ಸದನದಲ್ಲಿ ಗಲಭೆಗೆ ಪ್ರಚೋದಿಸಿದರೇ ಅಶೋಕ್? ಸ್ಪೀಕರ್’ಗೆ ಕಾಂಗ್ರೆಸ್ ದೂರು, ವಿಪಕ್ಷ ನಾಯಕರ ಅಮಾನತಿಗೆ ಆಗ್ರಹ

ಬೆಂಗಳೂರು: ವಿಧಾನಸಭೆಯಲ್ಲಿ ಸದನಕ್ಕೆ ಅಗೌರವ ತೋರಿದ ಆರೋಪದಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆಯಾದರೂ ಆ ಅಶಿಸ್ತಿಗೆ ಪ್ರಚೋದನೆ ನೀಡಿರುವ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಗಮನಸೆಳೆದಿದೆ. ಈ ಕುರಿತಂತೆ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಸ್ಪೀಕರ್ ಯು.ಟಿ.ಖದರ್ ಅವರಿಗೆ ನೀಡಿದ್ದಾರೆ.

ಸಂಸದೀಯ ವಿಶ್ಲೇಷಕರೂ, ವಕೀಲರೂ ಆಗಿರುವ ಮಾಜಿ ಶಾಸಕ ರಮೇಶ್ ಬಾಬು ಅವರು ವಿಧಾನಸಭೆಯ ಅಧಿವೇಶನದಲ್ಲಿ ಶುಕ್ರವಾರ ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭ ಸದನವು ಅಂಗೀಕರಿಸಿದ ಪ್ರಸ್ತಾವದ ಲೋಪ ಕುರಿತು ಸ್ಪೀಕರ್ ಅವರ ಗಮನಸೆಳೆದಿದ್ದಾರೆ. ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭ 21-03-2025 ರಂದು ಸದನದಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಅವರು ಮಂಡಿಸಿದ ಪ್ರಸ್ತಾವನೆಯ ಮೇಲೆ 18 ಮಂದಿ ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತ್ತುಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಆದರೆ ಪ್ರಸ್ತಾವನೆಯನ್ನು ಅಂಗೀಕರಿಸುವ ಸಂದರ್ಭದಲ್ಲಿ ಸದನದಲ್ಲಿ ಗಲಭೆ ಮತ್ತು ಸದನಕ್ಕೆ ಅಗೌರವ ತೋರಲು ಪ್ರಚೋದನೆ ಮಾಡಿದ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಒಂದು ಲೋಪವಾಗಿದೆ ಎಂದಿದ್ದಾರೆ.


ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮತ್ತು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳಿಗೆ ಅನುಗುಣವಾಗಿ ವಿಧಾನಸಭೆಯ ಯಾವುದೇ ಸದಸ್ಯರು ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ನೀಡುವ ರೀತಿಯಲ್ಲಿ ಅಥವಾ ಅಶಿಸ್ತಿನಿಂದ ನಡೆದುಕೊಳ್ಳಲು, ಕಾರ್ಯ ಕಲಾಪಗಳಿಗೆ ದುರುದ್ದೇಶದಿಂದ ಅಡ್ಡಿಪಡಿಸಲು ಅವಕಾಶ ಇಲ್ಲ. ಕರ್ನಾಟಕ ವಿಧಾನಸಭೆಯು ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಇತರೆ ರಾಜ್ಯಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಮಾದರಿಯಾಗಿರುತ್ತದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ 24-02-2021 ರಂದು ಅಂದಿನ ಸಭಾಧ್ಯಕ್ಷರು ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ ಕಾರ್ಯಾಗಾರವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಸಿದ್ದರು. ಆ ಕಾರ್ಯಾಗಾರದ ನಂತರ ಕರ್ನಾಟಕದ ಬಿಜೆಪಿ ಶಾಸಕರು ಮತ್ತು ನಾಯಕರು ಸಂಸದೀಯ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆಂದು ರಾಜ್ಯದ ಜನ ಭಾವಿಸಿದ್ದರು ಎಂದು ರಮೇಶ್ ಬಾಬು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

21-03-2025 ರಂದು ಸದನದಲ್ಲಿ ಸಭಾಧ್ಯಕ್ಷರ ಪೀಠವನ್ನು ಸುತ್ತುವರೆದು ಸಭಾಧ್ಯಕ್ಷರ ವಿರುದ್ಧ ಅಶಿಸ್ತಿನಿಂದ ನಡೆದುಕೊಂಡ ಮತ್ತು ಸದನದ ಘನತೆ ಗೌರವಕ್ಕೆ ಚ್ಯುತಿಯನ್ನು ತಂದಿರುವ ಭಾರತೀಯ ಜನತಾ ಪಕ್ಷದ ವಿಧಾನಸಭಾ ಸದಸ್ಯರಿಗೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಚೋದನೆ ನೀಡಿದ್ದಾರೆ. ಒಬ್ಬ ವಿರೋಧ ಪಕ್ಷದ ನಾಯಕರಾಗಿ ಸದನದ ಪೀಠಕ್ಕೆ ನುಗ್ಗುವಂತೆ ಪ್ರಚೋದಿಸುವ ಅವರ ಹೇಳಿಕೆ ಮಾಧ್ಯಮಗಳಲ್ಲಿ ಬಹಳ ಸ್ಪಷ್ಟವಾಗಿ ದಾಖಲಾಗಿರುತ್ತದೆ. ಒಬ್ಬ ವಿರೋಧ ಪಕ್ಷದ ನಾಯಕರಾಗಿ ಸದನದ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯಬೇಕಾಗಿದ್ದ ಹಾಗೂ ಸಭಾಧ್ಯಕ್ಷರ ಪೀಠಕ್ಕೆ ಗೌರವ ನೀಡಬೇಕಾಗಿದ್ದ ಇವರೇ ನಿಯಮಗಳನ್ನು ಮೀರಿ ಇಡೀ ಘಟನಾವಳಿಗೆ ಕಾರಣಕರ್ತರಾದ್ದಾರೆ ಎಂದು ಆರೋಪಿಸಿರುವ ರಮೇಶ್ ಬಾಬು, ಸದನದಲ್ಲಿ ಶಿಸ್ತುಕ್ರಮದ ಪ್ರಸ್ತಾವನೆಯನ್ನು ಮಂಡಿಸುವ ಸಂದರ್ಭದಲ್ಲಿ ಇವರ ಹೆಸರನ್ನು ಪರಿಗಣಿಸದೆ ಇರುವುದು ಸರಿಯಲ್ಲ ಮತ್ತು ಲೋಪದಿಂದ ಕೂಡಿದೆ ಎಂದು ಜನಸಾಮಾನ್ಯರು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ತಮ್ಮ ಅನಿಸಿಕೆಯನ್ನು ಹೇಳುತ್ತಿದ್ದಾರೆ ಎಂದು ಸ್ಪೀಕರ್ ಅವರ ಗಮನಕ್ಕೆ ತಂದಿದ್ದಾರೆ. .

ವಿಧಾನಸಭೆಯ ನಡವಳಿಕೆಗಳ ನಿಯಮಾವಳಿ 348 ರ ಅಡಿಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನೂ ಅಮಾನತುಗೊಳಿಸಿ, ಸದನ ಅಂಗೀಕರಿಸಿರುವ ಪ್ರಸ್ತಾವದಲ್ಲಿ ಆಗಿರಬಹುದಾದ ತಪ್ಪನ್ನು ಸರಿಪಡಿಸಿ, ಸದನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಬೇಕೆಂದು ರಮೇಶ್ ಬಾಬು ಅವರು ಸ್ಪೀಕರ್ ಖದರ್ ಅವರಿಗೆ ಮನವಿ ಮಾಡಿದ್ದಾರೆ.

Related posts