ವಿನಯ್ ಆತ್ಮಹತ್ಯೆ ಪ್ರತಿಧ್ವನಿ: ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದ ಅಶೋಕ್

ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಪಕ್ಷ ನಾಯಕ್ ಆರ್ ಅಶೋಕ್, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಮಾಧ್ಯಮಗಳ ಜೊತೆ ಮಾತನಾಡಿ, ಈ ಘಟನೆ ನಮ್ಮ ಕಾರ್ಯಕರ್ತರಿಗೆ ನೋವು ತಂದಿದೆ ಎಂದರು. ವಿನಯ್ ಒಳ್ಳೆಯ ವಿದ್ಯಾವಂತ, ಪತ್ನಿ ಸಾಫ್ಟ್‌ವೇರ್ ಇಂಜಿನಿಯರ್. 2-3 ತಿಂಗಳಿಂದ ಎಸ್ಪಿ ಮೂಲಕ ಕಾಂಗ್ರೆಸ್ ಶಾಸಕರು, ಶಾಸಕರ ಆಪ್ತ ತೆನ್ನೀರ ಮಹಿನಾ ಕಿರುಕುಳ ನೀಡಿದ್ದಾರೆ. ಶಾಸಕ ಧಮ್ಕಿ ಹಾಕಿದ್ದನ್ನು ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ವಿನಯ್ ಮಡಿಕೇರಿ ಬಿಟ್ಟು ಬೆಂಗಳೂರಿನ ಮನೆಗೆ ಬಂದರೂ ಪೊಲೀಸರು ಕಿರುಕುಳ ಕೊಟ್ಟಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳಲಾಗುತ್ತಿದೆ. ಸಿಎಂ ಪದಕ ಲಭಿಸಿದ ಪೊಲೀಸ್ ಮೇಲೆ ಲೋಕಾಯುಕ್ತ ದಾಳಿ ಆಗಿದೆ ಎಂದು ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ವಿನಯ್ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು. ಅದಕ್ಕಾಗಿ ಸೂಕ್ತ ತನಿಖೆ ಆಗಬೇಕು, ಕೊಡಗು ಎಸ್ಪಿ ಅಮಾನತು ಆಗಬೇಕು ಎಂದು ಆಗ್ರಹಿಸಿದರು.

Related posts