ವಿದ್ಯುತ್ ದರ ಏರಿಕೆ; ಸಿದ್ದು ಸರ್ಕಾರದ ವಿರುದ್ದ ಆರಂಭದಲ್ಲೇ ಜನಾಕ್ರೋಶದ ಭುಗಿಲು

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನತೆಗೆ ಆರಂಭದಲ್ಲೇ ಶಾಕ್ ಕೊಟ್ಟಿದೆ. ಷರತ್ತು, ಸರಾಸರಿ ಸೂತ್ರ ಮುಂದಿಟ್ಟು ‘ಗ್ಯಾರೆಂಟಿ’ ಜಾರಿಯ ವಿಚಾರದಲ್ಲಿ ಕಣ್ಣಾಮುಚ್ಚಾಳೆ ಆಡುತ್ತಿರುವ ಸಿದ್ದರಾಮಯ್ಯ ಸರ್ಕಾರ, ಉಚಿತ ವಿದ್ಯುತ್ ವಿಚಾರದಲ್ಲಿ ಬಡವರ ಪಾಲಿಗೆ ನಿರಾಶಾದಾಯಕ ನಡೆ ಇಟ್ಟಿದೆ ಎಂಬುದೇ ವಿಷಾದನೀಯ ಸಂಗತಿ. ಅದೇ ಹೊತ್ತಿಗೆ ದರ ಏರಿಕೆ ಮೂಲಕ ಸರ್ಕಾರ ಮತ್ತೊಂದು ವಿದ್ಯುತ್ ಶಾಕ್ ಕೊಟ್ಟಿದೆ.

ಕಾಲಕಾಲಕ್ಕೆ ವಿದ್ಯುತ್ ದರ ಏರಿಕೆ ಮಾಡುವುದು ಆಡಳಿತಾತ್ಮಕ ನಿರ್ದಾರ ಎಂಬುದರಲ್ಲಿ ಎರಡು ಮಾಎಇಲ್ಲ. ಆದರೆ ಈ ಬಾರಿ ವಿದ್ಯುತ್ ದರ ಏರಿಕೆ ಮಾಡಿರುವ ವೈಖರಿ ಮಾತ್ರ ಆಕ್ಷೇಪಾರ್ಹ. ವಿಧಾನಸಭಾ ಚುನಾವಣೋತ್ತರದಲ್ಲಿ ನೀಡಲಾದ ಮೊದಲ ವಿದ್ಯುತ್ ಬಿಲ್ ರಾಜ್ಯದ ಜನರಿಗೆ ಆಘಾತ ತಂದಿದೆ. ದಿಢೀರ್ ದುಪ್ಪಟ್ಟಾಗಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸುತ್ತಿದ್ದಂತೆಯೇ ರಾಜಕಾರಣದಲ್ಲೂ ಸಙಚಲನ ಸೃಷ್ಟಿಯಾಗಿದೆ. ಈ ವರದಿಗಳನ್ನಾಧರಿಸಿ ಸಾರ್ವಜನಿಕರು ಸರ್ಕಾರದ ವಿರುದ್ದ ಹಿಡಿಶಾಪ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ ‘ವಿದ್ಯುತ್ ದರ ಏರಿಕೆಯು ಹಿಂದಿನ ಸರ್ಕಾರದ ಕ್ರಮ’ ಎಂದಿದೆ. ಚುನಾವಣೆಗೆ ಮುನ್ನವೇ ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆಗೆ ಕ್ರಮ ಕೈಗೊಂಡಿತ್ತು ಎಂದು ಕಾಂಗ್ರೆಸ್ ನಾಯಕರು ಬೊಟ್ಟು ಮಾಡಿದ್ದಾರೆ.

ಒಂದೆಡೆ ‘ಗ್ಯಾರೆಂಟಿ’ ಭರವಸೆ ಈಡೇರಿಕೆ ಮೂಲಕ ಉಚಿತ ಕೊಡುಗೆಯ ಪ್ರಹಸನ ನಡೆಯುತ್ತಿದ್ದು ಇನ್ನೊಂದೆಡೆ ವಿದ್ಯುತ್ ದರ ಏರಿಕೆಯ ಬರೆ ಎಳೆಯಲಾಗಿದೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಉಚಿತದ ಕೊಡುಗೆಗಳು ಜನಪರ ಕ್ರಮವೇ ಆಗಿದ್ದರೆ, ವಿದ್ಯುತ್ ದರ ಏರಿಕೆಯು ಹಿಂದಿನ ಬಿಜೆಪಿ ಸರ್ಕಾರದ್ದೇ ಕ್ರಮವಾಗಿದ್ದರೆ, ಈಗಿನ ಸರ್ಕಾರ ಅದನ್ನು ರದ್ದುಪಡಿಸಬಹುದಲ್ಲವೇ? ಎಂಬ ಅಭಿಪ್ರಾಯ ಸಾರ್ವಜನಿಕರದ್ದು. ಆದರೆ ಸರ್ಕಾರ ಈ ಬಗ್ಗೆ ಸಕಾಲದಲ್ಲೇ ಕ್ರಮಕೈಗೊಳ್ಳದೆ, ದುಬಾರಿ ವಿದ್ಯುತ್ ಬಿಲ್ ವಸೂಲಿಗೆ ನಿಂತಿರುವುದು ಹಾಸ್ಯಾಸ್ಪದ ನಡೆ ಎಂಬುದೂ ಹಲವರ ಅಭಿಮತ. 

ಸಾರ್ವಜನಿಕರಿಂದ ಛೀಮಾರಿ..!

ವಿದ್ಯುತ್ ದರ ಏರಿಕೆ ವಿಚಾರದಲ್ಲಿ ಸರ್ಕಾರದ ನಡೆ ರಾಜಕೀಯ ಜಟಾಪಟಿಗಷ್ಷ್ಟೇ ಕಾರಣವಾಗಿಲ್ಲ, ಸಾರ್ವಜನಿಕರೂ ವ್ಯವಸ್ಥೆ ವಿರುದ್ದ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ. ಈ ಜಟಾಪಟಿಯು ಸೋಸಿಯಲ್ ಮೀಡಿಯಾಗಳಲ್ಲೂ ಪ್ರತಿಧ್ವನಿಸಿದೆ. ಉಚಿತದ ಹೊರೆಯಿಂದ ಪಾರಾಗಲು ದರ ಏರಿಕೆಯಾಗಲೇ ಬೇಕಿದೆ. ಆದರೆ ಈ ಲೋಪವನ್ನು ಹಿಂದಿನ ಸರ್ಕಾರದ ಮೇಲೆ ಹೊರಿಸುವ ಆತುರ ಸಿದ್ದರಾಮಯ್ಯ ಸರ್ಕಾರಕ್ಕೆ ಇದ್ದಂತಿದೆ ಎಂಬುದು ತಜ್ಞರ ವಿಶ್ಲೇಷಣೆ.

ಇದೇ ವೇಳೆ, ಈ ಮುಜುಗರದಿಂದ ಪಾರಾಗಲು ಆಡಳಿತ ಪಕ್ಷ ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಈ ಆತುರದಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಗದೊಮ್ಮೆ ಮುಜುಗರದ ಪರಿಸ್ಥಿತಿಯಲ್ಲಿ ಸಿಲುಕುವಂತಾಗಿದೆ. ‘ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ ಬಿಜೆಪಿ ನಾಟಕ ಮಾಡುತ್ತಿದೆ. ಬಿಜೆಪಿ ಸರ್ಕಾರ ತೊಲಗುವಾಗಲೂ ಜನತೆಗೆ ಬರೆ ಎಳೆದೇ ಹೋಗಿದೆ’ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ನಡೆ ಬಗ್ಗೆ ನೆಟ್ಟಿಗರು ಲೇವಡಿ ಮಾಡಿದ್ದಾರೆ.

ಸೈದ್ದಾಂತಿಕ ವಿಚಾರದಲ್ಲಿ ಹೊಡೆದಾಟಕ್ಕೆ ಸಿದ್ದವಾಗಿದ್ದ ಕಾಂಗ್ರೆಸ್ ನಾಯಕರು, ಚುನಾವಣೆಗೆ ಮುನ್ನ ಬಿಜೆಪಿ ಸರ್ಕಾರದ ಹಲವು ನಿರ್ದಾರಗಳನ್ನು ಕೈಬಿಡುವುದಾಗಿ ಹೇಳಿದ್ದರು. ಅದೇ ರೀತಿ, ರಾಜ್ಯದ ಸಮಸ್ತ ಜನರಿಗೆ ಹೊರೆಯಾಗುವಂತೆ ಹಿಂದಿನ ಬೊಮ್ಮಾಯಿ ಸರ್ಕಾರ ಕ್ರಮ ಕೈಗೊಂಡಿದ್ದೇ ಆದರೆ, ಜನಪರ ಆಡಳಿತ ನೀಡುವುದಾಗಿ ಹೇಳುತ್ತಿರುವ ಈಗಿನ ನೂತನ ಕಾಂಗ್ರೆಸ್ ಸರ್ಕಾರವು ಈ ವಿದ್ಯುತ್ ದರ ಏರಿಕೆಯ ಕ್ರಮದಿಂದಲೂ ಹಿಂದೆ ಸರಿಯಲಿ ಎಂದು ಜನತೆ ಸವಾಲು ಹಾಕಿದ್ದಾರೆ.

‘ಹಿಂದಿನ ಸರ್ಕಾರದ ಆದೇಶಗಳನ್ನು ವಾಪಸು ತಗೋಳ್ಳೋಕೆ ಆಗುತ್ತೆ, ಆದರೆ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ತಡೆಹಿಡಿಯಲು ಸಾಶ್ಯವಿಲ್ಲವೇ?  ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಈ ರೀತಿ ನಡೆದುಕೊಳ್ಳಲು ನಾಚಿಕೆ ಆಗಲ್ವ’ ಎಂದು‌ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಸಿದ್ದರಾಮಯ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಬಿಜೆಪಿಯವರು ತಂದ ಬಿಲ್ ಅನ್ನು ವಾಪಸ್ ಪಡೆದು ಬೆಲೆ ಕಡಿಮೆ ಮಾಡಿ ಇದೇ ತಿಂಗಳಿನಿಂದ ಜಾರಿಗೆ ಬರುವ ಹಾಗೆ ಮಾಡಿ‌ ಆಮೇಲೆ ಬಿಜೆಪಿಯವರ ಮೇಲೆ ಅರೋಪ ಮಾಡಿ. ಇಲ್ಲವಾದರೆ ಈ ಕೇಸರಾಟದ ರಾಜಕೀಯ ನಿಲ್ಲಿಸಿ’ ಎಂದು ಜನಸಾಮಾನ್ಯರು ತಾಕೀತು ಮಾಡಿರುವ ವೈಖರಿ ಕಾಂಗ್ರೆಸ್ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.

Related posts