ತಾರಾಪೀಠ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ: 7 ಮಂದಿ ಸಾವು

ಕೋಲ್ಕತ್ತ: ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಾರಾಪೀಠದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾರಾಪೀಠ ಪೊಲೀಸ್ ಠಾಣೆಯಿಂದ ಕೆಲವೇ ದೂರದಲ್ಲಿರುವ ನಾಲ್ಕು ಅಂತಸ್ತಿನ ಖಾಸಗಿ ಹೋಟೆಲ್ ‘ಬಿದೇಶಿನಿ’ಯ ನೆಲಮಹಡಿಯಲ್ಲಿ ಬೆಳಗ್ಗೆ ಸುಮಾರು 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಆ ವೇಳೆ ಬಹುತೇಕ ಅತಿಥಿಗಳು ಗಾಢ ನಿದ್ದೆಯಲ್ಲಿದ್ದರಿಂದ ದಟ್ಟ ಹೊಗೆ ಮತ್ತು ಬೆಂಕಿಯಿಂದ ಹೊರಬರಲು ಪರದಾಡುವಂತಾಯಿತು.

ಬೆಂಕಿ ಕೆಲವೇ ಕ್ಷಣಗಳಲ್ಲಿ ಹೋಟೆಲ್‌ನ ಇತರ ಭಾಗಗಳಿಗೂ ವ್ಯಾಪಿಸಿದ್ದು, ಇಡೀ ಕಟ್ಟಡ ದಟ್ಟ ಹೊಗೆಯಿಂದ ಆವೃತವಾಗಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ರಕ್ಷಣಾ ಸಿಬ್ಬಂದಿ ಹೋಟೆಲ್‌ನಿಂದ ಗಾಯಾಳುಗಳನ್ನು ಹೊರತೆಗೆದು ರಾಂಪುರಹಾಟ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶ್ರಾವಣ ಮಾಸದ ಸೋಮವಾರವಾಗಿದ್ದರಿಂದ ತಾರಾಪೀಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೀಗಾಗಿ ಹೋಟೆಲ್‌ಗಳಲ್ಲೂ ಹೆಚ್ಚಿನ ಜನಸಂದಣಿ ಇತ್ತು ಎನ್ನಲಾಗಿದೆ.

Related posts