ಪೊಲೀಸ್ ಅಧಿಕಾರಿ ಕೈ ಮಾಡಲು ಯತ್ನ? ಸಿಎಂ ಕ್ಷಮಯಾಚನೆಗೆ ವಿಜಯೇಂದ್ರ ಆಗ್ರಹ

ಬೆಂಗಳೂರು: ಪೊಲೀಸ್ ಅಧಿಕಾರಿಯನ್ನು ಏಕವಚನದಲ್ಲಿ ಸಂಬೋಧಿಸಿ, ಹತಾಶೆಯಿಂದ ಆರ್ಭಟಿಸಿ ಕೈ ಮಾಡಲು ಮುಂದಾಗಿರುವ ಸಿದ್ದರಾಮಯ್ಯ ಅವರ ಕ್ರಮ ಮುಖ್ಯಮಂತ್ರಿ ಸ್ಥಾನದ ಘನತೆಗೆ ಧಕ್ಕೆ ತಂದ ಗೂಂಡಾ ವರ್ತನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.


ಪಾಕಿಸ್ತಾನದ ಪರ ಸಹಾನುಭೂತಿ ಮಾತನಾಡಿ ಅಖಂಡ ಭಾರತದ ಏಕತೆಯ ನಡುವೆ ಬಿರುಕು ಮೂಡಿಸುವ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ರಾಷ್ಟ್ರಭಕ್ತ ಮಹಿಳೆಯರು ದಿಟ್ಟತನದಿಂದ ಘೋಷಣೆ ಕೂಗುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಚಲಿತಗೊಂಡ ಮುಖ್ಯಮಂತ್ರಿಗಳು ಸಮವಸ್ತ್ರದಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಸಂಬೋಧಿಸಿ, ಹತಾಶೆಯಿಂದ ಆರ್ಭಟಿಸಿ ಕೈ ಮಾಡಲು ಮುಂದಾಗಿರುವ ಕ್ರಮ ಮುಖ್ಯಮಂತ್ರಿ ಸ್ಥಾನದ ಘನತೆಗೆ ಧಕ್ಕೆ ತಂದ ಗೂಂಡಾ ವರ್ತನೆಯಾಗಿದೆ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಅಧಿಕಾರ ಮದದಲ್ಲಿ ತೇಲುತ್ತಿರುವ ಸಿದ್ದರಾಮಯ್ಯನವರ ನಡೆ, ನುಡಿಗಳು ಇತ್ತೀಚಿನ ದಿನಗಳಲ್ಲಿ ವಿಪರೀತಕ್ಕೆ ಹೋಗುತ್ತಿದೆ. ಕೆಲ ತಿಂಗಳ ಹಿಂದೆ ಸಭೆಯೊಂದರಲ್ಲಿ ದಕ್ಷ ಜಿಲ್ಲಾಧಿಕಾರಿಯೊಬ್ಬರನ್ನು ಕೇವಲವಾಗಿ ಅಪಮಾನಿಸಿ, ತಮ್ಮ ಸಂಸ್ಕೃತಿ ಹೀನ ನಡುವಳಿಕೆಯನ್ನು ಸಿದ್ದರಾಮಯ್ಯನವರು ಅನಾವರಣ ಮಾಡಿಕೊಂಡಿದ್ದರು. ಅವರ ವರ್ತನೆ ಇಂದು – ನಿನ್ನೆಯದಲ್ಲ, ತಮ್ಮ ಸ್ವಕ್ಷೇತ್ರದಲ್ಲಿ ಮಹಿಳೆಯೊಬ್ಬರ ಸೆರಗೆಳೆದು ರೌದ್ರಾವತಾರ ಪ್ರದರ್ಶಿಸಿದ ಘಟನೆ ಇನ್ನೂ ಹಸಿಯಾಗಿಯೇ ಇದೆ. ಅದೇ ರೀತಿ ಮೈಸೂರು ಭಾಗದ ಹಿರಿಯ ರಾಜಕಾರಿಣಿಯಾಗಿದ್ದ ನಂಜನಗೂಡಿನ ದಿವಂಗತ ಎಂ.ಮಹದೇವು ಅವರ ಮೇಲೂ ಹಲ್ಲೆ ನಡೆಸಿದ ಪ್ರಕರಣವನ್ನು ಮಾಧ್ಯಮಗಳು ʼಸಿದ್ದು-ಗುದ್ದುʼ ಪ್ರಕರಣ ಎಂದೇ ವ್ಯಾಖ್ಯಾನಿಸಿದ್ದವು’ ಎಂದು ಹಳೆಯ ಘಟನೆಗಳನ್ನು ನೆನೆಪಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅನುಭವದ ಹಿರಿತನ, ನಡುವಳಿಕೆ, ಹಾಗೂ ಮಾತುಗಳನ್ನು ಮಾಗಿಸಬೇಕು, ಆದರೆ ಸಿದ್ದರಾಮಯ್ಯನವರ ವಿಷಯದಲ್ಲಿ ಇದು ತಿರುಗು-ಮುರುಗಾಗಿದೆ, ದಿನೇ ದಿನೇ ಅವರು ತಮ್ಮ ನಾಲಿಗೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಹತಾಶೆಯಿಂದ ಜನರು ಹಾಗೂ ಅಧಿಕಾರಿಗಳ ಮೇಲೆ ಅಹಂಕಾರ ಹಾಗೂ ತೋಳ್ಬಲ ಪ್ರದರ್ಶಿಸುತ್ತಿದ್ದಾರೆ. ಇದು ಅತ್ಯಂತ ದುರ್ದೈವದ ಹಾಗೂ ಖಂಡನೀಯ ವರ್ತನೆಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಹುದೊಡ್ಡ ಹಿನ್ನೆಲೆಯಿದೆ, ಆ ಸ್ಥಾನದಲ್ಲಿ ಕುಳಿತ ಅನೇಕ ಮಹನೀಯರು ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮೇರುಮಟ್ಟಕ್ಕೆ ಕೊಂಡೊಯ್ದಿದ್ದಾರೆ, ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಕರ್ನಾಟಕ ಎಂದರೆ ಸಜ್ಜನಿಕೆಯ ರಾಜಕಾರಣ, ಸಂಸ್ಕೃತಿ-ಸಂಸ್ಕಾರದ ನೆಲೆಬೀಡು ಎಂಬ ಮಾತಿದೆ, ಆದರೆ ಸಿದ್ದರಾಮಯ್ಯನವರ ವರ್ತನೆಯಿಂದಾಗಿ ಇತಿಹಾಸದ ಪರಂಪರೆಗೆ ಕಪ್ಪು ಮಸಿ ಬಳಿಯುತ್ತಿದೆ. ಕರ್ನಾಟಕದ ಗೌರವ ಹಾಗೂ ಮುಖ್ಯ ಮಂತ್ರಿ ಸ್ಥಾನದ ಘನತೆ ಸಂಪೂರ್ಣ ಕುಗ್ಗುತ್ತಿದೆ. ರಾಷ್ಟ್ರ ಭಕ್ತರೆಂದರೆ ಕೆಂಡಕಾರುವ, ದೇಶ ಸುರಕ್ಷತೆಯ ಬಗ್ಗೆ ಉಡಾಫೆಯ ಮಾತನಾಡುವ ಸಿದ್ದರಾಮಯ್ಯನವರಿಂದಾಗಿ ಇಡೀ ರಾಷ್ಟ್ರ ‘ಭಾರತದ ಸುಭದ್ರತೆಗೆ’ ಒಕ್ಕೊರಲ ದನಿಯಾಗಿ ನಿಂತಿದ್ದರೆ, ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದ ಮುಖ್ಯಮಂತ್ರಿ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಕರ್ನಾಟಕದ ಜನತೆಯ ದೇಶಾಭಿಮಾನವನ್ನು ಮೆಟ್ಟಿ ನಿಲ್ಲುವ ವರ್ತನೆ ಸಿದ್ದರಾಮಯ್ಯನವರು ತೋರುತ್ತಿದ್ದಾರೆ, ಅದರ ಮುಂದುವರೆದ ಭಾಗ ಬೆಳಗಾವಿಯ ಘಟನೆ ಎಂದು ಬಣ್ಣಿಸಿರುವ ವಿಜಯೇಂದ್ರ, ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗುವ ಮೂಲಕ ರಾಷ್ಟ್ರ ಭಕ್ತಿ ಮೆರೆದ ದಿಟ್ಟ ಮಹಿಳೆಯರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ. ಕರ್ತವ್ಯ ನಿರತ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ದರ್ಪ ತೋರಿ ಅವರ ಮೇಲೆ ಹಲ್ಲೆಗೆ ಮುಂದಾದ ಸಿದ್ದರಾಮಯ್ಯನವರ ವರ್ತನೆ ಇಡೀ ಪೊಲೀಸ್‌ ಇಲಾಖೆಗೆ ಮಾಡಿದ ಅಪಮಾನವಾಗಿದೆ. ಈ ಹಿನ್ನೆಲೆಯಲ್ಲಿ ಅವಮಾನಕ್ಕೊಳಗಾದ ಪೊಲೀಸ್‌ ಅಧಿಕಾರಿ ಹಾಗೂ ಇಡೀ ಪೊಲೀಸ್‌ ಇಲಾಖೆಗೆ ಸಿದ್ದರಾಮಯ್ಯನವರು ಕ್ಷಮೆಯಾಚಿಸಬೇಕೆಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

Related posts