SIR ಪರಿಷ್ಕರಣೆಯಲ್ಲಿ ಲೋಪ: ರಾಜ್ಯಾದ್ಯಂತ ಪರಿಶೀಲನೆಗೆ KPCC ಆಗ್ರಹ

ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಹಲವು ಲೋಪಗಳು ಕಂಡುಬಂದಿವೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC), ಈ ಕುರಿತು ತಕ್ಷಣ ರಾಜ್ಯಾದ್ಯಂತ ಸಮಗ್ರ ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

KPCC ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಅವರು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು, ಗಣತಿ ನಮೂನೆಗಳು, ಮತದಾರರ ಮ್ಯಾಪಿಂಗ್ ಹಾಗೂ ಮತದಾರರನ್ನು ‘ಸ್ಥಳಾಂತರಗೊಂಡವರು’ ಅಥವಾ ‘ಮೃತರು’ ಎಂದು ವರ್ಗೀಕರಿಸುವ ಪ್ರಕ್ರಿಯೆ ಕುರಿತು ಹಲವು ಸಮಸ್ಯೆಗಳು ವರದಿಯಾಗುತ್ತಿವೆ ಎಂದು ಗಮನ ಸೆಳೆದಿದ್ದಾರೆ.

ಒಂದೇ ಮತಗಟ್ಟೆಯಲ್ಲಿ ಶೇ.62 ಮತದಾರರ ಸ್ಥಿತಿ ಪ್ರಶ್ನೆ

ವಿಧಾನಸಭಾ ಕ್ಷೇತ್ರ ಸಂಖ್ಯೆ 153ರ ಭಾಗ ಸಂಖ್ಯೆ 512ರ ಅಂಕಿಅಂಶಗಳನ್ನು ಉದಾಹರಣೆಯಾಗಿ ನೀಡಿರುವ ಅವರು, ಇಲ್ಲಿ ಒಟ್ಟು 1,016 ಮತದಾರರಿದ್ದು, 654 ಗಣತಿ ನಮೂನೆಗಳು ಸ್ವೀಕೃತವಾಗಿವೆ. 339 ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು, 19 ಮಂದಿಯನ್ನು ಮೃತರು ಹಾಗೂ 265 ಮಂದಿಯನ್ನು ಹಿಂದಿನ SIR ದಾಖಲೆಗಳಿಗೆ ಮ್ಯಾಪಿಂಗ್ ಆಗದವರು ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ 389 ಮತದಾರರು ಮಾತ್ರ ಮಾನ್ಯಗೊಂಡಿರುವುದು, ಒಟ್ಟು ಮತದಾರರ ಸುಮಾರು ಶೇ.38ರಷ್ಟಾಗುತ್ತದೆ. ಹೀಗಾಗಿ ಉಳಿದ ಮತದಾರರ ಸ್ಥಿತಿಗತಿ ಕುರಿತು ಹೆಸರುವಾರು ಪರಿಶೀಲನೆ ನಡೆಸಿ ಅಧಿಕೃತ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗಣತಿ ನಮೂನೆಗಳು ಮತದಾರರಿಗೆ ತಲುಪದಿರುವುದು ಅಥವಾ ಸರಿಯಾಗಿ ಲೆಕ್ಕಪತ್ರವಾಗದಿರುವುದು, ಅರ್ಹ ಮತದಾರರನ್ನು ಮ್ಯಾಪಿಂಗ್ ಆಗದವರೆಂದು ಗುರುತಿಸುವುದು, ಸಮರ್ಪಕ ಪರಿಶೀಲನೆಯಿಲ್ಲದೆ ಸ್ಥಳಾಂತರಗೊಂಡವರು ಅಥವಾ ಮೃತರೆಂದು ವರ್ಗೀಕರಿಸುವುದು ಸೇರಿದಂತೆ ಹಲವು ಸಮಸ್ಯೆಗಳು ರಾಜ್ಯದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ವಿವಿಧ ಭಾಗಗಳಿಂದ ಇದೇ ರೀತಿಯ ಸಮಸ್ಯೆಗಳು ವರದಿಯಾಗುತ್ತಿರುವುದರ ಬಗ್ಗೆ KPCC ಕಳವಳ ವ್ಯಕ್ತಪಡಿಸುತ್ತದೆ. ಅವುಗಳಲ್ಲಿ ಪ್ರಮುಖವಾಗಿ:

  • ಗಣತಿ ನಮೂನೆಗಳು ಮತದಾರರಿಗೆ ತಲುಪದಿರುವುದು, ಸಂಗ್ರಹಿಸದಿರುವುದು ಅಥವಾ ಅವುಗಳ ಸರಿಯಾದ ಲೆಕ್ಕಪತ್ರ ನಿರ್ವಹಣೆಯಾಗದಿರುವುದು.

  • ಅರ್ಹ ಮತದಾರರನ್ನು ಹಿಂದಿನ SIR ದಾಖಲೆಗಳೊಂದಿಗೆ ಮ್ಯಾಪಿಂಗ್ ಆಗದ ಮತದಾರರೆಂದು ತೋರಿಸುತ್ತಿರುವುದು.

  • ಸಮರ್ಪಕ ಪರಿಶೀಲನೆಯಿಲ್ಲದೆ ಅರ್ಹ ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರೆಂದು ವರ್ಗೀಕರಿಸುತ್ತಿರುವುದು.

  • ವಿಶ್ವಾಸಾರ್ಹ ದಾಖಲೆಗಳ ಆಧಾರದ ಮೇಲೆ ಮೃತ ಮತದಾರರೆಂದು ವರ್ಗೀಕರಿಸಿರುವುದನ್ನು ದೃಢೀಕರಿಸುವ ಅಗತ್ಯವಿರುವುದು.

  • ಮೂಲ ಮತದಾರರ ಪಟ್ಟಿ, ಗಣತಿ ದಾಖಲೆಗಳು ಮತ್ತು ಪರಿಷ್ಕೃತ ಮತದಾರರ ಸ್ಥಿತಿಯ ನಡುವೆ  ನ್ಯೂನ್ಯತೆಗಳಿರುವುದು.

  • ವೈಯಕ್ತಿಕ ಮತದಾರರ ಹೆಸರಿನ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆಯುವಲ್ಲಿ ಮತದಾರರು ಮತ್ತು ಅವರ ಪ್ರತಿನಿಧಿಗಳು ಎದುರಿಸುತ್ತಿರುವ ತೊಂದರೆಗಳು.

  • ಸಂಬಂಧಪಟ್ಟ BLOಗಳು, ಮೇಲ್ವಿಚಾರಕರು, AEROಗಳು ಮತ್ತು EROಗಳಿಂದ ವಿಚಾರಣೆ ಹಾಗೂ ದೂರುಗಳಿಗೆ ಪ್ರತಿಕ್ರಿಯೆ ದೊರೆಯದಿರುವುದು ಅಥವಾ ಸಮರ್ಪಕ ಪ್ರತಿಕ್ರಿಯೆ ನೀಡದಿರುವುದು.ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಷ್ಕರಣೆ ಪ್ರಕ್ರಿಯೆಯನ್ನು ಭಾರತದ ಸಂವಿಧಾನ, ಜನತಾ ಪ್ರಾತಿನಿಧ್ಯ ಕಾಯ್ದೆ, 1950, ಮತದಾರರ ನೋಂದಣಿ ನಿಯಮಗಳು, 1960 ಹಾಗೂ ಭಾರತದ ಚುನಾವಣಾ ಆಯೋಗದ ಅನ್ವಯವಾಗುವ ನಿರ್ದೇಶನಗಳಿಗೆ ಅನುಗುಣವಾಗಿ ಕೈಗೊಳ್ಳಬೇಕು.

10 ಅಂಶಗಳ ಕ್ರಮಕ್ಕೆ ಮನವಿ

ರಾಜ್ಯಾದ್ಯಂತ ಮತಗಟ್ಟೆವಾರು ಅಂಕಿಅಂಶಗಳನ್ನು ಪರಿಶೀಲಿಸುವುದು, ಮ್ಯಾಪಿಂಗ್ ಆಗದ ಮತದಾರರು ಹಾಗೂ ಸ್ಥಳಾಂತರಗೊಂಡವರು–ಮೃತರೆಂದು ಗುರುತಿಸಲಾದವರ ವಿವರಗಳನ್ನು ಮರುಪರಿಶೀಲಿಸುವುದು, ಪರಿಣಾಮಕಾರಿ ದೂರು ಪರಿಹಾರ ವ್ಯವಸ್ಥೆ ಕಲ್ಪಿಸುವುದು ಹಾಗೂ ಮಾಹಿತಿಗೆ ಪಾರದರ್ಶಕವಾಗಿ ಅವಕಾಶ ನೀಡುವಂತೆ KPCC ಮನವಿ ಮಾಡಿದೆ.

ಅರ್ಹ ಮತದಾರರನ್ನು ತಪ್ಪಾಗಿ ಪಟ್ಟಿಯಿಂದ ಕೈಬಿಡದಂತೆ ಕ್ರಮ ಕೈಗೊಳ್ಳಬೇಕು. ದೋಷಗಳನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡುವುದು, ಆಡಳಿತಾತ್ಮಕ ಲೋಪಗಳಿಗೆ ಹೊಣೆಗಾರಿಕೆ ನಿಗದಿಪಡಿಸುವುದು ಹಾಗೂ ಕೈಗೊಂಡ ಕ್ರಮಗಳ ವರದಿಯನ್ನು ನಿಗದಿತ ಅವಧಿಯಲ್ಲಿ ನೀಡಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ, ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಚುನಾವಣಾ ಆಯೋಗದ ನಿಯಮ–ನಿರ್ದೇಶನಗಳಿಗೆ ಅನುಗುಣವಾಗಿ ನಡೆಯಬೇಕು. ಯಾವುದೇ ಆಡಳಿತಾತ್ಮಕ ಅಥವಾ ತಾಂತ್ರಿಕ ದೋಷದಿಂದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

Related posts