ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಸಹಿಸಲ್ಲ: ಸಿಎಂ ವಿಜಯ್ ಎಚ್ಚರಿಕೆ

ಚೆನ್ನೈ: ಮಹಿಳೆಯರ ವಿರುದ್ಧ ನಿಂದನಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್, ತಮ್ಮ ರಾಜಕೀಯ ಗೆಲುವಿನಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ರಾಜಕೀಯವಾಗಿ ಕಠಿಣ ಟೀಕೆಗಳು ನಡೆಯಬಹುದು. ಆದರೆ ಮಹಿಳೆಯರನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ರಾಜಕೀಯ ನಾಯಕರಿಗೆ ಸೂಚನೆ ನೀಡಿದರು.

“ನನ್ನ ರಾಜಕೀಯ ಗೆಲುವಿಗೆ ಮಹಿಳೆಯರೇ ಪ್ರಮುಖ ಕಾರಣ. ಮಹಿಳೆಯರ ವಿರುದ್ಧದ ಯಾವುದೇ ನಿಂದನಾತ್ಮಕ ಭಾಷೆಯನ್ನು ನಾನು ಸಹಿಸುವುದಿಲ್ಲ” ಎಂದು ವಿಜಯ್ ಹೇಳಿದರು. ಆದರೆ ತಮ್ಮ ಭಾಷಣದಲ್ಲಿ ಅವರು ಯಾವುದೇ ರಾಜಕೀಯ ನಾಯಕ ಅಥವಾ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಿಲ್ಲ.

ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಅವರನ್ನು ಒಳಗೊಂಡ ವಿವಾದದ ಬೆನ್ನಲ್ಲೇ ವಿಜಯ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಡಿಎಂಕೆ ಹಿರಿಯ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದ್ದು, ತ್ರಿಶಾ ಕುರಿತು ದ್ವಂದ್ವಾರ್ಥದ ಮಾತುಗಳನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ವೈಯಕ್ತಿಕ ದಾಳಿಗಳಿಂದ ದೂರವಿರಬೇಕು ಎಂದು ವಿಜಯ್ ಆಗ್ರಹಿಸಿದ್ದಾರೆ. ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ನಿಂದನಾತ್ಮಕ ಭಾಷೆಯ ಬಳಕೆ ಹೆಚ್ಚಾಗಿದೆ. ಮಹಿಳೆಯರ ವಿರುದ್ಧ ಕೆಲವರು ದ್ವಂದ್ವಾರ್ಥದ ಭಾಷೆ ಬಳಸುತ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ ಎಂದು ವಿಜಯ್ ಹೇಳಿದರು.

ಜಯಲಲಿತಾ ಅವಮಾನ ಪ್ರಕರಣ ಪ್ರಸ್ತಾಪ

ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ 1989ರಲ್ಲಿ ನಡೆದಿದ್ದ ಎನ್ನಲಾದ ಅವಮಾನಕರ ಘಟನೆಗೂ ವಿಜಯ್ ಈ ಸಂದರ್ಭದಲ್ಲಿ ಉಲ್ಲೇಖ ಮಾಡಿದರು. ಮಹಿಳೆಯರ ಗೌರವ ಮತ್ತು ಘನತೆಯನ್ನು ಕಾಪಾಡುವುದು ರಾಜಕೀಯ ನಾಯಕರ ಜವಾಬ್ದಾರಿ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ದಾಳಿ ಹಾಗೂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗೆ ಅವಕಾಶ ನೀಡಬಾರದು ಎಂಬ ಸಂದೇಶವನ್ನು ವಿಜಯ್ ನೀಡಿದ್ದಾರೆ.

ತ್ರಿಶಾ ಹೇಳಿಕೆ ಸುತ್ತ ರಾಜಕೀಯ ಸಮರ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆ ವೇಳೆ ತ್ರಿಶಾ ಅವರ ಹೆಸರು ರಾಜಕೀಯ ಚರ್ಚೆಯಲ್ಲಿ ಪ್ರಸ್ತಾಪವಾಗಿತ್ತು. ಬಳಿಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ವಿಜಯ್ ಅವರ ಆಪ್ತ ಸ್ನೇಹಿತೆ ಎಂದು ಹೇಳಲಾಗುತ್ತಿರುವ ತ್ರಿಶಾ ಅವರನ್ನು ಪ್ರತಿಪಕ್ಷ ನಾಯಕರು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬೆಳವಣಿಗೆಗಳ ನಡುವೆಯೇ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ವಿಜಯ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

Related posts