ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಎಲ್ಲೆಲ್ಲೂ ಗುಂಡಿಗಳು.. ನಗರ ತುಂಬೆಲ್ಲಾ ಧೂಳು.. ಜನ ಬದುಕುವುದೇ ಕಷ್ಟ.. ಈ ದುಸ್ಥಿತಿ ಬಗ್ಗೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಬಹಿರಂಗ ಪತ್ರ ಬರೆದಿರುವ ತೇಜಸ್ವಿ ಸೂರ್ಯ, ಸಾರ್ವಜನಿಕರ ದೂರುಗಳನ್ನಾಧರಿಸಿ ಬೆಂಗಳೂರು ನಗರದ ಅವ್ಯವಸ್ಥೆ ಬಗ್ಗೆ ಗಮನಸೆಳೆದಿದ್ದಾರೆ.
‘ಭಾನುವಾರ ಬೆಳಿಗ್ಗೆ ಟಿಸಿಎಸ್ ವರ್ಲ್ಡ್ 10K ಕಾರ್ಯಕ್ರಮದಲ್ಲಿ ನೀವಿಬ್ಬರೂ ಭಾಗವಹಿಸಿರುವುದು ನೋಡಿ ಸಂತಸವಾಯಿತು. ಈ ತರಹದ ಕಾರ್ಯಕ್ರಮಗಳು ನಮ್ಮ ಬೆಂಗಳೂರಿನ ಬ್ರ್ಯಾಂಡ್ ಮೌಲ್ಯ ಹೆಚ್ಚಿಸುವುದಕ್ಕೆ ಮತ್ತು ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಲು ತೊಡಗಿಸಿಕೊಂಡಿರುವುದು ಗಮನಾರ್ಹ’ ಎಂದು ಹೊಗಳುತ್ತಲೇ, ‘ನಾನು ಬೆಂಗಳೂರು ಸಂಸದನಾಗಿ ಮಾತ್ರವಲ್ಲ, ಒಬ್ಬ ಓಟಗಾರನಾಗಿ, ನಾಗರಿಕನಾಗಿ, ಅತ್ಯಂತ ನೋವಿನಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ’ ಎಂದು ಅಸಮಾಧಾನವನ್ನೂ ಹೊರಹಾಕಿದ್ದಾರೆ.
ಭಾನುವಾರದ ಓಟದಲ್ಲಿ ಜಗತ್ತಿನ ಶ್ರೇಷ್ಠ ಅಥ್ಲೀಟ್ ಗಳು, ಹಿರಿಯ ನಾಗರಿಕರು, ಸಾಮಾನ್ಯ ನಾಗರಿಕರು ಸೇರಿದಂತೆ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ, ಅವರೆಲ್ಲರೂ ಸುಂದರ ಓಟದ ಬದಲು, ಗುಂಡಿಗಳ ಓಟ, ಧೂಳಿನ ಓಟ, ಅಪಾಯದಿಂದ ಕೂಡಿದ ಓಟ ಎಂಬ ಅನುಭವ ಪಡೆದದ್ದು ಬಹಳ ಬೇಸರದ ಸಂಗತಿ ಎಂದಿರುವ ತೇಜಸ್ವಿ ಸೂರ್ಯ, ನಗರದ ಹೃದಯವಾಗಿರುವ ಸಿಬಿಡಿ ರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಒಂದು ಸಣ್ಣ ಸುಗಮ ರಸ್ತೆ ಕೂಡ ಇಲ್ಲದ್ದು . ಎಲ್ಲೆಲ್ಲೂ ಗುಂಡಿಗಳು. ಓಟಗಾರರು ಮುಗ್ಗರಿಸಿದ್ದು ಗಾಯಗೊಂಡಿದ್ದು, ಹಿರಿಯ ನಾಗರಿಕರು ಹೆಜ್ಜೆ ಹಾಕಲು ಹೆದರುವ ಸ್ಥಿತಿ ಉಂಟಾಗಿದ್ದು ಸಮಂಜಸ ಉಂಟು ಮಾಡಿದ್ದು ಸುಳ್ಳಲ್ಲ. ವೀಲ್ಚೇರ್ನಲ್ಲಿ ಓಡಿದವರು ಸ್ವಂತ ಶಕ್ತಿಯಿಂದ ಸಾಗಲಾರದೆ, ಅನ್ಯರ ಸಹಾಯ ಪಡೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದರ ಜೊತೆಗೆ ಅನೇಕ ಸ್ಥಳಗಳಲ್ಲಿ ಕಸದ ರಾಶಿಗಳು, ಅನೈರ್ಮೈಲದ ಬದಿಗಳು, ಮುರಿದ ಪಾದಚಾರಿ ಮಾರ್ಗಗಳು ಇವು ಬ್ರ್ಯಾಂಡ್ ಬೆಂಗಳೂರಿನ ಚಿತ್ರಣಗಳಾಗಿದ್ದವು ಎಂದು ತಮ್ಮ ಪತ್ರದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದು ವರ್ಲ್ಡ್ ಅಥ್ಲೆಟಿಕ್ಸ್ ಪ್ರಮಾಣಿತ ಗೋಲ್ಡ್ ಲೇಬಲ್ ಈವೆಂಟ್ ಆಗಿದ್ದು. ಜಗತ್ತಿನ ನೂರಾರು ಅತಿಥಿಗಳು ನಮ್ಮತ್ತ ಗಮನಿಸುತ್ತಿದ್ದು, ಈ ಬಗ್ಗೆ ಸೂಕ್ತ ಗಮನ ಹರಿಸಿ ಬ್ರ್ಯಾಂಡ್ ಬೆಂಗಳೂರಿನ ಮೌಲ್ಯವನ್ನು ಹೆಚ್ಚಿಸುವಂತೆ ಆಗ್ರಹಿಸಿರುವ ಅವರು, ಕೇವಲ 2 ತಿಂಗಳುಗಳ ಹಿಂದೆ ನಾನು ಮುಂಬಯಿಯಲ್ಲಿ ನಡೆದ ಮ್ಯಾರಥಾನ್ ನಲ್ಲಿಯೂ ಭಾಗವಹಿಸಿದ್ದು, ಅಲ್ಲಿನ ಅನುಭವ ಇಷ್ಟೊಂದು ಕಳಪೆ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.
ಕೇವಲ TCS 10ಕೆ ಹಿನ್ನೆಲೆಯಿಂದ ಮಾತ್ರ ನೋಡದೆ, ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ತಾವುಗಳು ವಿಶೇಷ ಕಾಳಜಿ ವಹಿಸಿ, ಸಾರ್ವಜನಿಕರ ಅನುಕೂಲಕ್ಕೆ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.