ಬೆಂಗಳೂರು: ತಮಿಳಿನಿಂದಲೆ ಕನ್ನಡ ಹುಟ್ಟಿದೆ ಎಂದು ಅಜ್ಞಾನ ಮತ್ತು ಅವೈಜ್ಞಾನಿಕ ಹೇಳಿಕೆ ನೀಡಿದ ಬಹಭಾಷಾ ನಟ ಕಮಲ್ ಹಾಸನ್ ಕ್ಷಮೆ ಕೇಳುವಂತೆ ಪದೇ ಪದೇ ದುಂಬಾಲು ಬೀಳುವುದು ಕನ್ನಡಿಗರ ಸ್ವಾಭಿಮಾನಕ್ಕೆ ಅಪಮಾನ ಮಾಡಿದಂತೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ. ದೇವರಾಜ್ ಹೇಳಿದ್ದಾರೆ.
ನಟ ಕಮಲ್ ಹಾಸನ್ ಕನ್ನಡ ಭಾಷೆಯ ಇತಿಹಾಸ ತಿಳಿಯದೆ ನೀಡಿದ ಹೇಳಿಕೆ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯವ ಅಸಮಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ. ದೇವರಾಜ್, ಇತ್ತೀಚಿನ ವರ್ಷಗಳಲ್ಲಿ ಹಲವಾರು ಚಿತ್ರ ನಿರ್ಮಿಸಿ ಸೋತು ಸುಣ್ಣವಾಗಿರುವ ನಟ ಕಮಲ್ ಹಾಸನ್ ಬಿಡುಗಡೆಯಾಗಲಿರುವ ತನ್ನ ಹೊಸ ಚಿತ್ರಕ್ಕೆ ಉಚಿತ ಪ್ರಚಾರ ಪಡೆಯುವ ಉದ್ದೇಶದಿಂದ ಕನ್ನಡ ಭಾಷೆಯ ಕುರಿತು ಅಜ್ಞಾನದ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಆ ಮೂಲಕ ತನ್ನ ಚಿತ್ರಕ್ಕೆ ಉಚಿತ ಪ್ರಚಾರ ಪಡೆಯುವ ಉದ್ದೇಶವನ್ನು ಯಶಸ್ವಿಯಾಗಿ ಇಡೇರಿಸಿಕೊಂಡಿದ್ದಾರೆ ಎಂಡಿದ್ದಾರೆ.
ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಕ್ಷಮೆ ಕೇಳುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಬದಲು ಅವರ ಯಾವುದೇ ಚಿತ್ರ ಕನ್ನಡ ನೆಲದಲ್ಲಿ ಪ್ರದರ್ಶನ ಕಾಣದಂತೆ ಏಕತೆ ಪ್ರದರ್ಶಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ತನ್ನ ಚಿತ್ರದ ವಾಣಿಜ್ಯ ಲಾಭಕ್ಕಾಗಿ ಕನ್ನಡ ಭಾಷೆ ಹೆಸರಿನಲ್ಲಿ ವಿವಾದ ಸೃಷ್ಟಿಸಿರುವ ಕಮಲ್ ಹಾಸನ್ ಅತ್ಯಂತ ಕೆಟ್ಟ ಮತ್ತು ಕೊಳಕು ಮನಸ್ಥಿತಿಯ ವಿಕೃತ್ತ ವ್ಯಕ್ತಿ ಎಂಬುದನ್ನು ಜಗತ್ತಿಗೆ ಸಾಬೀತು ಪಡಿಸಿದ್ದಾರೆ ಎಂದು ದೇವರಾಜ್ ಹೇಳಿದ್ದಾರೆ.
ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರ ವಿತರಕರು ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು. ವಿತರಕರು ಕಮಲ್ ಹಾಸನ್ ಚಿತ್ರ ಹಂಚಿಕೆಯ ಒಪ್ಪಂದ ರದ್ದು ಪಡಿಸಬೇಕು. ಕಮಲ್ಹಾಸನ್ ಕ್ಷಮೆ ಕೇಳಿದರೂ ಸಹ ಥಗ್ ಲೈಫ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸಿ.ವಿ.ದೇವರಾಜ್ ಮಾಧ್ಯಮ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ. ಒಂದು ವೇಳೆ ಈ ಬಾರಿ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಚಿತ್ರ ಬಿಡುಗಡೆ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕ್ಕೆ ನೀಡಿದ್ದಾರೆ.