ಬೆಂಗಳೂರು: RSS ಮೇಲಿನ ನಿರ್ಬಂಧ ಕುರಿತ ಖಾಸಗಿ ಚಾನೆಲ್ ಗೆ ಸಂದರ್ಶನ ನೀಡಿರುವ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. RSS ಬ್ಯಾನ್ ಮಾಡುವುದಾದರೆ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬಹುದಲ್ಲವೇ ಎಂಬ ನ್ಯಾಯಮೂರ್ತಿ ಸಂತೋಷ ಹೆಗ್ಡೆಯವರ ಹೇಳಿಕೆಯು ಅವರ ದ್ವಂದ್ವ ವ್ಯಕ್ತಿತ್ವವನ್ನು ತೋರಿಸಿದಂತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ವಕೀಲರೂ ಆದ ರಮೇಶ್ ಬಾಬು ಶನಿವಾರ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿ ಗಮನಸೆಳೆಯಿತು. ಸ್ವತಂತ್ರ ಪೂರ್ವದಲ್ಲಿ ಎರಡು ಬಾರಿ ಮತ್ತು ಸ್ವತಂತ್ರಾ ನಂತರ ಮೂರು ಬಾರಿ ಬ್ಯಾನ್ ಗೆ ಒಳಗಾಗಿದ್ದ ಸಂಘ ಪರಿವಾರದ ಪರವಾಗಿ ಸಮರ್ಥ ವಕ್ತಾರರಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಸಂತೋಷ ಹೆಗ್ಡೆಯವರು ವಹಿಸಿಕೊಂಡಂತಿದೆ ಎಂದು ಟೀಕಿಸಿದರು.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮೇಲೆ ಹಲ್ಲೆಗೆ ಯತ್ನಿಸಿದ ಸನಾತನಿಗಳ ಮೇಲೆ ಧ್ವನಿ ಎತ್ತದ ಸಂತೋಷ ಹೆಗ್ಡೆ, ಖಾಸಗಿ ಚಾನೆಲ್ ಮುಂದೆ RSS ಪರವಾಗಿ ಪೈಪೋಟಿಗೆ ಬಿದ್ದು ಸಮರ್ಥನೆಗೆ ಮುಂದಾಗಿರುವುದು ವ್ಯವಸ್ಥೆಯ ವಿಪರ್ಯಾಸ ಎಂದು ರಮೇಶ್ ಬಾಬು ವಿಶ್ಲೇಷಿಸಿದ್ದಾರೆ. RSSಗೆ ಅನುಮತಿ ನಿರಾಕರಿಸಲು ಯಾವುದೇ ಗುರುತರ ಆರೋಪ ಇಲ್ಲ, ಕೊಲೆ ಮಾಡಿಲ್ಲ ಎನ್ನುವ ಹೆಗ್ಡೆರವರಿಗೆ ಮಹಾತ್ಮ ಗಾಂಧಿಯ ಕೊಲೆ ಮತ್ತು ಕೊಲೆ ಆರೋಪಿಗಳು ಕಣ್ಣಿಗೆ ಕಾಣಿಸುವುದಿಲ್ಲ. ಅದೇ ರೀತಿ ವಯೋಸಹಜ ಗಾಂಧಿಯವರ ಊರುಗೋಲನ್ನು, ಸಂಘದ ಲಾಠಿಗೆ ಹೋಲಿಕೆ ಮಾಡಿರುವುದೂ ಸರಿಯಲ್ಲ. ಸಂಘ ಪರಿವಾರ ಬೇರೆಬೇರೆ ಹೆಸರಲ್ಲಿ ಸುಮಾರು 50 ಸಂಘಟನೆಗಳ ಮೂಲಕ ದೇಶದಲ್ಲಿ ವಿಷಬೀಜ ಬಿತ್ತಲು ಅರ್ಪಣೆಗೊಂಡಿದೆ ಎಂದು ರಮೇಶ್ ಬಾಬು ಆರೋಪ ಮಾಡಿದರು.
ನಮ್ಮ ದೇಶದಲ್ಲಿ ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ ನ್ಯಾಯಾಧೀಶರಲ್ಲಿ ಸಂತೋಷ್ ಹೆಗ್ಡೆ ಒಬ್ಬರು. ಅವರ ತಂದೆ ಕೆ.ಎಸ್. ಹೆಗ್ಡೆ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಕೇಂದ್ರದ ಮೊದಲ ಕಾಂಗ್ರೆಸ್ಸೇತರ ಜನತಾ ಪಕ್ಷದ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆ.ಎಸ್. ಹೆಗ್ಡೆ, ಕಾಂಗ್ರೆಸ್ ಪಕ್ಷ ಮತ್ತು ಇಂದಿರಾ ಗಾಂಧಿಯವರ ವಿರುದ್ಧವಾಗಿದ್ದರು. ಕೇಂದ್ರ ಕಾಂಗ್ರೆಸ್ ಸರ್ಕಾರದಲ್ಲಿ ತಮಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗುವ ಅವಕಾಶ ತಪ್ಪಿತ್ತೆಂಬ ಇವರ ಭಾವನೆಗೆ ಪೂರಕವಾಗಿ ಸಂತೋಷ್ ಹೆಗ್ಡೆ ಹೇಳಿಕೆ ನೀಡುತ್ತಿದ್ದಂತಿದೆ. ತಾತ್ವಿಕ ಕಾರಣಗಳಿಗಾಗಿ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ 2010ರಲ್ಲಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದ ಸಂತೋಷ್ ಹೆಗ್ಡೆ, ಅಂದು ಬಿಜೆಪಿಯ ಎಲ್.ಕೆ.ಅಡ್ವಾಣಿರವರ ಕರೆಗೆ ಓಗೊಟ್ಟು ತಮ್ಮ ರಾಜೀನಾಮೆ ಪತ್ರ ಹಿಂದಕ್ಕೆ ಪಡೆದಿದ್ದರು. ಈಗಿನ ಅವರ ಹೇಳಿಕೆ ಅದರ ಮುಂದುವರೆದ ಭಾಗ ಇದ್ದಂತಿದೆ ಎಂದು ರಮೇಶ್ ಬಾಬು ವಿಶ್ಲೇಷಿಸಿದರು.
ಪ್ರಿಯಾಂಕ ಖರ್ಗೆ ಯವರ ಒಂದು ಪತ್ರಕ್ಕೆ ತಲ್ಲಣಗೊಂಡಿರುವ RSS ಮತ್ತು ಸಂಘ ಪರಿವಾರ, ವೈಯಕ್ತಿಕ ನಿಂದನೆಯಿಂದ ಹಿಡಿದು ಪ್ರಾಣ ಬೆದರಿಕೆ ತನಕ ತನ್ನ ಪ್ರಯತ್ನಗಳನ್ನು ಬಿಚ್ಚಿಡುತ್ತಿದೆ. ಸಂಘ ಪರಿವಾರ ಪರವಾದ ಸಂತೋಷ್ ಹೆಗ್ಡೆಯವರ ಹೇಳಿಕೆ ಕೂಡಾ ಇದರಿಂದ ಹೊರತಾಗಿಲ್ಲ ಎಂದ ರಮೇಶ್ ಬಾಬು, ಸಂವಿಧಾನದ ಅಡಿಯಲ್ಲಿ ನೀಡಿರುವ ಆರ್ಟಿಕಲ್ 19ರ ಮೂಲಭೂತ ಹಕ್ಕನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸಂತೋಷ್ ಹೆಗ್ಡೆ ಮತ್ತು ಅವರ ಪಟಾಲಂ ವ್ಯಾಖ್ಯಾನ ಮಾಡಲು ಹೊರಟಿದೆ. ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರಗಳ ನಿಯಂತ್ರಣ ಅಧಿಕಾರವ ಸಮರ್ಥಿಸಿದೆ ಎಂದು ಗಮನಸೆಳೆದರು.
