‘ಬೆಂಗಳೂರಿನ ಹಸಿರು ಪ್ರದೇಶ ಬಲಿಕೊಡಬೇಡಿ’; ಸಿಎಂಗೆ ತೇಜಸ್ವಿ ಸೂರ್ಯ ತೀವ್ರ ಆಕ್ಷೇಪ

ಬೆಂಗಳೂರು: ಬೆಂಗಳೂರಿನ ಸಾರ್ವಜನಿಕ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವ ಸರ್ಕಾರದ ಕ್ರಮಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮ ‘X’ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಪೋಸ್ಟ್ ಮಾಡಿರುವ ಅವರು, “ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿರುವ ಐತಿಹಾಸಿಕ ಬೆಂಗಳೂರಿನ ಭವಿಷ್ಯವನ್ನೇ ಹಾಳು ಮಾಡಲು ಅದ್ಹೇಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ?” ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ‘ಗಾರ್ಡನ್ ಸಿಟಿ’ ಎಂಬ ಹೆಗ್ಗಳಿಕೆ ಸರ್ಕಾರದ ಕೊಡುಗೆಯಲ್ಲ. ಹಲವು ತಲೆಮಾರುಗಳ ಜನರ ಪರಿಶ್ರಮದಿಂದ ಉಳಿದಿರುವ ಹಸಿರಿನಿಂದ ನಗರ ಈ ಸ್ಥಾನ ಪಡೆದಿದೆ ಎಂದು ಅವರು ಹೇಳಿದ್ದಾರೆ.

‘ಪಾರ್ಕ್‌ಗಳು ರಿಯಲ್ ಎಸ್ಟೇಟ್‌ಗಾಗಿ ಖಾಲಿ ಜಾಗವಲ್ಲ’

ಪಾರ್ಕ್‌ಗಳು ರಿಯಲ್ ಎಸ್ಟೇಟ್‌ಗಾಗಿ ಮೀಸಲಿಟ್ಟ ಖಾಲಿ ಜಾಗವಲ್ಲ, ಅವು ನಗರದ “ಶ್ವಾಸಕೋಶ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಈಗಾಗಲೇ ಕಾಂಕ್ರೀಟೀಕರಣ, ವಾಯುಮಾಲಿನ್ಯ, ಹೆಚ್ಚುತ್ತಿರುವ ನಗರ ಉಷ್ಣತೆ ಹಾಗೂ ಮಳೆನೀರು ಸಮಸ್ಯೆಯಿಂದ ಬೆಂಗಳೂರು ತೊಂದರೆ ಅನುಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ ಉಳಿದ ಹಸಿರು ಪ್ರದೇಶಗಳ ಮೇಲೂ ಒತ್ತಡ ಹೇರುವುದು ಯಾವ ರೀತಿಯ ಅಭಿವೃದ್ಧಿ ಎಂದು ಪ್ರಶ್ನಿಸಿದ್ದಾರೆ.

ಉದ್ಯಾನವನಗಳ ಶೇ.5ರಷ್ಟು ಜಾಗ ಬಳಕೆಗೆ ಅವಕಾಶ ನೀಡಿದರೆ, ಮುಂದೆ ಮತ್ತಷ್ಟು ಹಸಿರು ಪ್ರದೇಶಗಳ ಮೇಲೂ ಒತ್ತಡ ಹೆಚ್ಚಬಹುದು. ಒಮ್ಮೆ ಪಾರ್ಕ್ ಕಳೆದುಕೊಂಡರೆ ಅದನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಯಾವುದೇ ಯೋಜನೆಗೆ ಜಾಗದ ಅಗತ್ಯವಿದ್ದರೆ ಪರ್ಯಾಯ ಸರ್ಕಾರಿ ಜಾಗಗಳನ್ನು ಗುರುತಿಸಬೇಕು, ಹಸಿರು ಪ್ರದೇಶಗಳನ್ನು ಬಲಿಕೊಡಬಾರದು ಎಂದು ಆಗ್ರಹಿಸಿದ್ದಾರೆ.

“ಕೆಂಪೇಗೌಡರು ಕಟ್ಟಿದ ಬೆಂಗಳೂರು, ತಲೆಮಾರುಗಳು ಉಳಿಸಿದ ಬೆಂಗಳೂರು ಯಾರೊಬ್ಬರ ರಿಯಲ್ ಎಸ್ಟೇಟ್ ಪ್ರಯೋಗಾಲಯವಲ್ಲ” ಎಂದು ಟೀಕಿಸಿರುವ ಅವರು, ಬೆಂಗಳೂರಿನ ಹಸಿರು ಪ್ರದೇಶಗಳ ಕುರಿತ ನಿರ್ಧಾರವನ್ನು ತಕ್ಷಣ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Related posts