ಕಳಂಕಿತ ಬಿಜೆಪಿ ನಾಯಕರಿಂದ ಖರ್ಗೆ ಕುಟುಂಬದ ಬಗ್ಗೆ ಟೀಕೆ; ಕಾಂಗ್ರೆಸ್ ಶಾಸಕ ವ್ಯಂಗ್ಯ

ಬೆಂಗಳೂರು: ಕರ್ನಾಟಕ ಬಿಜೆಪಿ ಬಾಲ ಭವನದ ನಾಯಕ ವಿಜಯೇಂದ್ರರವರು ತನ್ನ ಪಟಾಲಾಂ ಜೊತೆ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಪ್ರಿಯಾಂಕ ಖರ್ಗೆ ಮತ್ತು ಅವರ ಕುಟುಂಬದ ಮೇಲೆ ಅವಲತ್ತುಕೊಂಡಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಪ್ರದೇಶ ಕಾಂಗ್ರೆಸ್ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ. ಬಿಜೆಪಿಗೆ ಮತ್ತು ಸಂಘ ಪರಿವಾರದವರಿಗೆ ತಮ್ಮ ಸಮರ್ಥನೆಗೆ ಇಂತಹ ಬಾಲಂಗೋಚಿ ನಾಯಕರ ಅವಶ್ಯಕತೆ ಬಂದಿರುವುದು ವ್ಯವಸ್ಥೆಯ ದೌರ್ಬಲ್ಯ ಎಂದು ಶಾಸಕರೂ ಆದ ರಮೇಶ್ ಬಾಬು ಹೇಳಿದ್ದಾರೆ.

ಪ್ರಿಯಾಂಕ ಖರ್ಗೆರವರನ್ನು ಟೀಕಿಸಲು ವಿಜಯೇಂದ್ರ ಮಾಡಿರುವ ಆಲಾಪ ನಗೆ ಪಾಟಲಿನ ಪರಮಾವಧಿ ಆಗಿರುತ್ತದೆ. ತಮ್ಮ ರಾಜಕೀಯ ಅಧಿಕಾರ ಸ್ಥಾನವನ್ನು, ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಪದೇ ಪದೇ ದೆಹಲಿಗೆ ದಂಡೆಯಾತ್ರೆ ಮಾಡುತ್ತಿರುವ ವಿಜಯೇಂದ್ರರವರಿಗೆ, ಆರ್.ಎಸ್.ಎಸ್ ಸಮರ್ಥಿಸುವ ಅನಿವಾರ್ಯತೆ ಸೃಷ್ಟಿ ಆಗಿರುವುದು ದೊಡ್ಡ ವಿಪರ್ಯಾಸ. ಮೊದಲು ಆರ್‌.ಎಸ್‌.ಎಸ್ ನವರು ಇವರ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಸಮರ್ಥಿಸಲಿ! ನಂತರ ಅವರು ಆರೆಸ್ಸೆಸ್ ಪರವಾದ ಹೇಳಿಕೆಯನ್ನು ನೀಡಲಿ ಎಂದು ರಮೇಶ್ ಬಾಬು ಹೇಳಿದ್ದಾರೆ.

ಪ್ರಿಯಾಂಕ ಖರ್ಗೆರವರು ಸೈದ್ಧಾಂತಿಕವಾಗಿ ಸಂಘ ಪರಿವಾರದ ಅಸ್ತಿತ್ವ, ನೋಂದಾವಣೆ ಕಾರ್ಯ ಮತ್ತು ಚಟುವಟಿಕೆಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆರವರು ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ತಡ ಬಡಾಯಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸ್ವತಃ ಮೋಹನ್ ಭಾಗವತ್ ರವರನ್ನು ಬೆಂಗಳೂರಿಗೆ ಕರೆತಂದು ಪ್ರಿಯಾಂಕಾ ಖರ್ಗೆರವರ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತದೆ. ಇಲ್ಲಿಯವರೆಗೆ ಸಂಘ ಪರಿವಾರದ ನೊಂದಾವಣೆ ಕುರಿತು ಸಮರ್ಪಕ ಉತ್ತರ ಕೊಡಲು ಅವರಿಗೆ ಸಾಧ್ಯವಾಗಿಲ್ಲ. ಇಂತಹ ಕಟು ಸತ್ಯವನ್ನು ತಿಳಿಯದ ವಿಜಯೇಂದ್ರ, ಬಿಜೆಪಿ ಅಧಿಕರಾದ ಅವಧಿಯಲ್ಲಿ ಅತ್ಯಂತ ಭ್ರಷ್ಟಾಚಾರದ ಆರೋಪವನ್ನು ಸ್ವಪಕ್ಷದಿಂದಲೇ ಎದುರಿಸಿ ಪಲಾಯನ ಗೈದಂತಹ ನಾಯಕ. ಕಳಂಕಿತ ನಾಯಕ ವಿಜಯೇಂದ್ರ ಸಂಘ ಪರಿವಾರದ ಪ್ರತಿಪಾದನೆಗೆ ಅಥವಾ ಸಮರ್ಥನೆಗೆ ನಿಲ್ಲುವ ಮೂಲಕ ಸಂಘ ಪರಿವಾರದ ಮತ್ತೊಂದು ಮುಖವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ ಎಂದು ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.

ಈ ದೇಶದ ಕಾನೂನಿನ ಅನ್ವಯ ಯಾವುದೇ ಸಂಘ ಸಂಸ್ಥೆ ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೊಂದಾವಣೆ ಆಗದ ಸಂಘ ಸಂಸ್ಥೆಯ ಲೆಕ್ಕಪತ್ರಗಳನ್ನು ಅಥವಾ ಹಣಕಾಸು ವ್ಯವಹಾರಗಳನ್ನು ಅನುಮಾನದಿಂದ ನೋಡಲು ಅವಕಾಶವಾಗುತ್ತದೆ. ರಾಷ್ಟ್ರಸೇವೆಯೇ ತನ್ನ ಧ್ಯೇಯವೆಂದು ಸಾರುವ ಸಂಘ ಪರಿವಾರದವರು ಇಲ್ಲಿಯವರೆಗೆ ಶ್ರೀ ಪ್ರಿಯಾಂಕಾ ಖರ್ಗೆರವರ ಮೂಲಬೂತ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗಿಲ್ಲ. ಆದರೆ ವಿಜಯೇಂದ್ರರಂತಹ ಕಳಂಕಿತ ನಾಯಕರನ್ನು ಮುಂದೆ ಇಟ್ಟುಕೊಂಡು ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುತ್ತಾರೆ. ಪ್ರಿಯಾಂಕ ಖರ್ಗೆ ಅವರನ್ನಾಗಲಿ ಅವರ ಕುಟುಂಬವನ್ನಾಗಲಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕಿಸುವ ಮೂಲಕ ಸಂಘ ಪರಿವಾರದವರು ತಮ್ಮ ಜವಾಬ್ದಾರಿಯಿಂದ ಪಲಾಯನ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಮಲ್ಲಿಕಾರ್ಜುನ ಖರ್ಗೆರವರು ಏಕಾಂಗಿ ಪ್ರಯತ್ನದ ಮೂಲಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ತಂದು ಕೊಟ್ಟಿದೆ. ಅದರ ಜೊತೆಗೆ ಆ ಭಾಗದಲ್ಲಿ ಕಾರ್ಮಿಕ ಆಸ್ಪತ್ರೆ, ವಿಶೇಷವಾಗಿ ರೈಲ್ವೆ ಸಂಪರ್ಕಗಳು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಕಲ್ಯಾಣ ಕರ್ನಾಟಕದ ಜನರಿಗೆ ಉದ್ಯೋಗಗಳ ಅವಕಾಶ ಮುಂತಾದ ಸಾರ್ವಜನಿಕ ಕೆಲಸಗಳಿಗೆ ಬುನಾದಿ ಹಾಕಿ ಇತರ ನಾಯಕರಿಗೆ ಆದರ್ಶಪ್ರಾಯರಾಗಿದ್ದಾರೆ. ಪ್ರಿಯಾಂಕ ಖರ್ಗೆರವರು ಐಟಿ ಬಿಟಿ ಇಲಾಖೆಯ ಮುಖಾಂತರ ಗ್ರಾಮೀಣಾಭಿವೃದ್ಧಿ ಖಾತೆಯ ಮುಖಾಂತರ ರಾಜ್ಯದ ಅಭಿವೃದ್ಧಿಗೆ ತಾವು ಮಾಡಿರುವ ಸಾಧನೆಯನ್ನು ವಿಧಾನಸಭೆಯ ಅಧಿವೇಶನದಲ್ಲಿ ಅಂಕಿ ಅಂಶಗಳ ಸಮೇತವಾಗಿ ತೆಗೆದಿಟ್ಟಿದ್ದಾರೆ ಎಂದು ರಮೇಶ್ ಬಾಬು ಹೇಳಿದ್ದಾರೆ.

ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಹಿಯನ್ನು ನಕಲು ಮಾಡಿದ ಆರೋಪವನ್ನು ಹೊತ್ತಿರುವ ವಿಜಯೇಂದ್ರ ಅವರು ಇಂದಿಗೂ ಸಹ ಸಾರ್ವಜನಿಕವಾಗಿ ಉತ್ತರವನ್ನು ನೀಡಿಲ್ಲ. ನೀರಾವರಿ ಇಲಾಖೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳ ಅವ್ಯವಹಾರ ಕುರಿತು ಅವರದೇ ಪಕ್ಷದ ಶಾಸಕರು ಆರೋಪಗಳನ್ನು ಮಾಡಿದಾಗ ಮನೆ ಸೇರಿದ ವ್ಯಕ್ತಿ ವಿಜಯೇಂದ್ರ, ವರ್ಗಾವಣೆ ದಂದೆ ಮತ್ತು ಅಕ್ರಮ ಟೆಂಡರ್ ಗಳ ಆರೋಪವನ್ನು ಹೊತ್ತಿದ್ದರು. ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ವೈಯಕ್ತಿಕವಾಗಿ ಇವರ ಕುಟುಂಬ ಮಾಡಿರುವ ಆಸ್ತಿಯ ಕುರಿತು ಅವರದೇ ಪಕ್ಷದ ನಾಯಕರಾದ ಈಶ್ವರಪ್ಪನವರು ಆರೋಪ ಮಾಡಿದ್ದಾರೆ. ಕೇವಲ ತಂದೆಯ ಹೆಸರಿನಲ್ಲಿ ರಾಜಕೀಯ ಆಶ್ರಯವನ್ನು ಪಡೆದಿರುವ ವಿಜಯೇಂದ್ರ, ತಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪದೇಪದೇ ದೆಹಲಿಗೆ ದಂಡೆಯಾತ್ರೆ ಮಾಡುತ್ತಿದ್ದಾರೆ. ಇವರು ಅಧ್ಯಕ್ಷರಾದ ನಂತರ ಬಿಜೆಪಿಯ ಗುಂಪುಗಾರಿಕೆ ಮಿತಿಮೀರಿದೆ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.

ಪ್ರಿಯಾಂಕ ಖರ್ಗೆ ಅವರನ್ನಾಗಲಿ, ಖರ್ಗೆರವರ ಕುಟುಂಬವನ್ನಾಗಲಿ ಅವರ ಸಿದ್ಧಾಂತವನ್ನಾಗಲಿ ಅಥವಾ ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳನ್ನಾಗಲಿ ಪ್ರಶ್ನಿಸುವ ಯಾವುದೇ ನೈತಿಕತೆಯನ್ನು ವಿಜಯೇಂದ್ರ ಉಳಿಸಿಕೊಂಡಿಲ್ಲ. ಇವರಿಂದ ನೈತಿಕತೆಯ ಪಾಠ, ಆದರ್ಶದ ಪಾಠ, ಸಿದ್ಧಾಂತದ ಪಾಠ ಹೇಳಿಸಿಕೊಳ್ಳುವ ಅನಿವಾರ್ಯತೆ ಅಥವಾ ಅವಶ್ಯಕತೆ ಖರ್ಗೆರವರ ಕುಟುಂಬಕ್ಕಾಗಲಿ, ಕಾಂಗ್ರೆಸ್ ಪಕ್ಷಕ್ಕೆ ಆಗಲಿ ಅಥವಾ ಕರ್ನಾಟಕದ ಜನರಿಗಾಗಲಿ ಇಲ್ಲ. ವಿಜಯೇಂದ್ರರವರ ಈ ವ್ಯರ್ಥ ಪ್ರಲಾಪವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಮತ್ತು ಸಂಘ ಪರಿವಾರ ಇಂತಹ ನಾಟಕಗಳಿಂದ ಸತ್ಯವನ್ನು ಮುಚ್ಚಲು ಸಾಧ್ಯವೇ ಇಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷ ಹೇಳಲು ಬಯಸುತ್ತದೆ ಎಂದವರು ಮಾಧ್ಯಮ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Related posts