ಚೆನ್ನೈ: ತಮಿಳುನಾಡಿನಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳನ್ನು ಗುರಿಯಾಗಿಸಿಕೊಂಡು ನಡೆದ ಸುಮಾರು ₹100 ಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿ.ಟಿ. ಅರಸಕುಮಾರ್ (59) ವಿರುದ್ಧ ಚೆನ್ನೈ ಪೊಲೀಸರು ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದ್ದ ಅರಸಕುಮಾರ್, ರಾಜಕೀಯ ಪ್ರಭಾವ ಹಾಗೂ ಸರ್ಕಾರಿ ಇಲಾಖೆಗಳ ಸಂಪರ್ಕ ಬಳಸಿಕೊಂಡು ಶಾಲೆಗಳಿಗೆ ಶಾಶ್ವತ ಮಾನ್ಯತೆ, ದರ್ಜೆ ಉನ್ನತೀಕರಣ, ಡಿಟಿಸಿಪಿ, ಸಿಎಂಡಿಎ ಅನುಮೋದನೆ, ನಿರಾಕ್ಷೇಪಣಾ ಪ್ರಮಾಣಪತ್ರ ಸೇರಿದಂತೆ ವಿವಿಧ ಸರ್ಕಾರಿ ಅನುಮತಿಗಳನ್ನು ಪಡೆಯಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ.

ತಮಿಳುನಾಡಿನ ಖಾಸಗಿ ಶಾಲೆಗಳ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಡಿ.ಸಿ. ಇಳಂಗೋವನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಹಾಗೂ ಮುಂದಿನ ವಂಚನೆ ತಡೆಯುವ ಉದ್ದೇಶದಿಂದ ತಡೆಗಟ್ಟುವ ಬಂಧನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿಯವರೆಗೆ 47 ಖಾಸಗಿ ಶಾಲೆಗಳ ಪ್ರತಿನಿಧಿಗಳು ದೂರು ನೀಡಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದ ವಂಚನೆ ಮೊತ್ತವೇ ₹7 ಕೋಟಿಗೂ ಅಧಿಕ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ವಂಚನೆ ₹100 ಕೋಟಿಗೂ ಹೆಚ್ಚು ಇರಬಹುದೆಂದು ಶಂಕಿಸಲಾಗಿದೆ.

