ʼಆಪರೇಷನ್ ಸಿಂದೂರ್ʼ ಹಿನ್ನೆಲೆ ದೇಶದ ಜನತೆಗೆ ಆರೆಸ್ಸೆಸ್ ವಿಶೇಷ ಕರೆ

ನವದೆಹಲಿ: ಪಹಲ್‌ಗಾಮ್‌ನಲ್ಲಿ ನಿಃಶಸ್ತ್ರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ಮೇಲೆ ಮತ್ತು ಅವರ ಬೆಂಬಲಿಗರ ವ್ಯವಸ್ಥೆಯ ಮೇಲೆ ನಿರ್ಣಾಯಕವಾದ ʼಆಪರೇಷನ್ ಸಿಂದೂರ್ʼ ಮೂಲಕ ಪ್ರತ್ಯುತ್ತರ ನೀಡುತ್ತಿರುವ ಭಾರತ ಸರ್ಕಾರದ ನಾಯಕತ್ವ ಮತ್ತು ಸೇನಾಪಡೆಗಳಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಭಿನಂಧಿಸಿದೆ.

ಈ ಕುರಿತಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸರಸಂಘಚಾಲಕ ಡಾ.ಮೋಹನ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಹಿಂದೂ ಯಾತ್ರಿಗಳ ಕ್ರೂರ ಕಗ್ಗೊಲೆಯಿಂದ ಆಘಾತಕ್ಕೊಳಗಾದ ಕುಟುಂಬಗಳಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸುವ ಈ ಕಾರ್ಯಾಚರಣೆಯು ಇಡೀ ದೇಶದ ಸ್ವಾಭಿಮಾನ ಮತ್ತು ಧೈರ್ಯವನ್ನು ಹೆಚ್ಚಿಸಿದೆ ಎಂದಿದ್ದಾರೆ.

ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು, ಅವರ ಸೌಲಭ್ಯಗಳು ಮತ್ತು ಪೂರಕ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯು ಭಾರತ ದೇಶದ ಭದ್ರತೆಗೆ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎಂದು ನಾವು ಭಾವಿಸುತ್ತೇವೆ. ರಾಷ್ಟ್ರೀಯ ಸಂಕಷ್ಟದ ಈ ಘಳಿಗೆಯಲ್ಲಿ, ಇಡೀ ದೇಶವು ತನು-ಮನ-ಧನದಿಂದ ಸರ್ಕಾರ ಮತ್ತು ಸೇನಾಪಡೆಗಳ ಜೊತೆಗೆ ಒಗ್ಗಟ್ಟಾಗಿ ನಿಂತಿದೆ ಎಂದವರು ಹೇಳಿದ್ದಾರೆ.

ಭಾರತದ ಗಡಿಪ್ರದೇಶದ ಧಾರ್ಮಿಕ ಸ್ಥಳಗಳ ಮೇಲೆ ಮತ್ತು ನಾಗರಿಕ ವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನ ಸೇನೆಯಿಂದ ನಡೆಯುತ್ತಿರುವ ದಾಳಿಗಳನ್ನು ನಾವು ಖಂಡಿಸುತ್ತೇವೆ ಮತ್ತು ಈ ದಾಳಿಗಳಿಗೆ ಬಲಿಯಾದವರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಸರ್ಕಾರ ಮತ್ತು ಆಡಳಿತದಿಂದ ನೀಡಲಾದ ಎಲ್ಲಾ ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಈ ಸವಾಲಿನ ಸಂದರ್ಭದಲ್ಲಿ ಸಮಸ್ತ ದೇಶವಾಸಿಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕರೆ ನೀಡುತ್ತಿದೆ. ಜೊತೆಗೆ, ಈ ಸಂದರ್ಭದಲ್ಲಿ ಸಾಮಾಜಿಕ ಏಕತೆ ಮತ್ತು ಸೌಹಾರ್ದತೆಯನ್ನು ಭಂಗಗೊಳಿಸುವ ರಾಷ್ಟ್ರವಿರೋಧಿ ಶಕ್ತಿಗಳ ಯಾವುದೇ ಷಡ್ಯಂತ್ರ ಯಶಸ್ವಿಯಾಗದಂತೆ ಎಚ್ಚರಿಕೆ ವಹಿಸಬೇಕು, ಆ ಮೂಲಕ ನಾವೆಲ್ಲರೂ ನಾಗರಿಕ ಕರ್ತವ್ಯವನ್ನು ಪಾಲಿಸಬೇಕು. ಈ ಸಂದರ್ಭದಲ್ಲಿ ಸೇನೆ ಮತ್ತು ಸ್ಥಳೀಯ ಆಡಳಿತಕ್ಕೆ ಎಲ್ಲಿ, ಯಾವ ರೀತಿಯ ಅಗತ್ಯವಿದೆಯೋ, ಅಲ್ಲಿ ಸಾಧ್ಯವಾದ ಎಲ್ಲ ರೀತಿಯ ಸಹಕಾರಕ್ಕೆ ಸಿದ್ಧರಾಗಿರಿ ಮತ್ತು ರಾಷ್ಟ್ರೀಯ ಏಕತೆ ಮತ್ತು ಭದ್ರತೆಯನ್ನು ಕಾಪಾಡುವ ಎಲ್ಲ ಪ್ರಯತ್ನಗಳಿಗೆ ಬಲವನ್ನು ಒದಗಿಸುವ ಮೂಲಕ ದೇಶಭಕ್ತಿಯನ್ನು ಅಭಿವ್ಯಕ್ತಗೊಳಿಸಬೇಕು ಎಂದು ಅವರು ದೇಶದ ಜನತೆಗೆ ಮನವಿ ಮಾಡಿದ್ದಾರೆ.

Related posts