ಬಸವೇಶ್ವರ, ಅಂಬೇಡ್ಕರ್ ಗೌರವ ಕೈಂಕರ್ಯ; ಲಂಡನ್ ಸಮಾರಂಭಕ್ಕೆ ಸಿಎಂಗೆ ಆಹ್ವಾನ

ಬೆಂಗಳೂರು: ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವಣ್ಣರ ತತ್ವಗಳನ್ನು ಜಗತ್ತಿನ ಉದ್ದಗಲಕ್ಕೆ ಸಾರುತ್ತಿರುವ ಯುನೈಟೆಡ್ ಕಿಂಗ್‌ಡಂನ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಈ ಬಾರಿ ವಿಭಿನ್ನ ರೀತಿಯ ಕಾರ್ಯಕ್ರಮದ ತಯಾರಿಯಲ್ಲಿದೆ.

ಲಂಡನ್ ನಗರಿಯ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಪ್ರತೀ ವರ್ಷ ಸಾಮಾಜಿಕ ಕೈಂಕರ್ಯಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಮುಂದಾಳುತ್ವದಲ್ಲಿ 2016ರಲ್ಲಿ ಲಂಡನ್‌ನ ಸಂಸತ್ ಭವನ ಬಳಿ, ಥೇಮ್ಸ್ ನದಿ ತೀರದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪಿಸಲಾಗಿತ್ತು. ಈ ಮೂರ್ತಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಅಂದಿನಿಂದ ಈ ಸ್ಥಳ ಅತ್ಯಂತ ಶ್ರದ್ಧಾಸ್ಥಳವಾಗಿ ಜಾಗತಿಕ ಗಮನಸೆಳೆಯುತ್ತಿದೆ. ಈ ಸ್ಥಳದಲ್ಲೇ ಸಾಮಾಜಿಕ ಹರಿಕಾರರಾದ ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ನಮನ ಕಾರ್ಯಕ್ರಮ ಆಯೋಜಿಸಲು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸಿದ್ದತೆ ಕೈಗೊಂಡಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ.

ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ನೇತೃತ್ವದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪ್ರಮುಖರ ನಿಯೋಗ ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 7) ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ.
ಈ ಸಂದರ್ಭದಲ್ಲಿ ಲಂಡನ್‌ನಲ್ಲಿ ಕನ್ನಡಿಗರ ಹಾಗೂ ಅನಿವಾಸಿ ಭಾರತೀಯರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್‌ನ ಪ್ರಯತ್ನ ಬಗ್ಗೆ ಸಿಎಂ ಶ್ಲಾಘಿಸಿದರು. ಫೌಂಡೇಷನ್ ವತಿಯಿಂದ ನಡೆಸುತ್ತಾ ಬಂದಿರುವ ಕಾರ್ಯಕ್ರಮಗಳ ಬಗ್ಗೆ ಡಾ.ನೀರಜ್ ಪಾಟೀಲ್ ಅವರು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು.

ಏನಿದು ಗೌರವ ನಮನ?

ಲಂಡನ್‌ನಲ್ಲಿರುವ ಕನ್ನಡಿಗರು ಹಾಗೂ ಅನಿವಾಸಿ ಭಾರತೀಯರ ಸಮೂಹ ಪ್ರತೀ ವರ್ಷ ಜಗಜ್ಯೋತಿ ಬಸವೇಶ್ವರ ಹಾಗೂ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ನಮನ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಅಸ್ಪೃಶ್ಯತೆ ಸೇರಿದಂತೆ ಸಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ತತ್ವಗಳನ್ನು ಸಾರಿರುವ ಈ ಮಹಾನೀಯರನ್ನು ಒಟ್ಟಾಗಿ ಗೌರವಿಸುವ ಕೈಂಕರ್ಯವನ್ನು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಆಯೋಜಿಸುತ್ತಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ಅಹಿಂದ ಸಿದ್ದಾಂತ ಪ್ರತಿಪಾದಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಾ.ನೀರಜ್ ಪಾಟೀಲ್ ತಂಡ ಆಹ್ವಾನಿಸಿದೆ.

Related posts