ದಸರಾ ಅವಧಿಯಲ್ಲಷ್ಟೇ ವಿಶೇಷ ಬಸ್ ಟಿಕೆಟ್ ದರ ಹೆಚ್ಚಳ; ಸೀಮಿತ ಅವಧಿ ನಂತರ ಯಥಾಸ್ಥಿತಿ.. ಟಿಕೆಟ್ ದರ ವ್ಯತ್ಯಾಸದ ಟ್ವೀಟಾಸ್ತ್ರಕ್ಕೆ KSRTC ಸ್ಪಷ್ಟನೆ

ರಾಜಧಾನಿ-ಸಾಂಸ್ಜೃತಿಕ ನಗರಿ ನಡುವೆ ದಸರಾ ಸಂದರ್ಭ ಸೀಮಿತ ಅವಧಿಗಷ್ಟೇ KSRTC ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ನಿಗಮ ಸ್ಪಷ್ಟಪಡಿಸಿದೆ‌. 

ಬೆಂಗಳೂರು: KSRTC ದರ ಹೆಚ್ಚಳ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿರುವ ಚರ್ಚೆ ಹಿನ್ನೆಲೆಯಲ್ಲಿ ವಿದ್ಯಮಾನಗಳ ಕುರಿತಂತೆ ಸ್ಪಷ್ಟನೆ ನೀಡಿರುವ ನಿಗಮ, ವಿಶೇಷ ಸಂದರ್ಭಗಳಲ್ಲಿ ವಿಶೇಷ ಸೌಲಭ್ಯಕ್ಕನುಗುಣವಾಗಿ ಕೈಗೊಳ್ಳುವ ನಿರ್ಧಾರ ದಸರಾ ವಿಶೇಷ ಸಂದರ್ಭದಲ್ಲಿ ಅನ್ವಯವಾಗಿದೆ. ಇದು ಸೀಮಿತ ಅವಧಿಯ ಕ್ರಮವಾಗಿದೆ ಎಂದು ಹೇಳಿದೆ.‌

ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕಳೆದ 4 ದಶಕಗಳಿಂದಲೂ ಪ್ರತಿ ವರುಷ ದಸರಾ ನಿಮಿತ್ತ 10 ದಿನಗಳ ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ , ಮೈಸೂರು-ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ದಸರಾ ವಿಶೇಷ ತಡೆರಹಿತ ಬಸ್ಸುಗಳಿಗೆ ನಿಯಮಾವಳಿಗಳನ್ವಯ ಶೇ.20 ಪ್ರಯಾಣ ದರ ಹೆಚ್ಚಿಸಿಗುತ್ತಿದೆ. ಸದರಿ ಪ್ರಯಾಣ ದರವು ಸೀಮಿತ ಅವಧಿ ಮುಗಿದ ಕೂಡಲೇ ಸ್ಥಗಿತಗೊಳ್ಳುತ್ತದೆ. ಅದರಂತೆ ಪ್ರಸ್ತುತ ದರವು ಕೂಡ ದಿನಾಂಕ 30.10.23 ಕ್ಕೆ ಕೊನೆಗೊಳ್ಳಲಿದ್ದು, ಮೊದಲಿನ ದರದಲ್ಲಿಯೇ ಬಸ್ಸುಗಳು ಕಾರ್ಯಾಚರಣೆಯಾಗುತ್ತದೆ. ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಸಂದರ್ಭದಲ್ಲಿ ಒಂದು ಕಡೆ ಮಾತ್ರ ಜನ ಸಂದಣಿ ಇರುತ್ತದೆ. ಆದರೆ ಅದೇ ಬಸ್ಸುಗಳು ಮೈಸೂರಿನಿಂದ ವಾಪಸ್ಸು ಬರುವಾಗ ಪ್ರಯಾಣಿಕರಿಲ್ಲದೆ‌ ಕಾರ್ಯಾಚರಣೆ ಮಾಡಬೇಕಾಗಿರುತ್ತದೆ. ಆದ್ದರಿಂದ‌ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಈ‌ ಕ್ರಮವನ್ನು ಮೊದಲಿನಿಂದಲೂ ಅನುಸರಿಸಲಾಗುತ್ತಿದೆ. (ಇತ್ತೀಚೆಗೆ ಅಂದರೆ ಕಳೆದ‌‌ ನಾಲ್ಕು ಐದು ವರುಷಗಳಲ್ಲಿಯೂ ಸಹ ಸೀಮಿತ ಅವಧಿಗೆ ಅನ್ವಯವಾಗುವಂತೆ ದಸರಾ ಸಮಯದಲ್ಲಿ ದರ ಹೆಚ್ಚಳ ಮಾಡಲಾಗಿರುತ್ತದೆ) ಎಂದು ಈ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.‌

ಮೈಸೂರು – ಬೆಂಗಳೂರು ನಡುವೆ ಈ‌ ಹಿಂದೆ ದರ ಹೆಚ್ಚಳವಾಗಿರುವುದಕ್ಕೆ ಕಾರಣ,ಮೈಸೂರು ಎಕ್ಸ್‌ಪ್ರೆಸ್‌ ವೇ ಎರಡು ಟೋಲ್‌ಗಳ ದರದಲ್ಲಿ ಏಕಮಾರ್ಗದಲ್ಲಿಯೇ (One way) ಹಠಾತ್ತನೆ ರೂ.1090 ಹೆಚ್ಚಳವಾಗಿದ್ದರಿಂದ, ಪ್ರಯಾಣ ದರದಲ್ಲಿ ಟೋಲ್ ಹಣವನ್ನು ಸೇರ್ಪಡೆಗೊಳಿಸಿ ಹೆಚ್ಚಳ ಮಾಡಲಾಗಿತ್ತು‌. ಈ ದರವು ಎಕ್ಸ್‌ಪ್ರೆಸ್ ವೇ ಅಲ್ಲಿ‌ ಕಾರ್ಯಾಚರಣೆಯಾಗುವ ತಡೆರಹಿತ ಬಸ್ಸುಗಳಿಗೆ ಮಾತ್ರ ಅನ್ವಯಿಸುತ್ತದೆ. ಎಕ್ಸ್‌ಪ್ರೆಸ್‌ ವೇ ಹೊರತುಪಡಿಸಿ ನೇರ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳಲ್ಲಿ ಈಗಲೂ ಹಳೆಯ ಪ್ರಯಾಣ ದರವೇ ಚಾಲ್ತಿಯಲ್ಲಿದೆ ಎಂದು ನಿಗಮ ಹೇಳಿದೆ.‌

ಇದು ಸಾಮಾನ್ಯ ಪ್ರಕ್ರಿಯೆ ಆಗಿದ್ದು, ರಾಜ್ಯ/ ಅಂತರರಾಜ್ಯದ ಯಾವುದೇ ಭಾಗದಲ್ಲಿ ಟೋಲ್ ದರ ಹೆಚ್ಚಳವಾದಲ್ಲಿ,‌ ಆ ಮಾರ್ಗದ ಬಸ್ಸುಗಳಲ್ಲಿ ದರ‌ ಹೆಚ್ಚಳವಾಗುವುದು ನಿರಂತರವಾಗಿ‌ ಸಾರಿಗೆ ಸಂಸ್ಥೆಗಳಲ್ಲಿ‌ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿರುತ್ತದೆ ಎಂದು ಕೆಎಸ್ಸಾರ್ಟಿಸಿ ಸ್ಪಷ್ಟಪಡಿಸಿದೆ.

Related posts