ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಭಾದ್ರಪದ ಮಾಸದ ತದಿಗೆಯಂದು ಗೌರಿ ಹಬ್ಬ, ಮರುದಿನ ಚೌತಿಯಂದು ಗಣೇಶ ಹಬ್ಬ ಆಚರಿಸುವುದು ವಾಡಿಕೆ.

ಜನಪದ ನಂಬಿಕೆಯಂತೆ ಗೌರಿ ಕೈಲಾಸದಿಂದ ತವರುಮನೆಗೆ ಆಗಮಿಸುವ ಮಗಳ ರೂಪ. ಪತ್ನಿಯನ್ನು ಅಗಲಿರಲಾರದ ಶಿವನು ಗಣೇಶನನ್ನು ಭೂಲೋಕಕ್ಕೆ ಕಳುಹಿಸಿ ತಾಯಿಯನ್ನು ಕರೆತರಲು ಸೂಚಿಸುತ್ತಾನೆ. ಮುದ್ದಿನ ಗಣೇಶನ ಆಗಮನವನ್ನು ಸಂಭ್ರಮಿಸುವ ಜನರು ಮೋದಕ, ಕಡುಬು, ಚಕ್ಕುಲಿ, ಕರ್ಜಿಕಾಯಿ, ಉಂಡೆ ಸೇರಿದಂತೆ ವಿವಿಧ ಸಿಹಿ-ತಿಂಡಿಗಳನ್ನು ತಯಾರಿಸಿ ಆತಿಥ್ಯ ನೀಡುತ್ತಾರೆ.

ಗೌರಿ ಹಬ್ಬವನ್ನು ಮುತ್ತೈದೆಯರ ಹಬ್ಬವೆಂದೂ ಕರೆಯಲಾಗುತ್ತದೆ. ಬಾಗಿನದ ತೆಂಗಿನಕಾಯಿಗೆ ಮಾಂಗಲ್ಯ, ಅರಿಶಿಣ-ಕುಂಕುಮ, ಹೂವು, ಬಳೆ ಸೇರಿದಂತೆ ಮುತ್ತೈದೆಯರ ಸಂಕೇತಗಳನ್ನು ಜೋಡಿಸಿ ಸಿಂಗಾರಿಸಲಾಗುತ್ತದೆ. ಗೌರಿಯನ್ನು ಆರಾಧಿಸುವ ಮಹಿಳೆಯರು ಸುಮಂಗಲಿತನಕ್ಕಾಗಿ ಹಾಗೂ ಯುವತಿಯರು ಉತ್ತಮ ದಾಂಪತ್ಯದ ಆಶಯಕ್ಕಾಗಿ ಪ್ರಾರ್ಥಿಸುತ್ತಾರೆ.

ಗಣೇಶನಿಗೆ ಪಂಚಭಕ್ಷ್ಯ ಪರಮಾನ್ನ

ಗಣೇಶ ಚತುರ್ಥಿಯಂದು ಮನೆಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಗಣೇಶನ ಹುಟ್ಟುಹಬ್ಬದ ದಿನವೆಂಬ ನಂಬಿಕೆಯ ಜತೆಗೆ, ಪಾರ್ವತಿಯ ಸ್ನಾನಗೃಹಕ್ಕೆ ಶಿವನನ್ನು ಪ್ರವೇಶಿಸಲು ತಡೆದ ಕಾರಣ ಗಣೇಶನ ಶಿರಚ್ಛೇದವಾಯಿತು. ಬಳಿಕ ಆನೆಯ ತಲೆಯನ್ನು ಜೋಡಿಸಿ ಶಿವನು ಗಣೇಶನಿಗೆ ಪುನರ್ಜನ್ಮ ನೀಡಿದ ದಿನವೇ ಚೌತಿ ಎಂಬ ಪೌರಾಣಿಕ ಕಥೆಯೂ ಇದೆ.

ಪಂಚಭೂತಗಳ ಪ್ರತಿರೂಪ

ಗಣೇಶನ ಮಣ್ಣಿನ ವಿಗ್ರಹ ಪ್ರಕೃತಿ ಮತ್ತು ಪಂಚಭೂತಗಳೊಂದಿಗೆ ನಂಟು ಹೊಂದಿದೆ ಎಂಬ ನಂಬಿಕೆಯಿದೆ. ಮಣ್ಣಿನಿಂದ ತಯಾರಿಸಿದ ವಿಗ್ರಹಕ್ಕೆ ಹೂವು, ಗರಿಕೆ ಹಾಗೂ ಪತ್ರೆಗಳಿಂದ ಅಲಂಕಾರ ಮಾಡಲಾಗುತ್ತದೆ. ದೀಪ ಮತ್ತು ಆರತಿ ಮೂಲಕ ಅಗ್ನಿಯನ್ನೂ, ಪಂಕದ ಮೂಲಕ ಗಾಳಿಯನ್ನೂ ಸಂಕೇತಿಸಲಾಗುತ್ತದೆ.

ಮಳೆಗಾಲದಲ್ಲಿ ಆಗಮಿಸುವ ಗಣೇಶನನ್ನು ಬಳಿಕ ಕೆರೆ, ಬಾವಿ ಅಥವಾ ಇತರ ಜಲಮೂಲಗಳಲ್ಲಿ ವಿಸರ್ಜಿಸುವ ಸಂಪ್ರದಾಯವಿದೆ. ಹೀಗೆ ಗಣೇಶನ ಆರಾಧನೆಯಲ್ಲಿ ಭೂಮಿ, ನೀರು, ಅಗ್ನಿ, ಗಾಳಿ ಮತ್ತು ಆಕಾಶ ಎಂಬ ಪಂಚಭೂತಗಳ ಸಂಕೇತ ಅಡಕವಾಗಿದೆ. ಮನೆಗಳಲ್ಲಷ್ಟೇ ಅಲ್ಲದೆ ಸಂಘ-ಸಂಸ್ಥೆಗಳಲ್ಲೂ ಗಣೇಶನ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆದಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ.

Related posts