ಮೈಸೂರು, ಗೌರೀಬಿದನೂರು, ಕೋಲಾರಕ್ಕೆ ಉಪನಗರ ರೈಲು ಯೋಜನೆ ವಿಸ್ತರಣೆ: ಎಂ.ಬಿ.ಪಾಟೀಲ್

ಬೆಂಗಳೂರು: ಕೇವಲ ಬೆಂಗಳೂರು ನೆರೆಹೊರೆಯ ಪ್ರದೇಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಉಪನಗರ ರೈಲು ಯೋಜನೆಯನ್ನು ಸುತ್ತಲಿನ ದೂರದ ನಗರಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಯೋಜನೆಯನ್ನು ಪರಿಷ್ಕರಿಸಿ, ಹೊಸದಾಗಿ ಪ್ರಸ್ತಾವನೆ ಸಲ್ಲಿಸಬೇಕು. ಹೀಗಾದರೆ ಮಾತ್ರ ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಬೃಹತ್ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಸೂಚಿಸಿದ್ದಾರೆ.

ಮೂಲಸೌಕರ್ಯ ಇಲಾಖೆಯ ಅಧಿಕಾರಿಗಳ ಜತೆ ಖನಿಜ ಭವನದಲ್ಲಿ ನಡೆಸಿದ ಸುದೀರ್ಘ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ಈ ಮಹತ್ತ್ವದ ನಿರ್ದೇಶನ ನೀಡಿದ್ದಾರೆ. ಈಗ 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆಯ ಮೊದಲನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಉದ್ದೇಶಿತ ಒಟ್ಟಾರೆ ಯೋಜನೆಗೆ 15,767 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಆದರೆ ಇದರ ಸದ್ಯದ ಸ್ವರೂಪದಿಂದ ಹೆಚ್ಚಿನ ಪ್ರಯೋಜನವಿಲ್ಲ. ಇದನ್ನು ರಾಮನಗರದಿಂದ ಮೈಸೂರು, ದೊಡ್ಡಬಳ್ಳಾಪುರದಿಂದ ಗೌರಿಬಿದನೂರು-ಹಿಂದೂಪುರ, ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ವಿಸ್ತರಿಸಬೇಕು. ಈ ಸಂಬಂಧ ಯೋಜನೆಯನ್ನು ಪರಿಷ್ಕರಿಸಿ, ಮಂಡಳಿ ಮುಂದೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ವಿವರಿಸಿದರು.

ಸದ್ಯಕ್ಕೆ ಸಬರ್ಬನ್ ರೈಲು ಯೋಜನೆಯನ್ನು ರಾಮನಗರ, ಚಿಕ್ಕಬಾಣಾವರ, ದೊಡ್ಡಬಳ್ಳಾಪುರ, ವೈಟ್ ಫೀಲ್ಡ್ ವರೆಗೆ ಮುಟ್ಟಿಸುವ ಗುರಿ ಇದೆ. ಆದರೆ ಇವೆಲ್ಲವೂ ಈಗಾಗಲೇ ಬೆಂಗಳೂರಿನ ಭಾಗವಾಗಿವೆ. ಆದ್ದರಿಂದ ರಾಜಧಾನಿಯ ಸುತ್ತಲಿನ ನೂರು ಕಿ.ಮೀ. ಸುತ್ತಳತೆಯಲ್ಲಿ ಇರುವ ನಗರಗಳಿಗೆ ಸಬರ್ಬನ್ ರೈಲು ಸೌಕರ್ಯ ಒದಗಿಸಬೇಕು. ಬೆಂಗಳೂರಿನ ಉದ್ದಿಮೆಗಳಿಗೆ ಬೇಕಾದ ಜನರು ಈ ಊರುಗಳಿಂದ ಸುಗಮವಾಗಿ ದಿನವೂ ಓಡಾಡುವಂತೆ ಆಗಬೇಕು. ಇದು ಸಂಚಾರ ದಟ್ಟಣೆಯ ಜತೆಗೆ ವಲಸೆಯ ಸಮಸ್ಯೆಗೂ ಕಡಿವಾಣ ಹಾಕುತ್ತದೆ ಎಂದು ಅವರು ವಿವರಿಸಿದ್ದಾರೆ.

ಹಂತ-1ರ ಅಡಿಯಲ್ಲಿ ಈಗಾಗಲೇ ಚಿಕ್ಕಬಾಣಾವರ ಮತ್ತು ಬೆನ್ನಿಗಾನಹಳ್ಳಿ ನಡುವೆ ಕಾಮಗಾರಿ ನಡೆಯುತ್ತಿದೆ. ಇದನ್ನು ತುಮಕೂರಿನ ಕಡೆಯಲ್ಲಿ ಡಾಬಸಪೇಟೆಯ ತನಕ ವಿಸ್ತರಿಸಬೇಕು. ಅಲ್ಲಿ ಕೈಗಾರಿಕಾ ಪ್ರದೇಶ ಇರುವ ಹಿನ್ನೆಲೆಯಲ್ಲಿ ಇದು ಅತ್ಯಗತ್ಯವಾಗಿದೆ. ಈ ಕೆಲಸವನ್ನು ಮೊದಲ ಹಂತದಲ್ಲೇ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರತೀ ಹತ್ತು ನಿಮಿಷಕ್ಕೆ ಒಂದರಂತೆ ಸಬರ್ಬನ್ ರೈಲು ಸೇವೆ ಒದಗಿಸುವುದು ನಮ್ಮ ಗುರಿಯಾಗಿದೆ. ಸುಗಮ ಸಂಚಾರ ವ್ಯವಸ್ಥೆಯ ಜಾಲವನ್ನು ಬೆಳೆಸುವುದು ಮೂಲಸೌಲಭ್ಯ ಅಭಿವೃದ್ಧಿಯ ಹೆಗ್ಗುರಿಗಳಲ್ಲಿ ಒಂದಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

Related posts