ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ವಿರುದ್ಧ ₹3.85 ಕೋಟಿ ವಂಚನೆ ಆರೋಪ ಕೇಳಿಬಂದಿದೆ. ‘ಫೀನಿಕ್ಸ್’ ಸಿನಿಮಾ ನಿರ್ಮಾಣದ ಹೆಸರಿನಲ್ಲಿ ಹಣ ಪಡೆದು ವಾಪಸ್ ನೀಡಿಲ್ಲ ಎಂದು ಆರೋಪಿಸಿ ಭಾಸ್ಕರ್ ಶೆಟ್ಟಿ ಸೇರಿದಂತೆ ನಾಲ್ವರು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಸಿನಿಮಾ ನಿರ್ಮಾಣಕ್ಕಾಗಿ ಓಂ ಪ್ರಕಾಶ್ ರಾವ್ ಅವರು ಹಂತ ಹಂತವಾಗಿ ಒಟ್ಟು ₹3.85 ಕೋಟಿ ಹಣ ಪಡೆದಿದ್ದರು. ಆರು ತಿಂಗಳಲ್ಲಿ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರೂ, ಮೂರು ವರ್ಷ ಕಳೆದರೂ ಹಣ ಹಿಂದಿರುಗಿಸಿಲ್ಲ ಎಂದು ಆರೋಪಿಸಲಾಗಿದೆ.
ಭಾಸ್ಕರ್ ಶೆಟ್ಟಿ ಅವರು ಈ ಹಿಂದೆ ‘ಯೋಧ’ ಚಿತ್ರದಲ್ಲಿ ಓಂ ಪ್ರಕಾಶ್ ರಾವ್ ಅವರೊಂದಿಗೆ ಕೆಲಸ ಮಾಡಿದ್ದರು. ಈ ವೃತ್ತಿಪರ ಪರಿಚಯದ ಹಿನ್ನೆಲೆಯಲ್ಲಿ ನಿರ್ದೇಶಕರನ್ನು ನಂಬಿ ಹಣ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಹಣ ವಾಪಸ್ ಕೇಳಿದಾಗ ವಿವಿಧ ಕಾರಣಗಳನ್ನು ನೀಡಿ ಕಾಲಹರಣ ಮಾಡಲಾಗುತ್ತಿತ್ತು. ಬಳಿಕ ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಹಣ ಕೇಳಲು ನಿರ್ದೇಶಕರ ನಿವಾಸಕ್ಕೆ ತೆರಳಿದ ವೇಳೆ ತಮ್ಮನ್ನು ನಿಂದಿಸಿ, ಅವಮಾನಿಸಿ ಹಾಗೂ ಬೆದರಿಕೆ ಹಾಕಲಾಗಿದೆ ಎಂದು ಭಾಸ್ಕರ್ ಶೆಟ್ಟಿ ದೂರಿದ್ದಾರೆ.
ದೂರಿನಲ್ಲಿ ವಾಸುದೇವರೆಡ್ಡಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಅವರ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ. ಭಾಸ್ಕರ್ ಶೆಟ್ಟಿಯಿಂದ ₹40 ಲಕ್ಷ ಹಾಗೂ ವಾಸುದೇವರಿಂದ ₹3 ಕೋಟಿಗೂ ಅಧಿಕ ಹಣ ಪಡೆದಿರುವುದಾಗಿ ಆರೋಪಿಸಲಾಗಿದೆ.

