ಮುಂಬೈ ದಾಳಿಕೋರ ತಹವ್ವೂರ್ ರಾಣಾನನ್ನು ಕರೆತಂದ ಮೋದಿ ಸರ್ಕಾರಕ್ಕೆ ಅಭಿನಂದನೆ ಎಂದ ಇಸ್ರೇಲ್

ನವದೆಹಲಿ: 26/11 ರ ಸಂಚುಕೋರ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸುವುದನ್ನು ಸ್ವಾಗತಿಸಿರುವ ಇಸ್ರೇಲ್, ಭಯೋತ್ಪಾದಕರ ವಿರುದ್ದದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೋರಿದ ನಿರಂತರ ಪ್ರಯತ್ನಕ್ಕೆ ಸಂದ ಜಯ ಎಂದು ಬಣ್ಣಿಸಿದೆ.

“2008 ರ ನವೆಂಬರ್ 26 ರಂದು ಮುಂಬೈನಲ್ಲಿ ನಡೆದ ಭೀಕರ ಮತ್ತು ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಇಸ್ರೇಲಿಗಳು ಸೇರಿದಂತೆ 170 ಕ್ಕೂ ಹೆಚ್ಚು ಅಮಾಯಕ ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ರೂವಾರಿಗಳಲ್ಲಿ ಒಬ್ಬನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಕೇಳಲು ನಮಗೆ ಖುಷಿಯಾಗುತ್ತಿದೆ. ಭಯೋತ್ಪಾದಕರನ್ನು ಕಾನೂನಿನಡಿ ತರುವಲ್ಲಿ ಭಾರತ ಸರ್ಕಾರ ತೋರಿದ ನಿರಂತರ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಹೇಳಿದ್ದಾರೆ. .

2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ತಹವ್ವೂರ್ ರಾಣಾ ಅವರನ್ನು ವಿಶೇಷ ವಿಮಾನದ ಮೂಲಕ ಗುರುವಾರ ಅಮೆರಿಕದಿಂದ ಭಾರತಕ್ಕೆ ಕರೆತರಲಾಲಾಗಿದೆ.

ಮುಂಬೈನಲ್ಲಿ, ಮಧ್ಯಪಶ್ಚಿಮ ಭಾರತದ ಇಸ್ರೇಲ್ ಕಾನ್ಸುಲೇಟ್ ಜನರಲ್ ಕೊಬ್ಬಿ ಶೋಶಾನಿ, ಈ ಬೆಳವಣಿಗೆ 2008 ರ ಮುಂಬೈ ಭಯೋತ್ಪಾದಕ ದಾಳಿಯ ನೂರಾರು ಬಲಿಪಶುಗಳು ಮತ್ತು ಅವರ ಕುಟುಂಬಗಳಿಗೆ ಸ್ವಲ್ಪ ಮಟ್ಟಿಗೆ ನಿರಾಳತೆಯನ್ನು ತರುತ್ತದೆ ಎಂದರು.

“ಮೊದಲನೆಯದಾಗಿ, ಭಾರತವನ್ನು ಅಭಿನಂದಿಸಲು ಬಯಸುತ್ತೇನೆ. ಇದು ಭಾರತೀಯ ರಾಜತಾಂತ್ರಿಕತೆಗೆ, ವಿಶೇಷವಾಗಿ ಪ್ರಧಾನಿ ಮೋದಿ ಸರ್ಕಾರಕ್ಕೆ ಒಂದು ದೊಡ್ಡ ಯಶಸ್ಸು ಎಂದು ನಾನು ಭಾವಿಸುತ್ತೇನೆ. ಹಲವು ವರ್ಷಗಳ ನಂತರ, ಭಾರತವು ಅವರನ್ನು ನ್ಯಾಯಾಲಯವನ್ನು ಎದುರಿಸಲು ಮತ್ತು 26/11 ರಂದು ಏನಾಯಿತು ಎಂಬುದನ್ನು ಮುಚ್ಚಲು ಇಲ್ಲಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ ಎಂದು ನಾವು ತುಂಬಾ ಸಂತೋಷಪಡುತ್ತೇವೆ” ಎಂದು ಶೋಶಾನಿ ಪ್ರತಿಕ್ರಿಯಿಸಿದ್ದಾರೆ.

Related posts