ಸ್ಥಳೀಯ ಉತ್ಪಾದನೆ, ನಾವೀನ್ಯತೆಗೆ ಒತ್ತು; ಸರ್ಕಾರ–ಉದ್ಯಮ–ಗ್ರಾಹಕರ ಸಹಭಾಗಿತ್ವಕ್ಕೆ ಕುಮಾರಸ್ವಾಮಿ ಕರೆ

ನವದೆಹಲಿ: ವಿದ್ಯುತ್ ವಾಹನಗಳ (ಇವಿ) ಕ್ಷೇತ್ರದಲ್ಲಿ ಎಲ್ಲರನ್ನೂ ಒಳಗೊಂಡ, ಕೈಗೆಟುಕುವ ಹಾಗೂ ಆರ್ಥಿಕವಾಗಿ ಸುಸ್ಥಿರ ಪರಿವರ್ತನೆ ಅಗತ್ಯವಿದ್ದು, ಸ್ಥಳೀಯ ಉತ್ಪಾದನೆ, ನಾವೀನ್ಯತೆ ಮತ್ತು ವೆಚ್ಚ ಸ್ಪರ್ಧಾತ್ಮಕತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.

ವಿದ್ಯುತ್ ವಾಹನಗಳ ಅಳವಡಿಕೆ ಕುರಿತು ನೆಲಮಟ್ಟದ ಪ್ರತಿಕ್ರಿಯೆ ಪಡೆಯಲು ಬೃಹತ್ ಕೈಗಾರಿಕೆಗಳ ಸಚಿವಾಲಯವು ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ದೇಶದ ವಿವಿಧ ಭಾಗಗಳ ಇವಿ ಬಳಕೆದಾರರು ಹಾಗೂ ವಿತರಕರೊಂದಿಗೆ ಅವರು ಸಂವಾದ ನಡೆಸಿದರು.

ಆತ್ಮನಿರ್ಭರ ಭಾರತ ನಿರ್ಮಾಣ ಮತ್ತು ವಿಕ್ಷಿತ್ ಭಾರತ್@2047 ಗುರಿ ಸಾಧನೆಗೆ ಸರ್ಕಾರ ಬದ್ಧವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಇವಿ ಅಳವಡಿಕೆ, ಚಾರ್ಜಿಂಗ್ ಮೂಲಸೌಕರ್ಯ, ಸುಧಾರಿತ ವಾಹನ ತಂತ್ರಜ್ಞಾನ ಹಾಗೂ ಬ್ಯಾಟರಿ ಸೆಲ್‌ಗಳ ದೇಶೀಯ ಉತ್ಪಾದನೆಗೆ ಪಿಎಂ ಇ-ಡ್ರೈವ್, ಪಿಎಲ್‌ಐ-ಆಟೋ ಮತ್ತು ಪಿಎಲ್‌ಐ-ಎಸಿಸಿ ಯೋಜನೆಗಳು ನೆರವಾಗುತ್ತಿವೆ ಎಂದರು.

ಇವಿ ಬಳಕೆದಾರರು ವೈಯಕ್ತಿಕ ಸಾರಿಗೆ, ಜೀವನೋಪಾಯ, ಸಾರ್ವಜನಿಕ ಸಾರಿಗೆ ಮತ್ತು ಸರಕು ಸಾಗಣೆಯಲ್ಲಿ ವಿದ್ಯುತ್ ವಾಹನಗಳ ಬಳಕೆಯ ಅನುಭವ ಹಂಚಿಕೊಂಡರು. ಇ-ದ್ವಿಚಕ್ರ ವಾಹನ ಬಳಕೆದಾರರು ಕಡಿಮೆ ಚಾಲನಾ ವೆಚ್ಚದ ಪ್ರಯೋಜನ ತಿಳಿಸಿದರೆ, ಇ-ತ್ರಿಚಕ್ರ ವಾಹನ ಚಾಲಕಿ ಸುನೀತಾ ಚೌಧರಿ ಕಡಿಮೆ ವೆಚ್ಚದ ಜತೆಗೆ ಚಾಲನಾ ಆಯಾಸವೂ ಕಡಿಮೆಯಾಗುತ್ತದೆ ಎಂದರು. ಇ-ಕಾರಿನ ಮೂಲಕ ಪ್ರಯಾಣಿಕರ ಸಾರಿಗೆ ನಡೆಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯಿತು.

ಇವಿ ಬಳಕೆಯಿಂದ ಶುದ್ಧ ಸಾರಿಗೆಗೆ ಕೊಡುಗೆ ನೀಡುವುದರ ಜತೆಗೆ ಕಚ್ಚಾ ತೈಲ ಆಮದು ಅವಲಂಬನೆ ಕಡಿಮೆಯಾಗುತ್ತದೆ ಎಂದು ಸಚಿವರು ಹೇಳಿದರು. ಸರ್ಕಾರ, ಕೈಗಾರಿಕೆ, ವಿತರಕರು ಮತ್ತು ಗ್ರಾಹಕರು ಒಟ್ಟಾಗಿ ಕಾರ್ಯನಿರ್ವಹಿಸಿ ಜಾಗತಿಕವಾಗಿ ಸ್ಪರ್ಧಾತ್ಮಕ ಇವಿ ಪರಿಸರ ವ್ಯವಸ್ಥೆ ರೂಪಿಸಬೇಕು ಎಂದರು.

ಭಾರೀ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮ್ರಾನ್ ರಿಜ್ವಿ, ಇವಿ ಕ್ಷೇತ್ರವು ಭಾರತವನ್ನು ಜಾಗತಿಕ ಆಟಗಾರನನ್ನಾಗಿ ಬೆಳೆಸುವ ಅವಕಾಶ ಹೊಂದಿದೆ ಎಂದರು. FADA, SIAM ಮತ್ತು ACMA ಪ್ರತಿನಿಧಿಗಳು ಸಹ ಉದ್ಯಮದ ಬೆಳವಣಿಗೆ ಕುರಿತು ಅಭಿಪ್ರಾಯ ಹಂಚಿಕೊಂಡರು.

Related posts