ಬೆಂಗಳೂರು: ಕರುನಾಡಿನ ಐತಿಹಾಸಿಕ ಕುಂಭಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಮುಜರಾಯಿ ಮಂತ್ರಿ ರಾಮಲಿಂಗಾ ರೆಡ್ಡಿ ಪಣತೊಟ್ಟಿದ್ದಾರೆ. ಮಹತ್ವದ ನಿರ್ಧಾರವೊಂದರಲ್ಲಿ ರಾಜ್ಯ ಸರ್ಕಾರವು ಟಿ.ನರಸೀಪುರದ ಕುಂಭಮೇಳಕ್ಕೆ ರೂ. 6 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಬಗ್ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಸುಮಾರು ಮೂರೂವರೆ ದಶಕದಿಂದಲೂ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ತಿನರಸೀಪುರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.
ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ. ದಕ್ಷಿಣ ಭಾರತದಲ್ಲಿ ಈ ಪುಣ್ಯಸ್ನಾನವನ್ನು ಪ್ರಾರಂಭಿಸಲು ಪ್ರಮುಖರಾದವರು ಆದಿಚುಂಚನಗಿರಿಯ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಕೈಲಾಸಾಶ್ರಮ ತಿರುಚ್ಚಿ ಮಹಾಸಂಸ್ಥಾನ ಮಠದ ಶ್ರೀ ಜಯೇಂದ್ರಪುರಿ ಮಹಾ ಸ್ವಾಮಿ. ದಕ್ಷಿಣ ಭಾರತದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುವ ಸ್ಥಳ ಇದಾಗಿದೆ.
ಕರುನಾಡಿನ ಈ ಮಹಾ ಕುಂಭಮೇಳಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯದಲ್ಲಿನ ವಿವಿಧ ಮಠಗಳು ಹಾಗೂ ದೇವಾಲಗಳಿಗೆ ಮುಖ್ಯಮಂತ್ರಿಗಳ ವಿಶೇಷ ಸಹಾಯಧನದ ಅನುದಾನದಲ್ಲಿ ರೂ 6 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ. ಉಸ್ತುವಾರಿ ಸಚಿವರಾದ ಜಿಲ್ಲಾ ಹೆಚ್.ಸಿ.ಮಹದೇವಪ್ಪರವರು ಸಂಗಮದ ಪುಣ್ಯಕ್ಷೇತ್ರದಲ್ಲಿ ಫೆಬ್ರವರಿ 2025ರ ದಿನಾಂಕ 10. 11. 12ರಂದು ನಡೆಯುವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಮತ್ತು ವಿಜೃಂಭಣೆಯಿಂದ ನಡೆಸಲು ಸಕಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ತಿರುಮಕೂಡಲು ನರಸೀಪುರ (ಟಿ. ನರಸೀಪುರ) ದಲ್ಲಿ ಕಾವೇರಿ, ಕಬಿನಿ ಮತ್ತು ಸ್ಪಟಿಕ ಸರೋವರದ ಸಂಗಮವಾಗುತ್ತಿದ್ದು, ಇಲ್ಲಿ ಸ್ಪಟಿಕ ಸರೋವರ ಇದು ಗುಪ್ತ ಗಾಮಿನಿಯಾಗಿದೆ ಎಂದು ಹೇಳಲಾಗುತ್ತದೆ. ಈ ಸ್ಥಳವು ಮೂರು ವರ್ಷಗಳಿಗೊಮ್ಮೆ ದಕ್ಷಿಣದ ಕುಂಭಮೇಳಕ್ಕೆ ಸಾಕ್ಷಿಯಾಗುತ್ತಿದೆ.
ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವುದಿಂದ ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ಮಾಡಿಕೊಳ್ಳಲು ಈ ಅನುದಾನ ಬಳಸಿಕೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಕಳೆದ ಹನ್ನೊಂದು ಕುಂಭಮೇಳಗಳನ್ನು ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಎಲ್ಲಾ ಧರ್ಮಪೀಠಗಳ ನೇತೃತ್ವದಲ್ಲಿ ಸಾವಿರಾರು ಸಾಧು ಸಂತರು ಮತ್ತು ಲಕ್ಷಾಂತರ ಭಕ್ತಾದಿಗಳೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ 2022ರಲ್ಲಿ ನಡೆಯಬೇಕಿದ್ದ 12ನೇ ಕುಂಭಮೇಳ ನಡೆಯಲಿಲ್ಲ. ಪ್ರಸ್ತುತ ನಡೆಯಲಿರುವ ಮಹಾಕುಂಭಮೇಳವು 12ನೇ ಕುಂಭಮೇಳವಾಗಿ, ಈ ಪುಣ್ಯಕ್ಷೇತ್ರದಲ್ಲಿ ನಾಡಿನ ಹಲವಾರು ಧಾರ್ಮಿಕ ಮುಖಂಡರು ಮತ್ತು ಸಾಧುಸಂತರು ಹಾಗೂ ರಾಜ್ಯ ಸರ್ಕಾರದ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.