ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಗೌರವ ನಮನ ಸಲ್ಲಿಸಿದರು.
ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಖರ್ಗೆ ಅವರು ನೆಹರು ಅವರನ್ನು “ಆಧುನಿಕ ಭಾರತದ ಶಿಲ್ಪಿ” ಎಂದು ಸ್ಮರಿಸಿ, ಪ್ರಜಾಪ್ರಭುತ್ವ, ವೈಜ್ಞಾನಿಕ ಮನೋಭಾವ, ಕೈಗಾರಿಕಾ ಅಭಿವೃದ್ಧಿ ಹಾಗೂ ಆರ್ಥಿಕ ಸ್ವಾವಲಂಬನೆ ಬಲಪಡಿಸುವಲ್ಲಿ ಅವರ ಕೊಡುಗೆಯನ್ನು ಪ್ರಶಂಸಿಸಿದರು.
ನೆಹರು ಅವರ ಮಾತುಗಳನ್ನು ಉಲ್ಲೇಖಿಸಿದ ಖರ್ಗೆ, “ರಾಷ್ಟ್ರದ ರಕ್ಷಣೆ, ಪ್ರಗತಿ ಮತ್ತು ಏಕತೆ ನಮ್ಮ ರಾಷ್ಟ್ರೀಯ ಕರ್ತವ್ಯ. ವಿಭಿನ್ನ ಧರ್ಮ, ಭಾಷೆ ಹಾಗೂ ಪ್ರಾಂತ್ಯಗಳಿದ್ದರೂ ನಮ್ಮ ನಡುವೆ ಗೋಡೆ ನಿರ್ಮಾಣವಾಗಬಾರದು” ಎಂದು ಹೇಳಿದ್ದಾರೆ.
ಸಮಾನತೆ ಮತ್ತು ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯನ್ನು ನೆಹರು ಸದಾ ಪ್ರತಿಪಾದಿಸಿದ್ದರು ಎಂದು ಹೇಳಿದ ಖರ್ಗೆ, “ಕೆಲವರು ಶ್ರೀಮಂತರಾಗಿದ್ದು ಬಹುಪಾಲು ಜನರು ಬಡವರಾಗಿರುವ ಭಾರತವನ್ನು ಅವರು ಬಯಸಿರಲಿಲ್ಲ” ಎಂದು ಹೇಳಿದರು.
ಸಂಸ್ಥೆ ನಿರ್ಮಾಣ ಹಾಗೂ ಪ್ರಗತಿಪರ ಆಡಳಿತದ ಮೂಲಕ ನೆಹರು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಗುರುತನ್ನು ತಂದರು ಎಂದು ಖರ್ಗೆ ಅಭಿಪ್ರಾಯಪಟ್ಟರು.

