತಿದ್ದು, 2003ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರವಿದ್ದಾಗಲೇ ಆಯಾ ದೇವಸ್ಥಾನಗಳಿಂದ ಬರುವ ಆದಾಯವನ್ನು ಆ ದೇವಸ್ಥಾನ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ. ಶೇ 10 ರಷ್ಟು (Common Pool Grant) ಮೀಸಲಿಟ್ಟ ಹಣವನ್ನು ಮುಜರಾಯಿ ಇಲಾಖೆಯಿಂದ ‘ಸಿ’ ದರ್ಜೆ ದೇವಸ್ಥಾನವನ್ನು ಅಭಿವೃದ್ಧಿಗಾಗಿ ಹಾಗೂ ‘ಸಿ’ ದರ್ಜೆ ದೇವಸ್ಥಾನದ ಅರ್ಚಕರು/ ನೌಕರರು/ ಆಗಮಿಕರ ಶ್ರೇಯೋಭಿವೃದ್ಧಿಗಾಗಿ ಬಳಕೆ. 

  • 2003ರಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ Architectural Committee ಯನ್ನು ರಚಿಸಿ ಪುರಾತನ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ರೂಪಿಸಲಾಗಿದ್ದು, ಆದರೆ ಈ ಸಮಿತಿಯು ಯಾವುದೇ ಧನಾತ್ಮಕ ಕಾರ್ಯವನ್ನು ಮಾಡದ ಕಾರಣ, ಈ ಸಮಿತಿಯನ್ನು ಹೊಸದಾಗಿ ರಚಿಸುವ ಮೂಲಕ ಸಕ್ರಿಯೆಗೊಳಿಸಿ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಯೋಜನೆ.

  • ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಲಯಗಳ ಮಾಹಿತಿಗಳನ್ನು ಭಕ್ತಾಧಿಗಳಿಗೆ/ ಸಾರ್ವಜನಿಕರಿಗೆ ಒದಗಿಸಲು ಕಾಲ್‌ ಸೆಂಟರ್‌ (Call Centre) ಅನ್ನು ತೆರೆಯಲು ಇಂದಿನ ಸಭೆಯಲ್ಲಿ ಅನುಮೋದಿಸಲಾಗಿದೆ. ಇದರಿಂದ ಭಕ್ತಾಧಿಗಳಿಗೆ ದೇವಸ್ಥಾನಗಳಲ್ಲಿ ಸೇವೆಗಳನ್ನು/ ತಂಗುವ ಕೊಠಡಿಗಳನ್ನು ಕಾಯ್ದಿರಿಸಲು ಹಾಗೂ ದರ್ಶನದ ಸಮಯದ ಕುರಿತು ಮಾಹಿತಿ ಪಡೆಯಲು ಅನುಕೂಲ ವ್ಯವಸ್ಥೆ.

  • ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಡಿಸೆಂಬರ್-2023 ರವರೆಗೆ ಕೊನೆಗೊಳ್ಳುವ ಎಲ್ಲಾ ದೇವಾಲಯದ ವ್ಯವಸ್ಥಾಪನ ಸಮಿತಿಗಳಿಗೆ ಈ ಕೂಡಲೇ ಅಧಿಸೂಚನೆ ಹೊರಡಿಸಿ ಸದಸ್ಯರುಗಳನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ.

  • ರಾಜ್ಯ ಧಾರ್ಮಿಕ ಪರಿಷತ್ತಿನ ಎಲ್ಲಾ ಸದಸ್ಯರುಗಳಿಗೆ ಐಡಿ ಕಾರ್ಡು ನೀಡಲು ನಿರ್ಧಾರ.

  • ಮೃತ ಅರ್ಚಕರ ಕುಟುಂಬಕ್ಕೆ ಪರಿಹಾರ: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರು ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ 2 ಲಕ್ಷ ರೂ ಪರಿಹಾರ. 

  • ಗುರುತಿನ ಚೀಟಿ:  ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ, ಬರುವ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ ನೌಕರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಏಕರೂಪದ ಗುರುತಿನ ಚೀಟಿಯನ್ನು ನೀಡಲು, ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು.

  • ಆಯುಷ್ಮಾನ್ ಭಾರತ್ ಯೋಜನೆ: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯ/ ಸಂಸ್ಥೆಗಳಲ್ಲಿ ನಿರ್ವಹಿಸುತ್ತಿರುವ ಅರ್ಚಕರು/ ನೌಕರರಿಗೆ ಆಯುಷ್ಮಾನ್ ಭಾರತ್‌ ಯೋಜನೆಯಡಿಯಲ್ಲಿ ಆರೋಗ್ಯ ಕಾರ್ಡ್ ಅನ್ನು ಜಿಲ್ಲಾ ಕೇಂದ್ರಗಳಲ್ಲಿ ವಿತರಿಸಲು ಹಾಗೂ ಇದಕ್ಕೆ ಅಗತ್ಯವಿರುವ ನೋಂದಣಿ ಶುಲ್ಕವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು.

  • ಉಚಿತವಾಗಿ ಕಾಶಿ ಯಾತ್ರೆ: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ʼಬಿʼ ಮತ್ತು ‘ಸಿ’ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು, 1200 ಜನ (ವಾರ್ಷಿಕವಾಗಿ) ಅರ್ಚಕ/ನೌಕರರನ್ನು   ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ದರ್ಶನ್ ಯೋಜನೆಯಡಿ ಯಾತ್ರೆಗೆ ಪ್ರತಿ ವರ್ಷ ಉಚಿತವಾಗಿ ಕಳುಹಿಸುವುದು. ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸುವುದು.

  • ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ : ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ʼಬಿʼ ಮತ್ತು ‘ಸಿ’ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರ ಹಾಗೂ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಾರ್ಷಿಕ ಪ್ರೋತ್ಸಾಹ ಧನವನ್ನು ವಿತರಿಸಲು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲು ತೀರ್ಮಾನಿಸಿದೆ. ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) ವಿದ್ಯಾರ್ಥಿಗಳಿಗೆ ರೂ. 5,000, ಐ.ಟಿ.ಐ/ಜೆ ಒ ಸಿ/ಡಿಪ್ಲೋಮ ವಿದ್ಯಾರ್ಥಿಗಳಿಗೆ ರೂ. 5,000, ಪದವಿ ವಿದ್ಯಾರ್ಥಿಗಳಿಗೆ ರೂ. 7,000, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರೂ 15,000, ಆರ್ಯುವೇದಿಕ್/ ಹೋಮಿಯೋಪತಿ ಪದವಿ ವಿದ್ಯಾರ್ಥಿಗಳಿಗೆ ರೂ.  25,000, ವೈದ್ಯಕೀಯ, ಡೆಂಟಲ್ ಶಿಕ್ಷಣ  ವಿದ್ಯಾರ್ಥಿಗಳಿಗೆ ರೂ. 50,000, ವಿದೇಶ ವ್ಯಾಸಂಗ ವಿದ್ಯಾರ್ಥಿಗಳಿಗೆ (ಒಂದು ಬಾರಿ ಮಾತ್ರ) ರೂ. 1,00,000 ಪ್ರೋತ್ಸಾಹ ಧನ ನೀಡಲು ರಾಜ್ಯ ಧಾರ್ಮಿಕ ಪರಿಷತ್ ಸಭೆ ತೀರ್ಮಾನಿಸಿದೆ. 

Related posts