ಬಿಡದಿ ಟೌನ್‌ಶಿಪ್ ವಿವಾದ; CM ಎಂದರೆ ‘Chief Minister’ ಅಲ್ಲ, ಅದು ‘Commission Minister’ ಎಂದ ಅಶೋಕ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರನ್ನು ಕಮೀಷನ್ ಮಿನಿಸ್ಟರ್ ಎಂದಿರುವ ಪ್ರತಿಪಕ್ಷ ನಾಯಕ ಡಿ.ಕೆ.ಶಿವಕುಮಾರ್, ರೈತರ ಜಮೀನಿನ ಮೇಲೆ ಬುಲ್ಡೋಜರ್ ಓಡಿಸಿ, ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಲು ಹೊರಟಿರುವ ಅವರೇ, ಅನ್ನದಾತರಆಕ್ರೋಶದ ಜ್ವಾಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಸ್ಮವಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸುಮಾರು 470 ದಿನಗಳಿಂದ ಅನ್ನದಾತರು ನಡೆಸುತ್ತಿರುವ ಹೋರಾಟ, ಕಣ್ಣೀರು ಮತ್ತು ಆಕ್ರೋಶವನ್ನು ಲೆಕ್ಕಿಸದೆ, ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ 499 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ಅಂತಿಮ ಅಧಿಸೂಚನೆ ಹೊರಡಿಸಿರುವುದು ಕಾಂಗ್ರೆಸ್ ಸರ್ಕಾರದ ನಿಜವಾದ ಮುಖವನ್ನು ಬಯಲು ಮಾಡಿದೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ರೈತರನ್ನು ನೀವು ದುರ್ಬಲರೆಂದು ಭಾವಿಸಿದ್ದರೆ ಅದು ನಿಮ್ಮ ದೊಡ್ಡ ತಪ್ಪು! ಇನ್ನು ಕೇವಲ ಒಂದೂವರೆ ವರ್ಷದಲ್ಲಿ ನಿಮ್ಮ ಈ ಜನವಿರೋಧಿ ಸರ್ಕಾರ ಇತಿಹಾಸದ ಪುಟ ಸೇರಲಿದೆ ಎಂದು ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಪ್ರತಿಕ್ರಿಯಿಸಿದ್ದಾರೆ.

2028ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಈ ಇಡೀ ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯನ್ನು ಅಧಿಕೃತವಾಗಿ ರದ್ದುಪಡಿಸಲಾಗುವುದು. ರೈತರಿಗೆ ಕೊಟ್ಟಿರುವ ಮಾತನ್ನು ನಾವು ಖಂಡಿತ ಉಳಿಸಿಕೊಳ್ಳುತ್ತೇವೆ.

ರೈತರ ತೀವ್ರ ವಿರೋಧದ ನಡುವೆಯೂ ಇಷ್ಟೊಂದು ಆತುರಾತುರವಾಗಿ ಭೂಮಿ ಕಬಳಿಸಲು ಹೊರಟಿರುವುದರ ಹಿಂದಿನ ಅಸಲಿ ರಹಸ್ಯವೇನು? ನಿಮ್ಮ ಬಿಲ್ಡರ್ ಮಾಫಿಯಾದ ಜೇಬು ತುಂಬಿಸುವ ರಿಯಲ್ ಎಸ್ಟೇಟ್ ಅಜೆಂಡಾವೇ ಇದಕ್ಕೆ ಕಾರಣವಲ್ಲವೇ? ಎಂದು ಪ್ರಶ್ನಿಸಿರುವ ಅಶೋಕ್, ಬೆಂಗಳೂರಿನ ಕಸದ ಟೆಂಡರ್‌ನಲ್ಲೂ ಸಾವಿರಾರು ಕೋಟಿ ಕಮಿಷನ್ ವಾಸನೆ ಹೊಡೆದ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ, ಈಗ ಅನ್ನದಾತರ ಜಮೀನಿನಲ್ಲೂ ರಿಯಲ್ ಎಸ್ಟೇಟ್ ಬಂಗಾರ ಹುಡುಕಲು ಹೊರಟಿದೆ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಆಡಳಿತದಲ್ಲಿ CM ಎಂದರೆ “Chief Minister” ಅಲ್ಲ, ಅದು “Commission Minister”, “Corruption Minister” ಎಂಬ ಹೆಸರನ್ನು ನೀವೇ ಸ್ವತಃ ಸಂಪಾದಿಸಿಕೊಂಡಿದ್ದೀರಿ ಎಂದು ಟೀಕಿಸಿರುವ ಅಶೋಕ್, ಅನ್ನದಾತರ ಹೊಟ್ಟೆಗೆ ಹೊಡೆದು ಕಟ್ಟುವ ಯಾವುದೇ ಟೌನ್‌ಶಿಪ್ ಅಭಿವೃದ್ಧಿಯಲ್ಲ, ಅದು ರೈತರ ಭವಿಷ್ಯದ ಸಮಾಧಿ ಎಂದಿದ್ದಾರೆ.

ಈ ಹೋರಾಟ ಕೇವಲ 499 ಎಕರೆ ಜಮೀನಿಗಾಗಿ ಅಲ್ಲ; ಇದು ರೈತರ ಹಕ್ಕು, ಗೌರವ ಮತ್ತು ಬದುಕಿನ ಹೋರಾಟ. ಸರ್ಕಾರ ಕೂಡಲೇ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯದ ರೈತರ ಆಕ್ರೋಶದ ಜ್ವಾಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಸ್ಮವಾಗಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

Related posts